Friday, December 4, 2009

ವಾಸ್ತವ: ಮತ್ತೆ ಮೈತಳೆದ ಅಜ್ಞಾತ ದೇವಾಲಯ

ವಾಸ್ತವ: ಮತ್ತೆ ಮೈತಳೆದ ಅಜ್ಞಾತ ದೇವಾಲಯ

ಮತ್ತೆ ಮೈತಳೆದ ಅಜ್ಞಾತ ದೇವಾಲಯ






ಬರೋ ಬರಿ ಎಂಟು ವರ್ಷಗಳ ಕಾಲ ಸಾಂಸ್ಕೃತಿಕ ರಾಜ್ಯದಾನಿ ಮೈಸೂರಿನಲ್ಲಿ ಕಳೆದ ನನಗೆ ಅಲ್ಲಿಯ ಆಸುಪಾಸಿನ ಎಲ್ಲಾ ಸ್ಥಳಗಳ ಪರಿಚಯವೂ ಇದೆ. ಎಲ್ಲವೂ ಮತ್ತೊಮ್ಮೆ ಮಗದೊಮ್ಮೆ ನೋಡಿರುವ ಸ್ಥಳಗಳೇ ಆಗಿರುವುದರಿಂದ ಹೊಸ ಹೊಸ ಅನುಭವ ಹೊಂದುವುದು ದುಸ್ಥರವೇ ಸರಿ. ಮೊನ್ನೆ ಮೊನ್ನೆ ಮೈಸೂರಿಗೆ ಹೋದ ಸಂದರ್ಭ ನಾಲ್ಕು ಗೋಡೆಗಳ ಮಧ್ಯೆ ಹರಟೆ ಹೊಡೆಯುವುದಕ್ಕಿಂತಲೂ ಆತ್ಮೀಯರೊಂದಿಗೆ ಸ್ವತಂತ್ರವಾಗಿ ಓಡಾಡಿಕೊಂಡು ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಬೇಕೆನಿಸಿತು ಎಲ್ಲವೂ ನೋಡಿರುವ ಸ್ಥಳಗಳೇ ಆಗಿರುವುದರಿಂದ ಎಲ್ಲಿಗೆ ಹೋಗುವುದು? ಅಲ್ಲಿ ನಮಗೆ ಸಿಗುವ ಮನೋಲ್ಲಾಸವಾದರೂ ಎಷ್ಟು ಪ್ರಮಾಣದ್ದು ಎಂಬ ಲೆಕ್ಕಾಚಾರವೇ ಮೇಲಾಯ್ತು. ಹಾಗಿದ್ದರೆ ಐತಿಹಾಸಿಕವಾಗಿ ಪ್ರವಾಸಿಗರ ಸ್ವರ್ಗ ಎಂದೆನಿಸಿಕೊಂಡಿರುವ ಮಹಿಷನೂರಿನಂತಹ ಮೈಸೂರು ಇಷ್ಟು ಬೇಗ ಆಕರ್ಷಣೆ ಕಳೆದುಕೊಂಡಿತೆ ಎಂಬ ಪ್ರಶ್ನೆಗಳು ಮನದಾಳದಲ್ಲಿ ಮೂಡತೊಡಗಿದವು. ಆ ಕ್ಷಣದಲ್ಲಿ ಇದ್ದಕ್ಕಿದಂತೆ ನೆನಪಾಗಿದ್ದು ಇಷ್ಟು ವರ್ಷಗಳ ಕಾಲ ಕಳೆದು ಹೋಗಿದ್ದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ.

ಹಲವು ವರ್ಷಗಳ ಹಿಂದೆಯೇ ಇತಿಹಾಸದ ಕಾಲಗರ್ಭದಲ್ಲಿ ಲೀನವಾಗಿ ಕೆಆರ್ಎಸ್ ನ ಹಿನ್ನೀರಿನಲ್ಲಿ ಮುಳುಗಿ ಮರೆಯಾಗಿದ್ದ ಹೊಯ್ಸಳ ಶೈಲಿಯ ದೇವಾಲಯವೊಂದು ಮೈಸೂರು ಇತಿಹಾಸದ ಪುಟಗಳನ್ನು ಪುನಹ ಆಕ್ರಮಿಸಿಕೊಳ್ಳುವ ಪ್ರಯತ್ನದಲ್ಲಿದೆ ಎಂಬುದರ ಅರಿವಾಗಿದ್ದು ವೇಣುಗೋಪಾಲಸ್ವಾಮಿ ದೇವಾಲಯದ ಅಂಗಳದಲ್ಲಿ ನಿಂತು ನೋಡಿದಾಗಲೇ. ಹೌದು ಪ್ರವಾಸಿಗರ ಊರು ಎಂದೆನಿಸಿಕೊಂಡಿರುವ ಮೈಸೂರಿನ ಕಿರೀಟಕ್ಕೆ ಈಗ ಮತ್ತೊಂದು ಗರಿ ಸೇರ್ಪಡೆಗೊಳ್ಳುತ್ತಿದೆ. 1909ರಲ್ಲಿ ಕನಂಬಾಡಿ ಬಳಿ ನಾಡಿನ ಜೀವನದಿ ಕಾವೇರಿಗೆ ಅಣೆ ನಿರ್ಮಿಸಬೇಕು ಎಂದು ಯೋಜನೆ ತಯಾರಾದಾಗಲೇ ಈ ದೇವಾಲಯ ಮುಳುಗಡೆಯಾಗಲಿದೆ ಎಂಬುದು ಖಚಿತವಾಗಿತ್ತು ಆದರೆ ಆ ಹೊತ್ತಿಗೆ ಅದನ್ನು ರಕ್ಷಿಸಲು ಯಾರೂ ಮುಂದೆ ಬಂದಿರಲಿಲ್ಲ. 1930ರಲ್ಲಿ ಕೃಷ್ಣರಾಜ ಸಾಗರ ಯೋಜನೆ ಪೂರ್ಣಗೊಂಡಾಗ ಈ ದೇವಾಲಯ ಕೆಆರ್ಎಸ್ ಹಿನ್ನೀರಿನಲ್ಲಿ ಮುಳುಗಿ ಹೋಗಿತ್ತು. 2000ನೇ ಇಸವಿ ನಂತರ ರಾಜ್ಯದಲ್ಲಿ ಮೇಲಿಂದ ಮೇಲೆ ವಾರ್ಷಿಕವಾಗಿ ಕಾಣಿಸಿಕೊಂಡ ಬರ ಈ ಐತಿಹಾಸಿಕ ದೇವಾಲಯದ ಜಲ ಬಂಧನಕ್ಕೆ ಬಿಡುಗಡೆ ಹಾಡಿತು.


ಈ ಸಂದರ್ಭವನ್ನು ಸದ್ಭಳಕೆ ಮಾಡಿಕೊಂಡ ಖೋಡೆಸ್ ಕಂಪನಿಯ ಶ್ರೀ ಹರಿಖೋಡೆ ಜಲಧಾರೆಯಲ್ಲಿ ಮಿಂದು ಹಲವು ವರ್ಷಗಳಿಂದ ಅಜ್ಞಾತವಾಗಿದ್ದ ಅಮೂಲ್ಯ ಸಾಂಸ್ಕೃತಿ ಸಿರಿಯೊಂದನ್ನು ಪುನರ್ ನಿರ್ಮಿಸುವ ಕಾಯಕಕ್ಕೆ ಕೈ ಹಾಕಿ ಯಶಸ್ಸಿನ ಮೆಟ್ಟಿಲೇರಿದ್ದಾರೆ. ಏಳುನೂರು ವರ್ಷಗಳ ಇತಿಹಾಸವುಳ್ಳ ಐತಿಹಾಸಿಕ ದೇವಾಲಯವನ್ನು ಬೇರೆಡೆಗೆ ಸ್ಥಳಾಂತರಿಸಿ ಪುನರ್ ಪ್ರತಿಷ್ಟಾಪಿಸುವ ಕಾಯಕಕ್ಕೆ ಕೋಟ್ಯಾಂತರ ರೂಪಾಯಿ ಹಣ ವ್ಯಯಿಸಲಾಗಿದೆ. ಇಂದಿಗೂ ನಿತ್ಯವೂ ನೂರಾರು ಜನ ಕಾಯಕದಲ್ಲಿ ನಿರತರಾಗಿದ್ದಾರೆ. ಇದೆಲ್ಲದರ ನಡುವೆಯೂ ಮಹತ್ವ ಎನಿಸುವುದೆಂದರೆ ನಮ್ಮ ಕೈ ಜಾರಿಯೇ ಹೋಯಿತು ಎಂದುಕೊಂಡಿದ್ದ ಮಹತ್ವದ ಶಿಲ್ಪ ಕಲಾಕೃತಿಯೊಂದು ಪುನಹ ನಮ್ಮದಾಗಿದೆ. ನಮಗಷ್ಟೆ ಅಲ್ಲ ನಮ್ಮ ಮುಂದಿನ ಪೀಳಿಗೆಯೂ ಸಹ ಇದನ್ನು ನೋಡಿ ಆನಂದಿಸುವ ಅವಕಾಶವೊಂದನ್ನು ಹರಿಖೋಡೆ ನಮಗಿತ್ತಿದ್ದಾರೆ.

"ವೇಣುಗೋಪಾಲಸ್ವಾಮಿ ದೇವಾಲಯ ಮುಳುಗಡೆಯಾಗಿತ್ತು, ಕೆಆರ್ಎಸ್ನಲ್ಲಿ ನೀರು ಕಾಲಿಯಾದಾಗ ಅದು ಕಾಣುತ್ತಿತ್ತಂತೆ ಆದರೆ ಈಗ ಅದನ್ನು ಬೇರೆಡೆಗೆ ವರ್ಗಾಯಿಸಿ ಪುನರ್ ಪ್ರತಿಷ್ಟಾಪಿಸಲಾಗಿದೆಯಂತೆ ಎಂಬ ಸುದ್ದಿ ಬಹಳ ಮಹತ್ವದ್ದು ಎಂದೆನಿಸಿಕೊಳ್ಳಬೇಕು ಎಂದರೆ ಪುನರ್ ಪ್ರತಿಷ್ಟಾಪನೆಗೊಂಡಿರುವ ದೇವಾಲಯವನ್ನು ನೋಡಲೇ ಬೇಕು ಆ ಬೃಹತ್ ದೇವಾಲಯದ ಅಂಗಳದಲ್ಲಿ ನಿಂತಾಗಲೇ ಆ ಸುದ್ದಿ ಅದೆಷ್ಟು ಮಹತ್ವದ್ದು ಎಂಬುದರ ಅರಿವಾಗುತ್ತದೆ. ಭಾರತದಲ್ಲಿ ಗುಡಿಯಿಂದ ಹಿಡಿದು ಮಂದಿರದಂತಹ ವಿವಿಧ ಗಾತ್ರದ ದೇವಾಲಯಗಳಿವೆ, ಆದರೆ ಒಂದೆರಡು ದಿವಸಗಳಲ್ಲಿ ಅಥವಾ ತಿಂಗಳಿನ ಲೆಕ್ಕದಲ್ಲಿ ಸ್ಥಳಾಂತರಿಸಬಹುದಾದ ಗಾತ್ರದ ದೇವಾಲಯ ಇದಲ್ಲ. ಒಂದೊಂದು ಕಲ್ಲುಗಳೂ ಸಹ ಬಹಳ ಸೂಕ್ಷವಾಗಿ ಎಚ್ಚರಿಕೆಯಿಂದ ಸಾಗಿಸಬೇಕಾದಂತಹ ದೇವಾಲಯ ಅದು. ಬಹುಷ ಇಲ್ಲಿನ ಒಂದೊಂದು ಕಲ್ಲುಗಳನ್ನು ಸಹ ಸಾಗಿಸಲು ಅದೆಷ್ಟು ದಿವಸಗಳು ಉರುಳಿವೆಯೋ, ಆಧುನಿಕ ಶತಮಾನದಲ್ಲಿ ಉನ್ನತ ತಂತ್ರಜ್ಞಾನ ಬಳಸಿ ನಿರ್ಮಿಸುತ್ತಿರುವ ದೇವಾಲಯ ಆಗಬಹುದು ಅಥವಾ ಯಾವುದೇ ಕಟ್ಟಡ ಇರಬಹುದು ಅವುಗಳು ನೀರಿನಲ್ಲಿ ಮುಳುಗದೇ ಇದ್ದರೂ ಸಹ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಪುನರ್ ಪ್ರತಿಷ್ಟಾಪಿಸಲಾಗುವುದಿಲ್ಲ ಆದರೆ ಏಳು ಶತಮಾನಗಳ ಹಿಂದೆ ನಿರ್ಮಿಸಿರುವ ಸಂಪೂರ್ಣ ಕಲ್ಲಿನ ಕಟ್ಟಡ ಅನೇಕ ಶತಮಾನಗಳು ಉರುಳಿದ ಮೇಲೂ ಅದು ಅಳಿಯದೇ ನಿಲ್ಲುತ್ತದೆ ಎಂದರೆ ಅದೆಂತಹ ಸುಸ್ಥಿರ ತಂತ್ರಜ್ಞಾನವಿರಬಹುದು ಎಂಬ ಆಶ್ಚರ್ಯ ಎಂತಹವರನ್ನು ನಿಬ್ಬೆರಗಾಗಿಸುತ್ತದೆ.

ದೇವಾಲಯ ಸ್ಥಳಾಂತರದೊಂದಿಗೆ ಕೆಲ ಅನುಕೂಲಗಳು ನೋಡುಗರಿಗೆ ದೊರೆತಂತಾಗಿದೆ. ಮುಳುಗಡೆಗೆ ಮುನ್ನ ಹಾಗೂ ಮುಳುಗಡೆಯ ನಂತರ ಹಾನಿಗಿಡಾಗಿದ್ದ ಶಿಲ್ಪಕಲಾಕೃತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದುರಸ್ಥಿಗೊಳಿಸಲಾಗಿದ್ದು ಸಂಪೂರ್ಣ ಭಗ್ನಾವಶೇಷಗೊಂಡಿದ್ದ ಕಲಾಕೃತಿಗಳನ್ನು ಪುನರ್ ನಿರ್ಮಿಸಲಾಗಿದೆ. ತಮಿಳುನಾಡಿನಿಂದ ಆಗಮಿಸಿರುವ ಶಿಲಾ ಕಲಾಕಾರರು ಇದಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಹಲವು ವರ್ಷಗಳ ಕಾಲ ನೀರಿನಲ್ಲಿ ಮುಳುಗಿ ಪಾಚಿಕಟ್ಟಿದ್ದ ಕಲ್ಲುಗಳಿಗೆ ಹೊಳಪು ನೀಡಲಾಗಿದ್ದು ದೇವಾಲಯ ಹೊಚ್ಚ ಹೊಸತರಂತೆ ಮಿಂಚುತ್ತಿದ್ದು ಮತ್ತಷ್ಟು ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಂಡಿದೆ.

ಇಲ್ಲಿನ ದೇವಾಲಯಕ್ಕೆ ಬಳಸಲ್ಪಟ್ಟಿರುವ ಕಲ್ಲು ಬೇಲೂರು, ಹಳೇಬೀಡಿನ ಕಲಾಕೃತಿಗಳಲ್ಲಿ ಬಳಸಿರುವ ಕಲ್ಲಿಗಿಂತಲೂ ಒರಟಾಗಿದ್ದು ಭಾರವಾಗಿವೆ ಈ ಪರಿಯ ಕಲ್ಲಿನ ದೇವಾಲಯದ ಸ್ಥಳಾಂತರ ಸಾಧನೆಯೇ ಸರಿ. ಕೃಷ್ಣರಾಜ ಸಾಗರದ ದಂಡೆಯ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವ ದೇವಾಲಯ ಬರೋಬ್ಬರಿ ಎರಡೆಕೆರೆ ಪ್ರದೇಶದಷ್ಟು ವಿಸ್ಥಾರವಾಗಿದೆ.

ದೇವಾಲಯದ ಸ್ಥಳಾಂತರ ಈಗಾಗಲೇ ಪೂರ್ಣಗೊಂಡಿದ್ದು ಪುನರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ದೇವಾಲಯ ಲೋಕಾರ್ಪಣೆಗೊಳ್ಳಲು ಇನ್ನೊಂದಾರು ತಿಂಗಳಾದರೂ ಬೇಕಾಗಬಹುದು, ಹೊಸ ಕನ್ನಬಾಡಿಯ ಸನಿಹದಲ್ಲಿರುವ ದೇವಾಲಯಕ್ಕೆ ತಲುಪಲು ಸೂಕ್ತ ರಸ್ತೆಯ ಅಗತ್ಯವಿದೆ. ಮುಂದಿನ ದಿವಸಗಳಲ್ಲಿ ಇದು ಮೈಸೂರಿನ ಅಚ್ಚು ಮೆಚ್ಚಿನ ಪ್ರೇಕ್ಷಣೀಯ ಸ್ಥಳವಾಗುವ ಎಲ್ಲಾ ಲಕ್ಷಣಗಳೂ ಘೋಚರಿಸುತ್ತಿವೆ. ಪುನಹ ಕಾವೇರಿ ದಂಡೆಯಲ್ಲಿಯೇ ಮೈದಳೆದಿರುವ ದೇವಾಲಯವನ್ನು ನೋಡ ನೋಡುತ್ತ ಇಡೀ ದಿವಸ ಸರಿದು ಹೋಗ್ಗಿದ್ದರೆ ಅರಿವೇ ಆಗಲಿಲ್ಲ, ದೇವಾಲಯದ ಎರಡು ದಿಕ್ಕುಗಳನ್ನು ಕಾವೇರಿಯ ಹಿನ್ನೀರು ಆಕ್ರಮಿಸಿಕೊಂಡಿರುವುದು ಮಾತ್ರ ಮತ್ತೆ ದೇವಾಲಯ ಯಾವಾಗ ಮುಳುಗುತ್ತದೆಯೋ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತಲೇ ಇತ್ತು.



Friday, October 9, 2009

ಸಹ್ಯಾದ್ರಿಯಲ್ಲಿ ಇಬ್ಬಾಗದ ಸಂಕಟ





ಮುಖ್ಯಮಂತ್ರಿಗಳಾದವರು ತಮ್ಮ ಸ್ವಕ್ಷೇತ್ರಗಳನ್ನು ಜಿಲ್ಲೆಯನ್ನಾಗಿ ಪರಿವರ್ತಿಸಿಕೊಳ್ಳುವ ಕೆಲಸ ಇತ್ತೀಚಿನ ದಿವಸಗಳಲ್ಲಿ ಹಚ್ಚಾಗುತ್ತಿದೆ. ಆಡಳಿತದ ಹಿತದೃಷ್ಟಿಯಿಂದ ವಿಶಾಲವಾಗಿರುವ ಜಿಲ್ಲೆಗಳು ಮತ್ತಷ್ಟು ಕಿರಿದಾಗಬೇಕು ಎಂಬುದು ಎಲ್ಲರೂ ಒಪ್ಪುವಂತಹ ವಿಷಯವೇ ಆದರೆ ಅಂತಹ ಅಗತ್ಯತೆಗಳು ಎಲ್ಲೆಲ್ಲಿವೆಯೋ ಅಲ್ಲಿ ಆ ಕೆಲಸ ಈಡೇರಬೇಕೋ ಹೊರತು ಕೇವಲ ಇದು ನಾನು ಪ್ರತಿನಿಧಿಸುತ್ತಿರುವ ಜಿಲ್ಲೆ ಎಂಬ ಏಕೈಕ ಕಾರಣಕ್ಕೆ ಗಡಿಯೊಂದಿಗೆ ಭಾವನೆಗಳನ್ನೂ ಮೈಗೂಡಿಸಿಕೊಂಡಿರುವ ಪ್ರದೇಶಗಳನ್ನು ಒಡೆದು ಒಡೆದು ಹೋಳು ಮಾಡುವಂತದ್ದು ಎಷ್ಟರ ಮಟ್ಟಿಗೆ ಸರಿ?
ಈಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ತಮ್ಮ ಸ್ವಕ್ಷೇತ್ರ ಶಿಕಾರಿಪುರವನ್ನು, ಶಿವಮೊಗ್ಗದಿಂದ ಬೇರ್ಪಡಿಸಿ ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಸಕಲ ಏರ್ಪಾಡುಗಳೆಲ್ಲವನ್ನೂ ಮಾಡಿಕೊಳ್ಳುತ್ತಿದ್ದಾರೆ ಎಂಬ ಗುಲ್ಲು ಈಗ ಸಹ್ಯಾದ್ರಿ ಸೆರಗಿನ ತುಂಬಾ ರೆಕ್ಕೆ ಪುಕ್ಕಗಳೆಲ್ಲವನ್ನೂ ಕಟ್ಟಿಕೊಂಡು ಸುತ್ತಾಡುತ್ತಿದೆ. ಒಂದೆಡೆ ಶಿಕಾರಿಪುರ ಕ್ಷೇತ್ರದ ಜನತೆಗೆ ಇದು ಸಂತೋಷವನ್ನು ನೀಡಿದರೆ ಸಹ್ಯಾದ್ರಿಯ ಮಲೆಗಳೊಂದಿಗೆ ಭಾವನಾತ್ಮಕ ಬೆಸುಗೆ ಹೊಂದಿರುವ ಅಖಂಡ ಶಿವಮೊಗ್ಗದ ಜನತೆಯ ಮನಸ್ಸಿನಲ್ಲಿ ಈ ವಿಚಾರ ತಲ್ಲಣವನ್ನುಂಟು ಮಾಡಿದೆ. ಮತದಾರರಿಗೆ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳ ರುಚಿ ತೋರಿಸಿ ಅದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಈ ಜನಪ್ರಿಯತೆಯನ್ನು ಮತಗಳನ್ನಾಗಿ ಪರಿವರ್ತಿಸಿ ಕೊಳ್ಳುವ ಹುನ್ನಾರ ಇದಾಗಿದ್ದು ಮತ್ತೇನು ಅಲ್ಲ ಎಂಬುದನ್ನು ಈ ಹಿಂದಿನ ಉದಾಹರಣೆಗಳು ನಿರೂಪಿಸಿವೆ.
ತಮ್ಮ ಸ್ವಕ್ಷೇತ್ರಗಳನ್ನು ಜಿಲ್ಲೆಯನ್ನಾಗಿ ರೂಪಿಸಿಕೊಳ್ಳುವ ಕೆಲಸ ಪ್ರಾರಂಭವಾಗಿದ್ದು ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲರ ಕಾಲದಲ್ಲಿ ೧೫.೦೮.೧೯೯೭ ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್, ದಾವಣಗೆರೆಯನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಿದರು. ಆದರೆ ಆಡಳಿತ ದೃಷ್ಟಿಯಿಂದ ಅದು ಅಗತ್ಯವೂ ಆಗಿತ್ತು. ಅಂದು ದಾವಣಗೆರೆಯೊಂದಿಗೆ ಇನ್ನಿತರೆ ಜಿಲ್ಲೆಗಳೂ ಸಹ ಅಸ್ಥಿತ್ವಕ್ಕೆ ಬಂದವು, ಆನಂತರ ಸರಿಯಾಗಿ ಹತ್ತು ವರ್ಷಗಳ ನಂತರ ೨೪.೦೮.೨೦೦೭ರಂದು ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಸ್ವಕ್ಷೇತ್ರ ರಾಮನಗರಕ್ಕೆ ಜಿಲ್ಲೆಯ ಸ್ಥಾನಮಾನ ದೊರಕಿಸಿಕೊಟ್ಟರು. ಈಗ ಈ ಹಿಂದಿನ ಮುಖ್ಯಮಂತ್ರಿಗಳು ಹಾಕಿಕೊಟ್ಟಿರುವ ಪರಂಪರೆಯನ್ನು ಯಡಿಯೂರಪ್ಪನವರೂ ಮುಂದುವರಿಸಲು ಮುಂದಾಗಿದ್ದು ಶಿಕಾರಿಪುರವನ್ನು ಜಿಲ್ಲೆಯನ್ನಾಗಿಸಲು ಮುಂದಾಗಿದ್ದಾರೆ. ಆದರೆ ಅಗತ್ಯ ಸಿದ್ದತೆಗಳೆಲ್ಲವೂ ತೆರೆಮರೆಯಲ್ಲಿ ನಡೆಯುತ್ರಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕನ್ನು ಸೇರಿಸಿ ಶಿಕಾರಿಪುರವನ್ನು ಜಿಲ್ಲೆಯನ್ನಾಗಿಸಬೇಕೆಂಬ ಪ್ರಯತ್ನ ಹಲವು ತಿಂಗಳುಗಳಿಂದ ನಡೆಯುತ್ತಿದ್ದು ಇದಕ್ಕೆ ಇಂಬು ನೀಡುವಂತೆ ಶಿಕಾರಿಪುರಕ್ಕೆ ೨೯೧ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಮುಖ್ಯಮಂತ್ರಿಗಳು ಈ ವಾಸ್ತವವನ್ನು ಅಲ್ಲಗಳೆಯುತ್ತಿದ್ದಾರೆ ಆದಾಗ್ಯೂ ತಾಲ್ಲೂಕು ಕೇಂದ್ರ ಶಿಕಾರಿಪುರದ ಆಸ್ಪತ್ರೆಯನ್ನು ಜಿಲ್ಲಾಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಹಾಗೆ ನೋಡಿದರೆ ಮತ್ತೊಂದು ತಾಲ್ಲೂಕು ಹಾಗೂ ಉಪವಿಭಾಗದ ಕೇಂದ್ರ ಸ್ಥಾನವನ್ನು ಹೊಂದಿರುವ ಸಾಗರ ಆಡಳಿತಾತ್ಮಕವಾಗಿ ಜಿಲ್ಲಾ ಕೇಂದ್ರಕ್ಕೆ ಸೂಕ್ತ ಸ್ಥಳ ಎಂದು ಅಲ್ಲಿಯ ಜನತೆ ಈಗಾಗಲೇ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಆದರೆ ಸ್ವಕ್ಷೇತ್ರ ವ್ಯಾಮೋಹಉಳ್ಳವರಿಗೆ ಆ ಜನರ ಕೂಗಾದರೂ ಹೇಗೆ ಕೇಳಿಸೀತು?
ಹೆಚ್ಚು ಹೆಚ್ಚು ಜಿಲ್ಲೆಗಳಾಗಬೇಕೆಂಬುದು ಎಲ್ಲರ ಆಶಯ ಆದರೆ ಯಾವುದೇ ಒಂದು ಸ್ಥಳವನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಮೊದಲು ಆ ಬಗ್ಗೆ ಚಿಂತನೆ ಅಗತ್ಯ, ಕೇವಲ ತಮ್ಮ ತಮ್ಮ ರಾಜಕೀಯು ಹಿತಾಸಕ್ತಿಗಾಗಿ ಹಾಗೂ ರಾಜಕಾರಣಿಗಳ ಭವಿಷ್ಯದ ಅಸ್ಥಿತ್ವಕ್ಕಾಗಿ ಜಿಲ್ಲೆಗಳನ್ನಾಗಿ ಪರಿವರ್ತಿಸುತ್ತಾ ಸಾಗಿದರೆ ಅದರಿಂದ ಜನತೆಯ ಕಲ್ಯಾಣವನ್ನು ನಿರೀಕ್ಷಿಸಲಾಗುವುದಿಲ್ಲ. ಇಂತದ್ದೇ ಪರಿಪಾಟ ಹೀಗೆಯೇ ಮುಂದುವರಿದರೆ ಮುಂದೆ ಹರದನಹಳ್ಳಿ, ಪಡುವಲಹಿಪ್ಪೆಗಳೂ ಒಂದೊಂದು ಪ್ರತ್ಯೇಕ ಜಿಲ್ಲೆಗಳಾಗುವ ದಿವಸಗಳು ದೂರವಾಗುವುದಿಲ್ಲ.

Sunday, August 2, 2009

ಸಮಕಾಲೀನ ಶಿಕ್ಷಣದ ತಲ್ಲಣಗಳು

ದೇಶದ ಶಿಕ್ಷಣ ರಂಗದಲ್ಲಿ ಮತ್ತೊಂದು ಮಹತ್ತರವಾದ ಕ್ರಾಂತಿ ಮಾಡಲು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ತುದಿಗಾಲಲ್ಲಿ ನಿಂತಿದ್ದಾರೆ. ಈ ಕಾರ್ಯಕ್ಕಾಗಿ ತನ್ನ ಸಚಿವಾಲಯವನ್ನು ಸಜ್ಜುಗೊಳಿಸಿಕೊಂಡು ಕಾಯುತ್ತಿದ್ದಾರೆ. ಈ ಕುರಿತಂತೆ ತಿಂಗಳ ಹಿಂದೆ ಪತ್ರಿಕಾ ಗೋಷ್ಠಿ ನಡೆಸಿ ತಮ್ಮ ಕ್ರಾಂತಿಕಾರಕ ವಿಚಾರಗಳನ್ನು ಹಂಚಿಕೊಂಡ ನಂತರ ದೇಶದಾದ್ಯಂತ ಪರ ವಿರುದ್ಧ ಅಭಿಪ್ರಾಯಗಳು ಎಣೆ ಇಲ್ಲದಂತೆ ಪ್ರಕಟಗೊಂಡಿದ್ದವು ಆನಂತರ ತಣ್ಣಗಾಗಿದ್ದ ಸಚಿವರು ಪುನಹ ಕಳೆದ ಶನಿವಾರ ತಮ್ಮ ಈ ಹಿಂದಿನ ನಿಲುವನ್ನು ಪುನಹ ಸ್ಪಷ್ಟಪಡಿಸಿದ್ದಾರೆ. ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶದಲ್ಲಿರುವ ಎಲ್ಲಾ ರಾಜ್ಯಗಳು ಸಹ ಏಕರೂಪ ಪರಿಕ್ಷಾ ಪದ್ದತಿ ಜಾರಿ ಮಾಡಲು ಆದೇಶಿಸಿದ್ದಾರೆ. ಆದೇಶ ಪಾಲಿಸದೇ ಇದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬ ಗಡುವನ್ನು ಸಹ ಅವರು ನೀಡಿದ್ದಾರೆ. ಸಚಿವರ ನೂತನ ಕಾರ್ಯಕ್ರಮವನ್ನು ವಿವಿಧ ಮಗ್ಗುಲುಗಳಿಂದ ನೋಡಿದರೆ ಎಲ್ಲಾ ಪದ್ಧತಿಗಳಲ್ಲಿ ಇರುವಂತೆ ನೂತನ ಶೈಕ್ಷಣಿಕ ಪದ್ಧತಿಯಲ್ಲಿಯೂ ವಿವಿಧ ಲೋಪ ದೋಷಗಳಿವೆ ಜೊತೆ ಜೊತೆಗೆ ಅನುಕೂಲಗಳು ಇವೆ. ಆದರೆ ಜಾರಿಗೆ ಬರಲಿರುವ ಪದ್ಧತಿ ಕೇವಲ ಸರ್ಕಾರ ತನ್ನ ಹುಳುಕುಗಳನ್ನು ಮುಚ್ಚಿಕೊಂಡು ಜಗತ್ತಿನ ಮುಂದೆ ದೊಡ್ಡ ಮನುಷ್ಯನಂತೆ ಪೋಸು ಕೊಡಲಷ್ಟೇ ಸೀಮಿತವಾಗಬಾರದು ಎಂಬ ತಲ್ಲಣ ಪ್ರಜ್ಞಾವಂತರನ್ನು ಕಾಡುತ್ತಿದೆ.
ಸ್ವಾತಂತ್ರಾನಂತರ ಸಂವಿಧಾನದಲ್ಲಿ ಈ ದೇಶದ ಪ್ರತಿಯೊಬ್ಬರಿಗೂ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ನೀಡುವುದಾಗಿ ಘೋಷಿಸಿದ ಪರಿಣಾಮ ಈ ಮೌಲ್ಯಗಳನ್ನು ಜಾರಿಗೆ ತರುವ ದೃಷ್ಟಿಯಿಂದ ಸರ್ಕಾರ ಶಿಕ್ಷಣಕ್ಕೆ ಮಾರುಹೋಯಿತು. ದೇಶದ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡಲೇ ಬೇಕಾದ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ ಶಿಕ್ಷಣಕ್ಕೆ ವಿವಿಧ ರೀತಿಯ ಪ್ರೋತ್ಸಾಹಗಳನ್ನು ನೀಡಿತು, ಇದೇ ವೇಳೆ ಶಿಕ್ಷಣದ ಖಾಸಗೀಕರಣವನ್ನು ಮಾಡಿದ ಸರ್ಕಾರ ಆನಂತರ ಖಾಸಗೀ ಶಿಕ್ಷಣ ಸಂಸ್ಥೆಗಳ ಉರುಳಿಗೆ ತನಗೆ ತಾನೇ ಸಿಕ್ಕಿ ಪೇಚಾಡುವ ಸ್ಥಿತಿ ತಂದುಕೊಂಡಿದಂತೂ ಸರ್ಕಾರದ ದುರಂತಗಳಲ್ಲಿ ಒಂದು. ರಾಜ್ಯ ಸರ್ಕಾರ ಇಂದಿಗೂ ಸಹ ವೃತ್ತಿ ಶಿಕ್ಷಣದ ಸಮಸ್ಯೆಗೆ ಸಂಬಂಧಿಸಿದಂತೆ ಹಾಗೂ ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಪ್ರತಿಸಾರಿಯೂ ಮುಜುಗರ ಅನುಭವಿಸುತ್ತಿರುವುದು ತಾಜಾ ಉದಾಹರಣೆಯಾಗಿದೆ. ಸರ್ಕಾರಗಳು ಶಿಕ್ಷಣಕ್ಕೆ ಸಬಂಧಿಸಿದಂತೆ ಯಾವುದೇ ಸ್ಪಷ್ಟ ನೀತಿ ನಿಯಮಗಳನ್ನು ಹೊಂದಿಲ್ಲ ಹಾಗೂ ಒಂದು ವೇಳೆ ಹೊಂದಿದ್ದರೂ ಅದು ಕಾರ್ಯರೂಪಕ್ಕೆ ಬರುವಲ್ಲಿ ವಿಫಲವಾಗಿದೆ ಎಂಬುದು ಈ ಉದಾಹರಣೆಗಳಿಂದ ಧೃಡವಾಗಿದೆ.
ಅದೇನೇ ಇರಲಿ ಶಿಕ್ಷಣದ ಸಾರ್ವತ್ರಿಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಆತುರಾತುರವಾಗಿ ಕೈಗೊಂಡ ನಿರ್ಧಾರಗಳು ಸರ್ಕಾರ ತನ್ನ ಮರ್ಯಾದೆಯನ್ನು ಉಳಿಸಿಕೊಳ್ಳಲು ನೆರವಾಗಿದೆಯೋ ವಿನಹ: ಇದರಿಂದ ಶಿಕ್ಷಣ ರಂಗದ ಗುಣಮಟ್ಟ ಸುಧಾರಿಸಲಿಲ್ಲ. ಇದಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅಪರಾದಗಳೇ ಪ್ರತ್ಯಕ್ಷ ಸಾಕ್ಷಿಯಾಗಿವೆ. ಶಿಕ್ಷಣದ ಹೆಚ್ಚಳದೊಂದಿಗೆ ಪೋಲೀಸ್ ಠಾಣೆಗಳು, ನ್ಯಾಯಾಲಯಗಳು ಅಪಘಾತಗಳು ಹಾಗೂ ಅಪರಾದಗಳು ಗಣನೀಯವಾಗಿ ಕಡಿಮೆ ಆಗಬೇಕಿತ್ತು. ಆದರೆ ಅದಕ್ಕೆ ತದ್ವಿರುದ್ದವಾದ ಬೆಳವಣಿಗೆ ಸಂಭವಿಸುತ್ತಿರುವುದು ಶಿಕ್ಷಣದ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಶಿಕ್ಷಿತರ ಹೆಚ್ಚಳದೊಂದಿಗೆ ಅಪರಾಧಗಳು, ಸಾಮಾಜಿಕ ಅನಾಹುತಗಳು ಸಮಾಜದಲ್ಲಿ ಹೆಚ್ಚಾಗುತ್ತಲೆ ಸಾಗಿವೆ ಎಂದರೆ ಅಂತಹ ಶಿಕ್ಷಣದ ಅವಶ್ಯಕತೆಯಾದರೂ ಏನು?
ಆರ್ಥಿಕ ಅಭಿವೃದ್ಧಿಯ ಮಾನದಂಡವಾಗಿ ಮಾನವ ಆಭಿವೃದ್ದಿ ಸೂಚ್ಯಾಂಕವನ್ನು ಬಳಸಲು ಆರಂಭಿಸದ ಮೇಲೆ ಅಭಿವೃದ್ದಿ ಎಂಬುದು ಕೇವಲ ಯಂತ್ರ, ಕಟ್ಟಡ, ರಸ್ತೆ, ಸೂರಿಗಷ್ಟೇ ಸೀಮಿತಗೊಂಡಿಲ್ಲ ಅದಕ್ಕೆ ಬದಲಾಗಿ ಸಾಕ್ಷರತೆ, ಆರೋಗ್ಯ, ಉದ್ಯೋಗದಂಹ ವಿಚಾರಗಳನ್ನು ಒಳಗೊಂಡಿದ್ದು ಇವುಗಳ ಗರಿಷ್ಟತೆ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳಬೇಕೆಂದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿರುವ ವಿಷಯಗಳನ್ನು ಉನ್ನತೀಕರಿಸಬೇಕಿದೆ ಇವುಗಳೆಲ್ಲವೂ ಅಂಕಿ ಸಂಖ್ಯೆಗಳಲ್ಲಿಯೇ ನಿರ್ಧಾರವಾಗುತ್ತಿರುವುದರಿಂದ ಕೇವಲ ಅಂಕಿಸಂಖ್ಯೆನ್ನು ಉನ್ನತೀಕರಿಸಲಷ್ಟೇ ಸರ್ಕಾರ ಲಕ್ಷ್ಯ ನೀಡುತ್ತಿರುವುದು ಹಲವು ತಲೆಮಾರುಗಳಿಗೆ ಮಾಡಿದ ದ್ರೋಹವಲ್ಲದೆ ಮತ್ತೇನೂ ಅಲ್ಲ.
ಸರ್ಕಾರಿ, ಖಾಸಗಿ ಅಥವಾ ಪಟ್ಟಣ ಹಾಗೂ ಗ್ರಾಮೀಣ ಶಿಕ್ಷಣಗಳನ್ನು ತೌಲನಿಕವಾಗಿ ಗಮನಿಸಿದಾಗ ಅವುಗಳ ನಡುವೆ ಇರುವ ಅಂತರ ಅಗಾಧವಾದುದೇ ಅಗಿದೆ. ಈ ಜಟಿಲತೆಯಲ್ಲಿ ಸಿಲುಕಿರುವ ಲಕ್ಷಾಂತರ ವಿದ್ಯಾರ್ಥಿಗಳು ಅದರಲ್ಲಿಯೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಆರಕ್ಕೆರದ ಮೂರಕ್ಕಿಳಿಯದ ಸ್ಥಿತಿಯಲ್ಲಿದ್ದು ಯಾತನೆ ಅನುಭವಿಸುತ್ತಿದ್ದಾರೆ. ಪಟ್ಟಣ ಪ್ರದೇಶದ ಶಾಲೆಗಳಲ್ಲಿರುವ ಸೌಕರ್ಯ ಆ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಎತ್ತರಿಸಿದ್ದರೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಸರ್ಕಾರ ನೀಡಿರುವ ಸೌಲಭ್ಯ ವಿದ್ಯಾರ್ಥಿಗಳಿಗೆ ತಲುಪುವುದಕಿಂತಲೂ ಜನಪ್ರಿಯತೆಗಷ್ಟೇ ಸೀಮಿತವಾಗಿರುವುದು ಮತ್ತೊಂದು ದುರಂತ. ಈ ನಡುವೆ ಸರ್ಕಾರ ಶೈಕ್ಷಣಿಕ ವಲಯದಲ್ಲಿ ವಿವಿಧ ಬಗೆಯ ಮಾರ್ಪಾಡುಗಳನ್ನು ಮಾಡಿದ್ದರೂ ಅವುಗಳೆಲ್ಲವೂ ಸರ್ಕಾರ ಶೈಕ್ಷಣಿಕ ಸಾರ್ವತ್ರೀಕರಣವನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ನೆರವಾಗಿವೆ ಮತ್ತು ನೆರವಾಗುತ್ತಿವೆ.
ಈಗ ಸರ್ಕಾರ ಪ್ರಾರ್ಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ಹಂತ ತಲುಪಿಯಾಗಿದೆ. ಮುಂದಿನ ಸವಾಲಿರುವುದು ಉನ್ನತ ಶಿಕ್ಷಣದ್ದು, ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆಯನ್ನು ಆದಷ್ಟು ಬೇಗ ಹೆಚ್ಚಿಸಿ ಅಲ್ಲಿಯೂ ನಾವು ಸಾಧನೆಗೈದಿದ್ದೇವೆ ಎಂಬುದನ್ನು ಸರ್ಕಾರ ವಿಶ್ವ ಸಂಸ್ಥೆಯ ಮಟ್ಟದಲ್ಲಿ ಸಾಭೀತು ಮಾಡಿ ಮತ್ತಷ್ಟು ಷಹಬ್ಬಾಸ್ ಗಿರಿ ಸಂಪಾದಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವರು ಜಾಗೃತರಾಗಿದ್ಧಾರೆ. ಭಾರತ 2020ರ ವೇಳೆಗೆ ವಿಶ್ವದ ಸೂಪರ್ ಪವರ್ ದೇಶಗಳಲ್ಲೊಂದಾಗಬೇಕು ಎಂದರೆ ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಮತ್ತಷ್ಟು ಹೆಚ್ಚುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶಿಕ್ಷಣ ಸುಧಾರಣೆಗೆ ಮುಂದಾಗಿದೆ. ದೇಶದ ಹೆಚ್ಚು ಜನರಿಗೆ ಉನ್ನತ ಶಿಕ್ಷನವನ್ನು ತಲುಪಿಸುವುದು ಸ್ವಾಗತಾರ್ಹ ಬೆಳೆವಣಿಗೆಯೇ ಆದರೆ ಅದು ಸರ್ಕಾರದ ಪ್ರತಿಷ್ಟೆಗಷ್ಟೇ ಸೀಮಿತವಾಗದೆ ಜನರ, ಸಮಾಜದ ಒಳಿತಿಗೆ ಅನುಕೂಲಕರವಾದರೆ ಮಾತ್ರ ಸರ್ಕಾರದ ಆಶಯಕ್ಕೆ ಬೆಲೆ ಇರುತ್ತದೆ.