Tuesday, January 19, 2010

ಭಾರತೀಯ ಉನ್ನತ ಶಿಕ್ಷಣದ ತಲ್ಲಣಗಳು

ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಡೀಮ್ಡ್ ವಿಶ್ವವಿದ್ಯಾನಿಲಯಗಳ ಪೈಕಿ ೪೪ ಡೀಮ್ಡ್ ವಿಶ್ವವಿದ್ಯಾನಿಲಯಗಳ ಮಾನ್ಯತೆಯನ್ನು ರದ್ದುಗೊಳಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿರುವುದು ಸ್ವಾಗತಾರ್ಹ ಕ್ರಮ. ಕೇಂದ್ರ ಸರ್ಕಾರ ಡೀಮ್ಡ್ ವಿಶ್ವವಿದ್ಯಾನಿಲಯಗಳಿಗೆ ಮಾನ್ಯತೆ ನೀಡಿದ್ದು ಅಲ್ಲದೇ ಸ್ವಲ್ಪ ತಿಂಗಳುಗಳ ಹಿಂದಷ್ಟೇ ಡೀಮ್ಡ್ ಎಂಬ ಪದ ಕೈಬಿಟ್ಟು ಸ್ವತಂತ್ರವಾಗಿ 'ವಿಶ್ವವಿದ್ಯಾಲಯ' ಎಂಬ ಶಿರೋನಾಮೆಯನ್ನು ಬಳಸಲು ಅವುಗಳಿಗೆ ಅನುಮತಿ ನೀಡಿದಾಗಲೇ ನಾಗರೀಕರಲ್ಲಿ ಆತಂಕ ಎದುರಾಗಿತ್ತು. ಆ ಆತಂಕವನ್ನು ಸುಳ್ಳು ಮಾಡದ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಡೀಮ್ಡ್ ವಿವಿಗಳು ತಮ್ಮ ಸ್ವಾಯತ್ತತೆಗೆ ಕುಂದುಂಟುಮಾಡಿಕೊಂಡಿವೆ ಜೊತೆಗೆ ನಾಗರೀಕರ ನಾಡಿ ಮಿಡಿತ ಅರಿತ ಕೇಂದ್ರ ಸರ್ಕಾರ ಕಳಪೆ ಗುಣಮಟ್ಟ ಹಾಗೂ ಸ್ವಾರ್ಥಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಂತಹ ಡೀಮ್ಡ್ ವಿವಿಗಳ ಸ್ವಾಯತ್ತೆಯನ್ನು ರದ್ದುಗೊಳಿಸುವ ಪ್ರಸ್ಥಾವನೆ ನೀಡುವ ಮೂಲಕ ಪ್ರಜ್ಞಾವಂತ ನಾಗರೀಕರ ಆತಂಕಕ್ಕೆ ಮಂಗಳ ಹಾಡಿದೆ.
ಜ್ಞಾನಾಧಾರಿತ ಸಮಾಜ ನಿರ್ಮಾಣ ಈ ದಶಕದ ಸವಾಲೆಂದು ಸ್ವೀಕರಿಸಿರುವ ಯುಪಿಎ ಆಡಳಿತದ ಕೇಂದ್ರ ಸರ್ಕಾರ ಹೇಗಾದರೂ ಸರಿಯೇ ೨೦೧೫ರ ವೇಳೆಗೆ ಈ ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆಯನ್ನು ಶೇಖಡ 15ಕ್ಕೆ ಏರಿಸುವ ಗುರಿ ಇರಿಸಿಕೊಂಡು ಅದನ್ನು ತಲುಪಲು ಅವಿರತವಾಗಿ ಶ್ರಮಿಸುತ್ತಿದೆ. ದೇಶದಲ್ಲಿ ಪ್ರಸ್ತುತ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಶೇಖಡ 7ರ ಆಸುಪಾಸಿನಲ್ಲಿದೆ. 2015ಕ್ಕೆ ಈ ಪ್ರಮಾಣ ಶೇಖಡ 15ರಷ್ಟಾಗಬೇಕೆಂದರೆ ದೇಶದ ಜನಸಂಖ್ಯೆ ಹಾಗೂ ಯುವಜನತೆಯ ಲೆಕ್ಕಾಚಾರಗಳೆಲ್ಲವನ್ನು ಕೂಡಿ ಕಳೆದರೆ ಏಳು(೭) ಹದಿನೈದಾಗಬೇಕೆಂದರೆ ಸರಿಸುಮಾರು ಈಗಿರುವ ಉನ್ನತ ಶಿಕ್ಷಣದ ಸವಲತ್ತುಗಳು ಪುನಹ ಶೇಖಡ ೧೦೦ ರಷ್ಟು ಹೆಚ್ಚಾಗಬೇಕು ಈ ಹಿನ್ನೆಲೆಯಲ್ಲಿ ಈಗಿರುವ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಹಾಗೂ ಉಪನ್ಯಾಸಕರ ಸಂಖ್ಯೆ ಎಲ್ಲವೂ ಎರಡರಷ್ಟು ಹೆಚ್ಚಾಗಲೇ ಬೇಕಾದ ಅನಿವರ್ಯತೆ ಸರ್ಕಾರದ ಮುಂದಿದೆ. ಈ ಗುರಿಯನ್ನು ಕೇವಲ ಸರ್ಕಾರ ವೊಂದೇ ತಲುಪಲು ಸಾಧ್ಯವಿಲ್ಲ ಎಂಬುದನ್ನು ಚನ್ನಾಗಿಯೇ ಅರಿತಿರುವ ಸರ್ಕಾರ ಉನ್ನತ ಶಿಕ್ಷಣದ ಗುರಿಮುಟ್ಟಲು ಖಾಸಗಿಯವರನ್ನು ಅವಲಂಭಿಸಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಸರಳೀಕರಣ ಮಾಡಿದ ಪರಿಣಾಮ ಈಗ ಆಕ್ಷೇವನ್ನೇ ಅತಂತ್ರವನ್ನಾಗಿಸಿದೆ.
ದೇಶದಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಹೆಚ್ಚಾಗ ಬೇಕು ಎಂಬುದು ಪ್ರತಿಯೊಬ್ಬ ಪ್ರಜ್ಞಾವಂತರ ಆಶಯ ಆದರೆ ಅದನ್ನು ತಲುಪಿಸುವ ಆತುರದಲ್ಲಿ ಅದಕ್ಕಾಗಿಯೇ ಇರುವ ರೀತಿ ನೀತಿಗಳನ್ನು ಸರ್ಕಾರವೇ ಮರೆತು ಮುನ್ನಡೆದರೆ ದೇಶದ ಭವಿಷ್ಯದ ಗತಿಯೇನು? ವಿಶ್ವ ಸಂಸ್ಥೆಯ ಮುಂದೆ ತಲೆ ತಗ್ಗಿಸಿ ನಿಲ್ಲಬೇಕಲ್ಲ ಎಂಬ ಒಂದೇ ಒಂದು ಕಾರಣದಿಂದ ದೇಶದ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸಲು ಮುಂದಾದ ಸರ್ಕಾರ ಶಿಕ್ಷಣ ರಂಗದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಮುಂದಾಯಿತು ಹದಿನಾಲ್ಕು ವರ್ಷದ ಒಳಗಿರುವ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆತರಲೇ ಬೇಕು ಎಂಬ ಮಹಾತ್ವಾಕಾಂಕ್ಷೆಯಿಂದ ಮುನ್ನಡೆದ ಸರ್ಕಾರ ವಿಶ್ವವೇ ನಿಬ್ಬೆರಗಾಗಿ ನೋಡುವಂತಹ 'ಸರ್ವಶಿಕ್ಷಾ ಅಭಿಯಾನ' ದಂತಹ ಬೃಹತ್ ಪ್ರಮಾಣದ ಕಾರ್ಯಕ್ರಮವನ್ನೇನೋ ಅನುಷ್ಟಾನ ಗೊಳಿಸಿತು ಆದರೆ ಇದು ಮಕ್ಕಳನ್ನು ಶಾಲೆಗೆ ಕರೆತರಲಷ್ಟೇ ಯಶಸ್ವಿಯಾಯಿತೇ ವಿನಹ ಕಲಿಸುವಲ್ಲಿ ಯಾವುದೇ ಪ್ರಗತಿ ಸಾಧನೆಯಾಗಲಿಲ್ಲ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಸಾಭೀತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಓದುತ್ತಿರುವ ಏಳನೇ ತರಗತಿಯ ಮಕ್ಕಳು ಎರಡನೇ ತರಗತಿಯ ಪುಸ್ತಕ ಓದಲು ಹೆಣಗಾಡುತ್ತಿರುವುದೇ ಇದಕ್ಕೆ ಉತ್ತಮ ಉದಾಹರಣೆ.
ಗುರಿ ಸಾಧನೆಯ ಆತುರದಲ್ಲಿ ಪ್ರಾಥಮಿಕ ಶಿಕ್ಷಣದ ಸ್ಥಿತಿಗತಿಯನ್ನು ಬುಡ ಮೇಲು ಮಾಡಿರುವ ಸರ್ಕಾರ ಈ ವಿದ್ಯಾಮಾನದಿಂದ ಎಚ್ಚೆತ್ತುಕೊಳ್ಳದೇ ಇರುವುದು ದುರಂತವೇ ಸರಿ.
ಇದುವರೆಗೂ ಸರ್ಕಾರಿ ವಲಯದಲ್ಲಿಯೇ ತಕ್ಕ ಮಟ್ಟಿಗೆ ಮುನ್ನಡೆಯುತ್ತಿದ್ದ ಉನ್ನತ ಶಿಕ್ಷಣವನ್ನು ಡೀಮ್ಡ್ ವಿವಿಗಳಿಗೆ ಧಾರೆ ಎರೆಯುವ ಮೂಲಕ ದೇಶದ ಭವಿಷ್ಯಕ್ಕೆ ಕುತ್ತು ತರುವಂತಹ ಕಾಯಕಕ್ಕೆ ಸರ್ಕಾರ ಮುಂದಾಗಿದೆ ಈ ಎಲ್ಲಾ ಬೆಳವಣಿಗೆಗಳ ನಂತರವೂ ಉನ್ನತ ಶಿಕ್ಷಣದ ಸ್ವಾಯತ್ತತೆಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಎರಡು ಬಾರಿ ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗಿದೆ ಡೀಮ್ಡ್ ವಿವಿಗಳು ಸ್ವತಂತ್ರವಾಗಿ ವಿಶ್ವವಿದ್ಯಾನಿಲಯ ಎಂಬ ಶಿರೋನಾಮೆ ಬಳಸಬಹುದು ಎಂದು ಅನುಮತಿ ನೀಡಿದ್ದ ಸರ್ಕಾರ ಸುಪ್ರೀಂನ ಆದೇಶದಂತೆ ಅದನ್ನು ಹಿಂಪಡೆದಿತ್ತು. ಈಗ ಮೂಲಸೌಕರ್ಯ ಒದಗಿಸದ ಹಾಗೂ ಶೈಕ್ಷಣಿಕ ಪರಿಗಣನೆಯ ಮೇಲೆ ನಡೆಯದೆ ಕುಟುಂಬದ ಆಸ್ತಿಯಂತೆ ಬಳಕೆಯಾಗುತ್ತಿದ್ದ ಡೀಮ್ಡ್ ವಿವಿಗಳ ಮಾನ್ಯತೆಯನ್ನು ರದ್ದುಗೊಳಿಸಲು ಮುಂದಾಗಿ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗಿದೆ.
ಶಿಕ್ಷಣ ಎಂಬುವಂತದ್ದು ಯಾವುದೇ ದೇಶದ ಹಾಗೂ ವ್ಯವಸ್ಥೆಯ ಪ್ರಗತಿ ಸೂಚಕವಿದ್ದಂತೆ ಈ ರಂಗದ ಯಾವುದೇ ಹೊಸ ನಿರ್ಧಾರಗಳನ್ನು ಘೋಷಿಸುವ ಮುನ್ನ ಜಾಗ್ರತೆ ಅಗತ್ಯ, ಅಂತಹ ಜವಾಬ್ದಾರಿಯುತವಾದ ಜಾಗೃತೆಯನ್ನು ಸರ್ಕಾರಗಳು ವಹಿಸುವುದು ಅತ್ಯಗತ್ಯ. ಖಾಸಗೀಕರಣ , ಉದಾರೀಕರಣ ಏನೇ ಇರಲಿ ಅವುಗಳ ಲಾಲನೆ ಪಾಲನೆಯ ಕುಣಿಕೆ ಸರ್ಕಾರದ ಕೈಯಲ್ಲೇ ಇರಬೇಕು ಈಗಲೂ ಅದು ಇದೆ, ಆದಾಗ್ಯೂ ಸರ್ಕಾರದ ಕಣ್ತಪ್ಪಿಸಿ ಗುಣಮಟ್ಟದಲ್ಲಿ ರಾಜಿ ಹಾಗೂ ಸ್ವಾರ್ಥ ಸಾಧನೆ ನಡೆಯುತ್ತಲೇ ಸಾಗಿದೆ ಎಂದರೆ ಅದು ಸರ್ಕಾರದ ಆಡಳಿತದ ವೈಕರಿಯನ್ನು ಪ್ರಶ್ನಿಸಬೇಕಾಗುತ್ತದೆ. ಸರ್ಕಾರ ಇಂತಹ ಪರೀಕ್ಷೆಗೆ ತನ್ನನ್ನು ತಾನು ಆಗ್ಗಾಗ್ಗೆ ಒಡ್ಡಿಕೊಳ್ಳುತಲೇ ಇರಬಾರದು. ಈಗೇನು ಸರ್ಕಾರ ತನ್ನ ವಿವೇಚನೆಯಿಂದ ಡೀಮ್ಡ್ ವಿವಿಗಳ ಮಾನ್ಯತೆ ರದ್ದು ಮಾಡಲು ಮುಂದಾಗಿಲ್ಲ ಕೆಲವು ಡೀಮ್ಡ್ ವಿವಿಗಳು ವಾಣಿಜ್ಯ ಉದ್ದೇಶದಿಂದ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲ ಶೈಕ್ಷಣಿಕ ನಿಯಮ ಮತ್ತು ಮಾನದಂಡಗಳನ್ನು ಗಾಳಿಗೆ ತೂರಿವೆ ಆದ್ದರಿಂದ ಇವುಗಳ ವಿರುದ್ದ ಕ್ರಮ ಜರುಗಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಸಚಿವಾಲಯ ಕ್ರಮಕ್ಕೆ ಮುಂದಾಗಿದೆ. ಈ ಅಂಶ ಸರ್ಕಾರಕ್ಕೆ ಉನ್ನತ ಶಿಕ್ಷಣದ ಏಳು ಬೀಳುಗಳ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ.