Friday, December 4, 2009

ವಾಸ್ತವ: ಮತ್ತೆ ಮೈತಳೆದ ಅಜ್ಞಾತ ದೇವಾಲಯ

ವಾಸ್ತವ: ಮತ್ತೆ ಮೈತಳೆದ ಅಜ್ಞಾತ ದೇವಾಲಯ

ಮತ್ತೆ ಮೈತಳೆದ ಅಜ್ಞಾತ ದೇವಾಲಯ






ಬರೋ ಬರಿ ಎಂಟು ವರ್ಷಗಳ ಕಾಲ ಸಾಂಸ್ಕೃತಿಕ ರಾಜ್ಯದಾನಿ ಮೈಸೂರಿನಲ್ಲಿ ಕಳೆದ ನನಗೆ ಅಲ್ಲಿಯ ಆಸುಪಾಸಿನ ಎಲ್ಲಾ ಸ್ಥಳಗಳ ಪರಿಚಯವೂ ಇದೆ. ಎಲ್ಲವೂ ಮತ್ತೊಮ್ಮೆ ಮಗದೊಮ್ಮೆ ನೋಡಿರುವ ಸ್ಥಳಗಳೇ ಆಗಿರುವುದರಿಂದ ಹೊಸ ಹೊಸ ಅನುಭವ ಹೊಂದುವುದು ದುಸ್ಥರವೇ ಸರಿ. ಮೊನ್ನೆ ಮೊನ್ನೆ ಮೈಸೂರಿಗೆ ಹೋದ ಸಂದರ್ಭ ನಾಲ್ಕು ಗೋಡೆಗಳ ಮಧ್ಯೆ ಹರಟೆ ಹೊಡೆಯುವುದಕ್ಕಿಂತಲೂ ಆತ್ಮೀಯರೊಂದಿಗೆ ಸ್ವತಂತ್ರವಾಗಿ ಓಡಾಡಿಕೊಂಡು ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಬೇಕೆನಿಸಿತು ಎಲ್ಲವೂ ನೋಡಿರುವ ಸ್ಥಳಗಳೇ ಆಗಿರುವುದರಿಂದ ಎಲ್ಲಿಗೆ ಹೋಗುವುದು? ಅಲ್ಲಿ ನಮಗೆ ಸಿಗುವ ಮನೋಲ್ಲಾಸವಾದರೂ ಎಷ್ಟು ಪ್ರಮಾಣದ್ದು ಎಂಬ ಲೆಕ್ಕಾಚಾರವೇ ಮೇಲಾಯ್ತು. ಹಾಗಿದ್ದರೆ ಐತಿಹಾಸಿಕವಾಗಿ ಪ್ರವಾಸಿಗರ ಸ್ವರ್ಗ ಎಂದೆನಿಸಿಕೊಂಡಿರುವ ಮಹಿಷನೂರಿನಂತಹ ಮೈಸೂರು ಇಷ್ಟು ಬೇಗ ಆಕರ್ಷಣೆ ಕಳೆದುಕೊಂಡಿತೆ ಎಂಬ ಪ್ರಶ್ನೆಗಳು ಮನದಾಳದಲ್ಲಿ ಮೂಡತೊಡಗಿದವು. ಆ ಕ್ಷಣದಲ್ಲಿ ಇದ್ದಕ್ಕಿದಂತೆ ನೆನಪಾಗಿದ್ದು ಇಷ್ಟು ವರ್ಷಗಳ ಕಾಲ ಕಳೆದು ಹೋಗಿದ್ದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ.

ಹಲವು ವರ್ಷಗಳ ಹಿಂದೆಯೇ ಇತಿಹಾಸದ ಕಾಲಗರ್ಭದಲ್ಲಿ ಲೀನವಾಗಿ ಕೆಆರ್ಎಸ್ ನ ಹಿನ್ನೀರಿನಲ್ಲಿ ಮುಳುಗಿ ಮರೆಯಾಗಿದ್ದ ಹೊಯ್ಸಳ ಶೈಲಿಯ ದೇವಾಲಯವೊಂದು ಮೈಸೂರು ಇತಿಹಾಸದ ಪುಟಗಳನ್ನು ಪುನಹ ಆಕ್ರಮಿಸಿಕೊಳ್ಳುವ ಪ್ರಯತ್ನದಲ್ಲಿದೆ ಎಂಬುದರ ಅರಿವಾಗಿದ್ದು ವೇಣುಗೋಪಾಲಸ್ವಾಮಿ ದೇವಾಲಯದ ಅಂಗಳದಲ್ಲಿ ನಿಂತು ನೋಡಿದಾಗಲೇ. ಹೌದು ಪ್ರವಾಸಿಗರ ಊರು ಎಂದೆನಿಸಿಕೊಂಡಿರುವ ಮೈಸೂರಿನ ಕಿರೀಟಕ್ಕೆ ಈಗ ಮತ್ತೊಂದು ಗರಿ ಸೇರ್ಪಡೆಗೊಳ್ಳುತ್ತಿದೆ. 1909ರಲ್ಲಿ ಕನಂಬಾಡಿ ಬಳಿ ನಾಡಿನ ಜೀವನದಿ ಕಾವೇರಿಗೆ ಅಣೆ ನಿರ್ಮಿಸಬೇಕು ಎಂದು ಯೋಜನೆ ತಯಾರಾದಾಗಲೇ ಈ ದೇವಾಲಯ ಮುಳುಗಡೆಯಾಗಲಿದೆ ಎಂಬುದು ಖಚಿತವಾಗಿತ್ತು ಆದರೆ ಆ ಹೊತ್ತಿಗೆ ಅದನ್ನು ರಕ್ಷಿಸಲು ಯಾರೂ ಮುಂದೆ ಬಂದಿರಲಿಲ್ಲ. 1930ರಲ್ಲಿ ಕೃಷ್ಣರಾಜ ಸಾಗರ ಯೋಜನೆ ಪೂರ್ಣಗೊಂಡಾಗ ಈ ದೇವಾಲಯ ಕೆಆರ್ಎಸ್ ಹಿನ್ನೀರಿನಲ್ಲಿ ಮುಳುಗಿ ಹೋಗಿತ್ತು. 2000ನೇ ಇಸವಿ ನಂತರ ರಾಜ್ಯದಲ್ಲಿ ಮೇಲಿಂದ ಮೇಲೆ ವಾರ್ಷಿಕವಾಗಿ ಕಾಣಿಸಿಕೊಂಡ ಬರ ಈ ಐತಿಹಾಸಿಕ ದೇವಾಲಯದ ಜಲ ಬಂಧನಕ್ಕೆ ಬಿಡುಗಡೆ ಹಾಡಿತು.


ಈ ಸಂದರ್ಭವನ್ನು ಸದ್ಭಳಕೆ ಮಾಡಿಕೊಂಡ ಖೋಡೆಸ್ ಕಂಪನಿಯ ಶ್ರೀ ಹರಿಖೋಡೆ ಜಲಧಾರೆಯಲ್ಲಿ ಮಿಂದು ಹಲವು ವರ್ಷಗಳಿಂದ ಅಜ್ಞಾತವಾಗಿದ್ದ ಅಮೂಲ್ಯ ಸಾಂಸ್ಕೃತಿ ಸಿರಿಯೊಂದನ್ನು ಪುನರ್ ನಿರ್ಮಿಸುವ ಕಾಯಕಕ್ಕೆ ಕೈ ಹಾಕಿ ಯಶಸ್ಸಿನ ಮೆಟ್ಟಿಲೇರಿದ್ದಾರೆ. ಏಳುನೂರು ವರ್ಷಗಳ ಇತಿಹಾಸವುಳ್ಳ ಐತಿಹಾಸಿಕ ದೇವಾಲಯವನ್ನು ಬೇರೆಡೆಗೆ ಸ್ಥಳಾಂತರಿಸಿ ಪುನರ್ ಪ್ರತಿಷ್ಟಾಪಿಸುವ ಕಾಯಕಕ್ಕೆ ಕೋಟ್ಯಾಂತರ ರೂಪಾಯಿ ಹಣ ವ್ಯಯಿಸಲಾಗಿದೆ. ಇಂದಿಗೂ ನಿತ್ಯವೂ ನೂರಾರು ಜನ ಕಾಯಕದಲ್ಲಿ ನಿರತರಾಗಿದ್ದಾರೆ. ಇದೆಲ್ಲದರ ನಡುವೆಯೂ ಮಹತ್ವ ಎನಿಸುವುದೆಂದರೆ ನಮ್ಮ ಕೈ ಜಾರಿಯೇ ಹೋಯಿತು ಎಂದುಕೊಂಡಿದ್ದ ಮಹತ್ವದ ಶಿಲ್ಪ ಕಲಾಕೃತಿಯೊಂದು ಪುನಹ ನಮ್ಮದಾಗಿದೆ. ನಮಗಷ್ಟೆ ಅಲ್ಲ ನಮ್ಮ ಮುಂದಿನ ಪೀಳಿಗೆಯೂ ಸಹ ಇದನ್ನು ನೋಡಿ ಆನಂದಿಸುವ ಅವಕಾಶವೊಂದನ್ನು ಹರಿಖೋಡೆ ನಮಗಿತ್ತಿದ್ದಾರೆ.

"ವೇಣುಗೋಪಾಲಸ್ವಾಮಿ ದೇವಾಲಯ ಮುಳುಗಡೆಯಾಗಿತ್ತು, ಕೆಆರ್ಎಸ್ನಲ್ಲಿ ನೀರು ಕಾಲಿಯಾದಾಗ ಅದು ಕಾಣುತ್ತಿತ್ತಂತೆ ಆದರೆ ಈಗ ಅದನ್ನು ಬೇರೆಡೆಗೆ ವರ್ಗಾಯಿಸಿ ಪುನರ್ ಪ್ರತಿಷ್ಟಾಪಿಸಲಾಗಿದೆಯಂತೆ ಎಂಬ ಸುದ್ದಿ ಬಹಳ ಮಹತ್ವದ್ದು ಎಂದೆನಿಸಿಕೊಳ್ಳಬೇಕು ಎಂದರೆ ಪುನರ್ ಪ್ರತಿಷ್ಟಾಪನೆಗೊಂಡಿರುವ ದೇವಾಲಯವನ್ನು ನೋಡಲೇ ಬೇಕು ಆ ಬೃಹತ್ ದೇವಾಲಯದ ಅಂಗಳದಲ್ಲಿ ನಿಂತಾಗಲೇ ಆ ಸುದ್ದಿ ಅದೆಷ್ಟು ಮಹತ್ವದ್ದು ಎಂಬುದರ ಅರಿವಾಗುತ್ತದೆ. ಭಾರತದಲ್ಲಿ ಗುಡಿಯಿಂದ ಹಿಡಿದು ಮಂದಿರದಂತಹ ವಿವಿಧ ಗಾತ್ರದ ದೇವಾಲಯಗಳಿವೆ, ಆದರೆ ಒಂದೆರಡು ದಿವಸಗಳಲ್ಲಿ ಅಥವಾ ತಿಂಗಳಿನ ಲೆಕ್ಕದಲ್ಲಿ ಸ್ಥಳಾಂತರಿಸಬಹುದಾದ ಗಾತ್ರದ ದೇವಾಲಯ ಇದಲ್ಲ. ಒಂದೊಂದು ಕಲ್ಲುಗಳೂ ಸಹ ಬಹಳ ಸೂಕ್ಷವಾಗಿ ಎಚ್ಚರಿಕೆಯಿಂದ ಸಾಗಿಸಬೇಕಾದಂತಹ ದೇವಾಲಯ ಅದು. ಬಹುಷ ಇಲ್ಲಿನ ಒಂದೊಂದು ಕಲ್ಲುಗಳನ್ನು ಸಹ ಸಾಗಿಸಲು ಅದೆಷ್ಟು ದಿವಸಗಳು ಉರುಳಿವೆಯೋ, ಆಧುನಿಕ ಶತಮಾನದಲ್ಲಿ ಉನ್ನತ ತಂತ್ರಜ್ಞಾನ ಬಳಸಿ ನಿರ್ಮಿಸುತ್ತಿರುವ ದೇವಾಲಯ ಆಗಬಹುದು ಅಥವಾ ಯಾವುದೇ ಕಟ್ಟಡ ಇರಬಹುದು ಅವುಗಳು ನೀರಿನಲ್ಲಿ ಮುಳುಗದೇ ಇದ್ದರೂ ಸಹ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಪುನರ್ ಪ್ರತಿಷ್ಟಾಪಿಸಲಾಗುವುದಿಲ್ಲ ಆದರೆ ಏಳು ಶತಮಾನಗಳ ಹಿಂದೆ ನಿರ್ಮಿಸಿರುವ ಸಂಪೂರ್ಣ ಕಲ್ಲಿನ ಕಟ್ಟಡ ಅನೇಕ ಶತಮಾನಗಳು ಉರುಳಿದ ಮೇಲೂ ಅದು ಅಳಿಯದೇ ನಿಲ್ಲುತ್ತದೆ ಎಂದರೆ ಅದೆಂತಹ ಸುಸ್ಥಿರ ತಂತ್ರಜ್ಞಾನವಿರಬಹುದು ಎಂಬ ಆಶ್ಚರ್ಯ ಎಂತಹವರನ್ನು ನಿಬ್ಬೆರಗಾಗಿಸುತ್ತದೆ.

ದೇವಾಲಯ ಸ್ಥಳಾಂತರದೊಂದಿಗೆ ಕೆಲ ಅನುಕೂಲಗಳು ನೋಡುಗರಿಗೆ ದೊರೆತಂತಾಗಿದೆ. ಮುಳುಗಡೆಗೆ ಮುನ್ನ ಹಾಗೂ ಮುಳುಗಡೆಯ ನಂತರ ಹಾನಿಗಿಡಾಗಿದ್ದ ಶಿಲ್ಪಕಲಾಕೃತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದುರಸ್ಥಿಗೊಳಿಸಲಾಗಿದ್ದು ಸಂಪೂರ್ಣ ಭಗ್ನಾವಶೇಷಗೊಂಡಿದ್ದ ಕಲಾಕೃತಿಗಳನ್ನು ಪುನರ್ ನಿರ್ಮಿಸಲಾಗಿದೆ. ತಮಿಳುನಾಡಿನಿಂದ ಆಗಮಿಸಿರುವ ಶಿಲಾ ಕಲಾಕಾರರು ಇದಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಹಲವು ವರ್ಷಗಳ ಕಾಲ ನೀರಿನಲ್ಲಿ ಮುಳುಗಿ ಪಾಚಿಕಟ್ಟಿದ್ದ ಕಲ್ಲುಗಳಿಗೆ ಹೊಳಪು ನೀಡಲಾಗಿದ್ದು ದೇವಾಲಯ ಹೊಚ್ಚ ಹೊಸತರಂತೆ ಮಿಂಚುತ್ತಿದ್ದು ಮತ್ತಷ್ಟು ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಂಡಿದೆ.

ಇಲ್ಲಿನ ದೇವಾಲಯಕ್ಕೆ ಬಳಸಲ್ಪಟ್ಟಿರುವ ಕಲ್ಲು ಬೇಲೂರು, ಹಳೇಬೀಡಿನ ಕಲಾಕೃತಿಗಳಲ್ಲಿ ಬಳಸಿರುವ ಕಲ್ಲಿಗಿಂತಲೂ ಒರಟಾಗಿದ್ದು ಭಾರವಾಗಿವೆ ಈ ಪರಿಯ ಕಲ್ಲಿನ ದೇವಾಲಯದ ಸ್ಥಳಾಂತರ ಸಾಧನೆಯೇ ಸರಿ. ಕೃಷ್ಣರಾಜ ಸಾಗರದ ದಂಡೆಯ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವ ದೇವಾಲಯ ಬರೋಬ್ಬರಿ ಎರಡೆಕೆರೆ ಪ್ರದೇಶದಷ್ಟು ವಿಸ್ಥಾರವಾಗಿದೆ.

ದೇವಾಲಯದ ಸ್ಥಳಾಂತರ ಈಗಾಗಲೇ ಪೂರ್ಣಗೊಂಡಿದ್ದು ಪುನರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ದೇವಾಲಯ ಲೋಕಾರ್ಪಣೆಗೊಳ್ಳಲು ಇನ್ನೊಂದಾರು ತಿಂಗಳಾದರೂ ಬೇಕಾಗಬಹುದು, ಹೊಸ ಕನ್ನಬಾಡಿಯ ಸನಿಹದಲ್ಲಿರುವ ದೇವಾಲಯಕ್ಕೆ ತಲುಪಲು ಸೂಕ್ತ ರಸ್ತೆಯ ಅಗತ್ಯವಿದೆ. ಮುಂದಿನ ದಿವಸಗಳಲ್ಲಿ ಇದು ಮೈಸೂರಿನ ಅಚ್ಚು ಮೆಚ್ಚಿನ ಪ್ರೇಕ್ಷಣೀಯ ಸ್ಥಳವಾಗುವ ಎಲ್ಲಾ ಲಕ್ಷಣಗಳೂ ಘೋಚರಿಸುತ್ತಿವೆ. ಪುನಹ ಕಾವೇರಿ ದಂಡೆಯಲ್ಲಿಯೇ ಮೈದಳೆದಿರುವ ದೇವಾಲಯವನ್ನು ನೋಡ ನೋಡುತ್ತ ಇಡೀ ದಿವಸ ಸರಿದು ಹೋಗ್ಗಿದ್ದರೆ ಅರಿವೇ ಆಗಲಿಲ್ಲ, ದೇವಾಲಯದ ಎರಡು ದಿಕ್ಕುಗಳನ್ನು ಕಾವೇರಿಯ ಹಿನ್ನೀರು ಆಕ್ರಮಿಸಿಕೊಂಡಿರುವುದು ಮಾತ್ರ ಮತ್ತೆ ದೇವಾಲಯ ಯಾವಾಗ ಮುಳುಗುತ್ತದೆಯೋ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತಲೇ ಇತ್ತು.