Wednesday, October 22, 2008

ಮಹಾ ಕುಸಿತವೆಂಬ ಮಹಾಮಾರಿ


ವಿ. ಮಧುಸೂದನ್

ವಿಶ್ವ ಆರ್ಥಿಕ ಮುಗ್ಗಟ್ಟಿನ ಪರಿಣಾಮಗಳು ಒಂದೊಂದಾಗಿಯೇ ಭಾರತದ ಆರ್ಥಿಕ ವ್ಯವಸ್ಥೆಯನ್ನು ಭಾದಿಸಲು ಪ್ರಾರಂಭವಾಗಿದೆ. ಮಹಾಕುಸಿತದ ಪರಿಣಾಮಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಅಂಶವೆಂದರೆ ಉದ್ಯೋಗದ ಕಡಿತ. ಆರ್ಥಿಕ ಹಿಂಜರಿತದಿಂದ ಉಂಟಾಗುತ್ತಿರುವ ಆರ್ಥಿಕ ನಷ್ಟವನ್ನು ಭರಿಸುಕೊಳ್ಳಲು ಕಾರ್ಪೊರೇಟ್ ಸಂಸ್ಥೆಗಳು ಕಂಡು ಕೊಂಡ ಮಾರ್ಗವೇ ಉದ್ಯೋಗದ ಕಡಿತ. ಈ ನೀತಿ ಹೆಚ್ಚು ಭಾದಿಸುವುದು ಭಾರತದಂತಹ ಮಾನವ ಸಂಪನ್ಮೂಲ ಆಧಾರಿತ ರಾಷ್ಟ್ರಗಳನ್ನು. ಈಗಾಗಲೆ ಕೆಲ ವಿಮಾನಯಾನ ಸಂಸ್ಥೆಗಳು ಹಾಗೂ ಕೆಲ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ತಮ್ಮ ಉದ್ಯೋಗದ ಪ್ರಮಾಣದಲ್ಲಿ ಕಡಿತ ಮಾಡಲು ಮುಂದಾಗಿರುವುದು ಎಂತಹವರಿಗೂ ಕರುಳು ಕಲಕುವಂತಹ ವಿಚಾರವಾಗಿದೆ. ಆರ್ಥಿಕ ಮುಗ್ಗಟ್ಟಿನಂತಹ ವಿಚಾರಗಳು ವಿಶ್ವದಲ್ಲಿ ಸಂಭವಿಸುತ್ತಿರುವುದು ಇದೇ ಮೊದಲೇನು ಅಲ್ಲ ಈ ಹಿಂದೆ ಇಂತಹ ಸಂದರ್ಭಗಳು ಅನೇಕ ದೇಶಗಳಿಗೆ ವಿವಿಧ ವ್ಯವಸ್ಥೆಗಳಿಗೆ ಬಂದೊದಗಿವೆ ಆದರೆ ಈ ಬಾರಿಯ ಮುಗ್ಗಟ್ಟು ಹಾಗೂ ಉದ್ಯೋಗ ಕಡಿತ ಒಂದನ್ನೊಂದು ಪರಸ್ಪರ ಅವಲಂಭಿಸಿದ್ದು, ಇದು ಮುಂಬರುವ ದಿವಸಗಳಲ್ಲಿ ಎಂತಹ ಪರಿಣಾಮಗಳನ್ನು ಉಂಟುಮಾಡಲಿವೆ ಎಂಬುದು ಊಹೆಗೆ ನಿಲುಕದ ಸಂಗತಿಯಾಗಿದೆ.
ಈ ಹಿಂದೆಯೇ ಅನೇಕ ಐಟಿ ಸಂಸ್ಥೆಗಳು ಹಲವು ಉದ್ಯೋಗಿಗಳನ್ನು ತನ್ನ ಸಂಸ್ಥೆಯಿಂದ ಬಿಡುಗಡೆ ಮಾಡುತ್ತಿದಂತಹ ಘಟನೆಗಳು ಅಗಾಗ್ಗೆ ಸಂಭವಿಸುತ್ತಿದ್ದವು ಆದರೆ ಈಗ ಅದು ಹಲವು ಕಂಪೆನಿಗಳಿಗೆ ಅನಿವಾರ್ಯವಾಗಿದೆ. ಈಗ ಮಾಡುತ್ತಿರುವ ಉದ್ಯೋಗದ ಕಡಿತ ಏಕೆ ಮಹತ್ವ ಪಡೆದುಕೊಂಡಿದೆ ಎಂದರೆ ಇಂದು ಉದ್ಯೋಗ ಎಂಬುದು ಮಧ್ಯಮ ವರ್ಗದ ಜನರ ಜೀವನ ಶೈಲಿಯನ್ನು, ವಿಧಾನವನ್ನು ಬಹಳ ಗಮನಾರ್ಹವಾಗಿ ಬದಲಿಸಿದ ಸಂಗತಿಯಾಗಿದೆ. ಇದಕ್ಕೆ ಕಾರಣವೆಂದರೆ ಮುಂದುವರೆದ ತಂತ್ರಜ್ಞಾನ, ಉತ್ತಮವಾದಂತಹ ಆರ್ಥಿಕ ಪ್ರಗತಿ ಹಾಗೂ ಯೋಗ್ಯ ಸಂಪನ್ಮೂಲದ ಲಭ್ಯತೆ ಎಂದರೆ ತಪ್ಪಾಗಲಾರದು. ಹೀಗೆ ಒಂದು ಸಾಮಾಜಿಕ ಸ್ಥರವನ್ನೆ ಬದಲಾವಣೆ ಮಾಡಿದ ಮಹತ್ವದ ಅಂಶ ಇಂದು ಬುಡಸಮೇತ ಅಲುಗಾಡಿಸುತ್ತಿದೆ ಎಂದರೆ ಅದು ಮಹತ್ವದ ಅಂಶವೇ ಸರಿ. ಎಂಬತ್ತರ ದಶಕದ ನಂತರ ಸ್ಪರ್ಧೆಗೆ ತನ್ನನ್ನು ತಾನು ತೆರದುಕೊಂಡ ವಿಶ್ವದ ಉದ್ಯಮ ಅನೇಕ ಕ್ರಾಂತಿಗಳಿಗೆ ಕಾರಣವಾಯಿತು. ಇದರ ಸಲುವಾಗಿ ಮೂರಂಕೆಯಲ್ಲಿದ್ದ ಸಂಬಳ ಆರು ಅಂಕೆಗಳ ವರೆಗೂ ಏರಿಕೆಯಾಯ್ತು, ಮೂರು ಕಾಸಿಗೆ ಬಾಳುತ್ತಿದ್ದವರನ್ನೆಲ್ಲಾ ಆರು ಕಾಸಿಗೆ ನೇಮಕ ಮಾಡಿಕೊಂಡಿದ್ದು ಕಾರ್ಪೊರೇಟ್ ಕಂಪೆನಿಗಳು ಅದೇ ಕಾರ್ಪೊರೇಟ್ ಕಂಪೆನಿಗಳು ದುಡಿದ ಆರು ಕಾಸನ್ನು ಖರ್ಚು ಮಾಡುವುದು ಹೇಗೆ ಎಂಬ ವಿಧಾನಗಳನ್ನು ಸ್ಪಷ್ಟವಾಗಿ ಹೇಳಿಕೊಟ್ಟವು ಇದೆಲ್ಲದರ ನಂತರ ಹೇಗೋ ಒಂದು ಹಂತ ತಲುಪಿ ಇದೇ ಉತ್ತಮ ಜೀವನ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದ ಜನ ತತ್ತರಿಸುವಂತಹ ಕಾಲ ಇದಾಗಿದೆ.
ಕೈತುಂಬಾ ಐದರಿಂದ ಆರು ಅಂಕೆಗಳ ಸಂಬಳ ಪಡೆಯುತ್ತಿದ್ದ ಯುವ ಜನತೆ ಎಗ್ಗು ಸಿಗ್ಗಿಲ್ಲದಂತೆ ಖರ್ಚು ಮಾಡಿ ಜೀವನದ ಅನುಭವ ಹೊಂದುತ್ತಿದ್ದರು. ಕಾರು, ಫ್ಲಾಟುಗಳೆಂಬ ನಕ್ಷತ್ರಕ್ಕೆ ಕೈಚಾಚಲು ಸಾಲವೆಂಬ ಏಣಿಯನ್ನು ಹತ್ತಿ ಎತ್ತರಕ್ಕೆ ಏರುತ್ತಿದ್ದವರಿಗೆ ಈಗ ಸಂಕಷ್ಟ ಬಂದೊದಗಿದೆ. ಸಂಬಳವನ್ನೇ ಆಧರಿಸಿ ಅನೇಕ ಕಮಿಟ್ ಮೆಂಟ್ಗಳನ್ನು ಮಾಡಿಕೊಂಡಿದ್ದ ಜನರನ್ನ ಏಕಾ ಏಕಿ ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂಬ ಮೆಸೇಜುಗಳು ಬರ ಸಿಡಿಲಿನಂತ ಬಂದಪ್ಪಳಿಸುತ್ತಿದ್ದರೆ ಮಾಯಾನಗರಿಗಳಲ್ಲಿ ಆಫೀಸು ಎಂಬ ಸ್ವರ್ಗದಲ್ಲಿ ದುಡಿಯುತ್ತಿದ್ದ ಜನತೆ ಗ್ರಾಮೀಣ ಭಾಗದ ರೈತರಂತೆ ಆತ್ಮಹತ್ಯಾ ಸರಣಿಗೆ ಕೊರಳೊಡ್ಡುವ ದಿವಸಗಳು ಹತ್ತಿರವಾಗುತ್ತಿವೆಯೇನೋ ಎಂಬಂತೆ ಬಾಸವಾಗುತ್ತಿವೆ.

Tuesday, October 7, 2008

ವಿಜಯ ದಶಮಿಯ ಸಂಕಲ್ಪ



ಭಾರತದಲ್ಲಿ ಆಚರಣೆಯಲ್ಲಿರುವ ವಿವಿಧ ಹಬ್ಬಗಳಂತೆ ದಸರೆಯೂ ಸಹ ಐತಿಹಾಸಿಕವಾದ ಮಹತ್ವವನ್ನು ಹೊಂದಿದೆ. ಆಶ್ವೀಜ ಶುದ್ದ, ಪಾಡ್ಯದಿಂದ ದಶಮಿಯವರೆಗೆ ಹತ್ತು ದಿವಸಗಳ ಕಾಲ ಆಚರಿಸಲ್ಪಡುವ ಹಬ್ಬವನ್ನು ದಸರಾ, ದಶಹರ ಹಾಗೂ ನವರಾತ್ರಿ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಈ ನವರಾತ್ರಿ ಅಥವಾ ಹತ್ತು ದಿವಸಗಳ ಕಾಲಾವಧಿಯಲ್ಲಿ ಬಹಳ ಮಹತ್ವ ಪಡೆದುಕೊಂಡಿರುವುದು ಕೊನೆಯ ದಿವಸಗಳಾದ ಮಹಾನವಮಿ ಮತ್ತು ವಿಜಯದಶಮಿಗಳು. ಇವು ದಸರೆಯ ದಿನಗಳಲ್ಲಿಯೇ ಬಹಳ ಮುಖ್ಯವಾದ ದಿವಸಗಳಾಗಿವೆ. ಈ ದಿವಸಗಳನ್ನು ಐತಿಹಾಸಿಕವಾಗಿ ದಾನವರಿಗೂ, ದೇವರಿಗೂ ನಡೆದ ಯುದ್ದದಲ್ಲಿ ದೇವತೆಗಳಿಗೆ ಉಂಟಾದ ವಿಜಯವನ್ನು ಆಚರಿಸುವ ಪದ್ದತಿ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಶ್ರೀರಾಮ ಲಂಕೆಯ ಮೇಲೆ ದಂಡೆತ್ತಿ ರಾವಣನನ್ನು ಸಂಹರಿಸಿ ವಿಜಯ ಸಾಧನೆಗೈದ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ಹೀಗೆಯೇ ಮುಹಿಷಾಸುರರಂತಹ ದುಷ್ಟ ಶಕ್ತಿಗಳನ್ನು ಸಂಹರಿಸಿದ ವಿಜಯದ ಸಂಕೇತವಾಗಿ ಪ್ರಾಚೀನ ಕಾಲದಿಂದಲೂ ಭಾರತದ ಎಲ್ಲೆಡೆಯೂ ಈ ಹಬ್ಬವನ್ನು ಆಚರಿಸುವ ಪದ್ದತಿ ನಡೆದು ಬಂದಿದೆ. ಈ ದಿನಗಳ ವಿಶೇಷ ಎಂದರೆ ಶಕ್ತಿ ಪೂಜೆ.

ಕರ್ನಾಟಕದಲ್ಲಿ ಈ ಹಬ್ಬವನ್ನು ಬಹಳ ವೈಭವದಿಂದ ವಿಜಯನಗರದ ಕಾಲದ ಸಾಮ್ರಾಜ್ಯದಲ್ಲಿ ಆಚರಿಸಲಾಗುತ್ತಿತ್ತು ಎಂಬುದಕ್ಕೆ ಅನೇಕ ಆಧಾರಗಳಿವೆ ಬಹುಮುಖ್ಯವಾಗಿ ವಿದೇಶಿ ಯಾತ್ರಿಕರಾದ ಅಬ್ದುಲ್ ರಜಾಕ್, ಪೆಯಾಸ್, ನ್ಯೂನಿಜ್ ಮೊದಲಾದವರು ತಮ್ಮ ಗ್ರಂಥಗಳಲ್ಲಿ ವಿಜಯನಗರದ ದಸರೆಯ ಸಂಭ್ರಮವನ್ನು ವರ್ಣಿಸಿದ್ದಾರೆ. ಮಳೆಗಾಲ ಇಳಿಮುಖಗೊಂಡು ಬಿಡುವಿರುತ್ತಿದ್ದ ಈ ಸಂದರ್ಭವನ್ನು ರಾಜ ಮಹಾರಾಜರು ಯುದ್ದಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು ನೆರೆ ರಾಜ್ಯಗಳ ಮೇಲೆ ದಂಡೆತ್ತಿ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವುದೇ ಈ ಯುದ್ದಗಳ ಮಹತ್ವವಾಗಿತ್ತು. ಹೀಗೆ ಕದನ ನಿರ್ಧರಿಸಿ ಯುದ್ದಕ್ಕೆ ಅಣಿಯಾಗುವ ಕಾಲವಾಗಿಯೂ ಸಹ ದಸರೆಯನ್ನು ಆಚರಿಸಲಾಗುತ್ತಿತ್ತು ಈ ವೇಳೆ ಇಡೀ ಸಾಮ್ರಾಜ್ಯದ ವಿವಿಧ ಭಾಗದ ಸೈನ್ಯಗಳು ಒಂದೆಡೆ ಜಮಾವಣೆಯಾಗುತ್ತಿತ್ತು. ಸಾಮಂತರು, ಮಂಡಲಾಧಿಪತಿಗಳು, ದಂಡನಾಯಕರು ತಮ್ಮ ತಮ್ಮ ಸೈನ್ಯಗಳ ಜೊತೆಗೆ ರಾಜಧಾನಿಗೆ ಆಗಮಿಸಿ ತಮ್ಮ ಸೈನ್ಯಗಳ ಪ್ರದರ್ಶನ ನಡೆಸುತ್ತಿದ್ದರು ಇದರ ಜೊತೆ ಜೊತೆಯಲ್ಲಿಯೇ ಕಪ್ಪ ಕಾಣಿಕೆಗಳನ್ನು ಒಪ್ಪಿಸಲೂ ಸಹ ಈ ಕಾಲವನ್ನು ನಿಶ್ಚಯಿಸಿಕೊಳ್ಲಲಾಗಿತ್ತು.

ಈ ಎಲ್ಲಾ ತಾಲೀಮು, ತಯಾರಿ ಹಾಗೂ ಪ್ರದರ್ಶನವನ್ನು ವೀಕ್ಷಿಸಲು ಉನ್ನತವಾದ, ಭವ್ಯವಾದ ಮಂಟಪವನ್ನು ಸಹ ನಿರ್ಮಿಸಲಾಗುತ್ತಿತ್ತು. ಹಂಪಿಯಲ್ಲಿ ಈಗಲೂ ಇರುವ ಮಹಾನವಮಿ ದಿಬ್ಬದ ಅವಶೇಷವೇ ಇದಕ್ಕೆ ಉದಾಹರಣೆ. ನವರಾತ್ರಿಯ ಒಂಬತ್ತು ದಿನಗಳೂ ಸಹ ಸಂಜೆ ರಾಜನು ಈ ಅತ್ಯುನ್ನತವಾದ ಮಂಟಪದಲ್ಲಿ ರತ್ನಖಚಿತವಾದ ಸಿಂಹಾಸನದ ಮೇಲೆ ಕುಳಿತು ಪ್ರದರ್ಶನವನ್ನು ವೀಕ್ಷಿಸುತ್ತಿದ್ದ.

ರಣಬಲಿಯಿಂದ ಆರಂಭವಾಗಿ ಪಟ್ಟದ ಕುದುರೆ ಆನೆಗಳನ್ನು ಪುರೋಹಿತರು ಪೂಜಿಸುತ್ತಿದ್ದರು ಈ ಮಂಟಪದಲ್ಲಿ ನೃತ್ಯ, ಗಾಯನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸಹ ನಡೆಯುತ್ತಿದ್ದವು, ಒಂಬತ್ತು ದಿವಸಗಳ ಕಾಲವೂ ಸಹ ವಿಧವಿಧವಾದ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು ಜೊತೆಗೆ ವಿವಿಧ ಸ್ಪರ್ಧೆಗಳೂ ಸಹ ನಡೆಯುತ್ತಿದ್ದವು ಗೆದ್ದವರಿಗೆ ರಾಜ ಬಹುಮಾನಗಳನ್ನು ವಿತರಿಸುತ್ತಿದ್ದ.

ನವಮಿಯ ದಿವಸ ಆಯುಧ ಪೂಜೆ ಹಮ್ಮಿಕೊಳ್ಳಲಾಗುತ್ತಿತ್ತು ಆ ವೇಳೆಗೆ ಕಪ್ಪ ಕಾಣಿಕೆಗಳ ಒಪ್ಪಿಸುವಿಕೆ ಮುಗಿದು ಜೈತ್ರಯಾತ್ರೆಗೆ ಪೂರ್ಣ ಸಿದ್ಧತೆ ನಡೆಸಿದಂತಾಗುತ್ತಿತ್ತು. ರಾಜರೂ ಹಾಗೂ ಅವರ ಸೈನಿಕರು ಶತ್ರುನಿಗ್ರಹಕ್ಕಾಗಿ ಬಳಸುತ್ತಿದ್ದ ಆಯುಧಗಳನ್ನು ಪೂಜಿಸುತ್ತಿದ್ದರು ಅಂತೆಯೇ ಜನಸಾಮಾನ್ಯರು ತಮ್ಮ ಜೀವನ ಪಯಣಕ್ಕೆ ಅನುಕೂಲ ಕಲ್ಪಿಸುತ್ತಿದ್ದ ಕೊಡಲಿ, ಕುಡುಗೋಲು, ನೇಗಿಲುಗಳನ್ನು ಪೂಜಿಸುತ್ತಿದ್ದರು ಆಧುನೀಕರಣ ಮುಂದುವರೆದಂತೆಲ್ಲ ಯಂತ್ರಗಳನ್ನು ಪೂಜಿಸುವ ಪರಿಪಾಠ ಬೆಳೆದು ಬಂತು.

ಈ ಎಲ್ಲಾ ಪ್ರದರ್ಶನ ಹಾಗೂ ಆಚರಣೆ ಅರಸರಿಗೆ ಪ್ರಮುಖವಾದುದಾಗಿತ್ತಾದರೂ ಅದನ್ನು ಜನಸಾಮಾನ್ಯರೂ ಆಚರಿಸುತ್ತಿದ್ದರು, ಬಹುಷ ಅದೇ ಇಂದು ದಸರಾ ಪಡೆದುಕೊಂಡಿರುವ ವೈಭವ ಹಾಗೂ ಸಂಭ್ರಮವನ್ನು ಪಡೆಯುತ್ತಿರಲಿಲ್ಲ ಅದಕ್ಕೆ ಬದಲಾಗಿ ಜನಸಾಮಾನ್ಯರು ಸಹ ಈ ಆಚರಣೆಯಲ್ಲಿ ಪಾಲ್ಗೊಂಡು ಸ್ವತಹ ಆಚರಿಸಿದ್ದುದ್ದರಿಂದ ಅದು ಮತ್ತಷ್ಟು ಸಂಭ್ರಮವನ್ನು ಹೊಂದಿತ್ತು.

ವಿಜಯನಗರದ ರಾಜಧಾನಿಯಲ್ಲಿ ಮಹಾನವಮಿಯ ಉತ್ಸವಕ್ಕಾಗಿ ಪ್ರತಿ ಮನೆ ಮನೆಯ ಮುಂದೆ ಮಂಟಪಗಳನ್ನು , ತೋರಣಗಳನ್ನು ನಿರ್ಮಿಸಿ ಉತ್ಸವ ಆಚರಿಸುತ್ತಿದ್ದರು ಹಾಗೂ ಅರಸರು ಆಚರಿಸುತ್ತಿದ್ದುದನ್ನು ಅನುಕರಿಸುವ ಸಲುವಾಗಿ ಪ್ರತಿ ಮನೆಯಲ್ಲಿಯೂ ಗೊಂಬೆಗಳನ್ನು ಕೂರಿಸಿ ರಾಜರು ನಡೆಸುತ್ತಿದ್ದ ದರ್ಬಾರನ್ನು ಅನುಕರಣೆ ಮಾಡುತ್ತಿದ್ದರು. ಗೊಂಬೆಗಳನ್ನು ಕೃತಕ ಆಭರಣ ಹಾಗೂ ವಸ್ತ್ರಗಳಿಂದ ಅಲಂಕರಿಸಿ ತಮ್ಮ ಕಲಾವಂತಿಕೆಯ ಜಾಣ್ಮೆ ಮೆರೆಯುತ್ತಿದ್ದರು.

ಈ ಪರಿಯ ವೈಭವದಲ್ಲಿ ನಡೆಯುತ್ತಿದ್ದ ದಸರಾ ಆಚರಣೆ ವಿಜಯನಗರ ಸಾಮ್ರಾಜ್ಯದ ಅವನತಿಯೊಂದಿಗೆ ಈ ಆಚರಣೆಯೂ ಅವನತಿ ಹೊಂದಿತು. ಆನಂತರ ಮೈಸೂರಿನ ಅರಸರು ವಿಜಯನಗರದ ಮಾಧರಿಯನ್ನು ಅನುಕರಿಸಿ ಹತ್ತು ದಿನಗಳ ದಸರೆಗೆ ತಮ್ಮದೇ ಆದಂತಹ ಹೊಸ ಮೆರುಗನ್ನು ನೀಡಿದರು. ಮೈಸೂರನ್ನು ಆಳಿದ ವಿವಿಧ ಅರಸರ ಕಾಲದಲ್ಲಿ ಬಗೆ ಬಗೆಯಾದ ಆಚರಣೆ ಉತ್ಸವಗಳನ್ನು ಮೈಗೂಡಿಸಿಕೊಂಡ ಮೈಸೂರು ದಸರಾ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ವಿಶ್ವವಿಖ್ಯಾತ ಮೈಸೂರು ದಸರೆ ಎಂದೆನಿಸಿಕೊಂಡಿತು.

ಮೈಸೂರರಸರ ಆಡಳಿತ ಕೊನೆಗೊಂಡ ಮೇಲೆ ತನ್ನ ವಿನ್ಯಾಸದಲ್ಲಿ ಅಲ್ಪ ಮಾರ್ಪಾಡುಗಳನ್ನು ಮಾಡಿಕೊಂಡು ದಸರೆ ಇಂದಿಗೂ ಆಚರಿಸಲ್ಪಡುತ್ತಿದೆ. ಒಟ್ಟಾರೆ ದಸರೆ ಎಂಬುದು ಆರಂಭವಾದುದೇ ದುಷ್ಟ ಸಂಹಾರದ ವಿಜಯದ ಸಂಕೇತವಾಗಿದೆ ಆದರೆ ಇಂದು ಅದರ ಮೂಲ ಆಶಯವನ್ನು ಮರೆತು ಕೇವಲ ವೈಭವ, ಸಂಭ್ರಮ, ಮೋಜು, ಮಸ್ತಿಗಾಗಿ ದಸರೆ ಆಚರಿಸ್ಪಡುತ್ತಿದೆ ಇದರ ಜೊತೆ ಜೊತೆಗೆ ದಸರಾ ಉತ್ಸವ ವಾಣಿಜ್ಯೀಕರಣಗೊಂಡಿದೆ. ದಸರೆಯ ಹೆಸರಿನಲ್ಲಿ ಪ್ರವಾಸಿಗರ ಆಕರ್ಷಣೆ, ವ್ಯಾಪಾರ, ಪ್ರಯೋಜಕತ್ವಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ.

ಯಾವುದೋ ಕಾಲದ ಏಕೈಕ ದುಷ್ಟ ಸಂಹಾರದ ವಿಜಯದ ಸಂಕೇತವಾಗಿ ದಸರೆ ಆಚರಿಸ್ಪಡಲಾಯ್ತು ಆದರೆ ದುಷ್ಟ ಶಕ್ತಿಯ ಸಂಪೂರ್ಣ ಹನನವಾಗಲಿಲ್ಲ. "ಸತ್ಯಕ್ಕೆ ಸಾವಿಲ್ಲ" ಎಂಬ ಮಾತು ಎಷ್ಟು ಸತ್ಯವೋ, ದುಷ್ಟ ಅಟ್ಟಹಾಸಕ್ಕೂ ಕೊನೆಯಿಲ್ಲ ಎಂಬುದು ಇತಿಹಾಸದಿಂದ ಹಾಗೂ ಇಂದು ಸಂಭವಿಸುತ್ತಿರುವ ವಿದ್ಯಾಮಾನಗಳಿಂದ ಸಾಬೀತಾಗುತ್ತಿದೆ. ಕಾಲಕಾಲಕ್ಕೆ ವಿವಿಧ ಪರಿಸ್ಥಿತಿಗಳಿಗೆ ಅನುಗುಣವಾಗಿ ದುಷ್ಟ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇಂದಿಗೂ ನಮ್ಮ ಸಮಾಜವನ್ನು ಭಾದಿಸುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ, ಮತಾಂದತೆ ಇವುಗಳೂ ಸಹ ದುಷ್ಟ ಚಟುವಟಿಕೆಯ ವಿವಿಧ ಮುಖಗಳು, ಜಾಗೃತಿಯ ಮೂಲಕ ಇವುಗಳ ಸಂಹಾರವೂ ಆಗಬೇಕು ಆಗ ಮಾತ್ರ ವಿಜಯದಶಮಿ ಆಚರಣೆ ಅರ್ಥ ಬಂದೀತು.

Friday, August 22, 2008

ಇವರೂ ರೈತರೆ ಇತ್ತಲೂ ನೋಡಿ


ವಿ.ಮಧುಸೂದನ್

ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೂರನೇ ದಿನದತ್ತ ಮುನ್ನಡೆಯುತ್ತಿದೆ. ಅಧಿಕಾರಕ್ಕೆ ಬಂದ ದಿವಸದಿಂದಲೂ ತಾವು ರೈತಪರ ರಾಜಕಾರಣಿ ಎಂಬುದನ್ನು ತೋರಿಸಿಕೊಳ್ಳಲು ಪರಿಪರಿಯಾಗಿ ಮಾತನಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದುವರೆಗೆ ಕೇವಲ ಮಾತನಾಡಿದ್ದೇ ಆಯಿತು. ತಾವು ಚುನಾವಣೆಯ ಪೂರ್ವದಲ್ಲಿ ರೈತರಿಗೆ ಅನುಕೂಲವಾಗುವಂತಹ ಕೆಲವು ಅಂಶಗಳನ್ನು ಏನು ಘೋಷಿಸಿದ್ದರೋ ಅದಷ್ಟೇ ಪ್ರಸ್ತುತ ರೈತರ ಅಗತ್ಯ ಅದನ್ನು ಹೊರತು ಪಡಿಸಿ ರಾಜ್ಯದ ರೈತರಿಗೆ ಯಾವುದೇ ಸಮಸ್ಯೆಗಳೂ ಇಲ್ಲ ಎಂದು ಮುಖ್ಯಮಂತ್ರಿಗಳು ಭಾವಿಸಿದಂತಿದೆ. ಆರಂಭ ಶೂರತ್ವ ಎಂಬಂತೆ ಅಧಿಕಾಕ್ಕೆ ಏರಿದ ಮೊದಲ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳನ್ನು ಸುತ್ತಿ ಅಲ್ಲೆಲ್ಲ ರೈತರನ್ನೂ ಒಳಗೊಂಡಂತೆ ವಿವಿಧ ಸಭೆ, ಸಂವಾದಗಳನ್ನು ಮಾಡಿದ ಯಡಿಯೂರಪ್ಪ ಆಪರೇಷನ್ ಕಮಲಕ್ಕೆ ಕೈ ಹಾಕಿದ ಮೇಲೆ ಅವುಗಳನ್ನೆಲ್ಲಾ ಮರೆತಂತಿದೆ. ರೈತರನ್ನು ಪುನಹ ನೆನಪು ಮಾಡಿಕೊಳ್ಳುವಂತಹ ವಿದ್ಯಾಮಾನಗಳು ರಾಜ್ಯದಲ್ಲಿ ನಡೆಯುತ್ತಿದ್ದರೂ ಸಹ ಅವರು ಯಾಕೋ ಅತ್ತ ಮನಸ್ಸು ಮಾಡುತ್ತಿಲ್ಲ.


ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಆಲೋಗಡ್ಡೆ ಬೆಳೆ ಈ ಸಾಲಿನಲ್ಲಿ ಹೇಗೆ ನೆಲಕಚ್ಚಿದೆ ಎಂದರೆ ಅದನ್ನು ಹಾಸನ ಜಿಲ್ಲೆಗೆ ಹೋಗಿ ನೋಡಿದರೆ ಅದರ ಹಾನಿಯ ಪ್ರಮಾಣ ಏನು ಎಂಬುದು ಗೊತ್ತಾಗುತ್ತದೆ. ಹಾಸನದ ರೈತರಿಗೆ ಹಣ ಹರಿದು ಬರುವುದೇ ಆಲೋಗಡ್ಡೆಯಿಂದ ರಾಜ್ಯದಲ್ಲಿಯೇ ಅಪಾರ ಪ್ರಮಾಣದ ಆಲೋಗಡ್ಡೆಯನ್ನು ಇಲ್ಲಿ ಬೆಳೆಯಲಾಗುತ್ತದೆ. ವಾಣಿಜ್ಯ ನಗರಿ ಮುಂಬೈನ ಆಲೋಗಡ್ಡೆ ಬೇಡಿಕೆ ಈಡೇರುವುದೇ ಹಾಸನದಲ್ಲಿ ಬೆಳೆಯುವ ಆಲೋಗಡ್ಡೆಯಿಂದ . ಈ ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು ೪೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು ೭೧ ಸಾವಿರಕ್ಕೂ ಅಧಿಕ ಕೃಷಿಕರು ಆಲೂಗಡ್ಡೆ ಬೆಳೆಯುತ್ತಾರೆ ಎಂಬ ಅಂಶವನ್ನು ಕೃಷಿ ಇಲಾಖೆಯಲ್ಲಿ ದಾಖಲಿಸಲಾಗಿದೆ. ಇಲ್ಲಿ ರಾಷ್ಟ್ರದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಆಲೂಗಡ್ಡೆಯನ್ನು ಬೆಳೆಯಲಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಆಲೂಗಡ್ಡೆ ಬೆಳೆಯುತ್ತಾರಾದರೂ ಈಚಿನ ದಿವಸಗಳಲ್ಲಿ ಬಹಳ ಜನಪ್ರೀಯವಾಗಿರುವ ಕುರ್ಕುರೆ, ಲೇಸ್, ಬಿಂಗೋ, ಪೆಪ್ಸಿಯಂತಹ ಬಹುರಾಷ್ಟ್ರೀಯ ಕಂಪೆನಿಗಳು ಉತ್ಪಾದಿಸುತ್ತಿರುವ ಅಲೂಗಡ್ಡೆ ಆಧಾರಿತ ಆಹಾರ ಪದಾರ್ಥಗಳಿಗೆ ಬಹುತೇಕ ಹಾಸನ ಜಿಲ್ಲೆಯಲ್ಲಿ ಬೆಳೆಯುವ ಆಲೂಗಡ್ಡೆಯೇ ಹೆಚ್ಚು ಪ್ರಮಾದಲ್ಲಿ ಸರಬರಾಜಾಗುತ್ತಿದೆ. ಹಾಸನ ಜಿಲ್ಲೆಯ ಅಲೂಗಡ್ಡೆ ಇಲ್ಲಿ ನಡೆಸುವ ವಾರ್ಷಿಕ ವಹಿವಾಟು ಸುಮಾರು ೩೦೦ ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿದೆ. ಇದುವರೆಗೆ ಕೇವಲ ಬೆಲೆ ಸಮಸ್ಯೆ ಎದುರಿಸುತ್ತಿದ್ದ ಆಲೂ ಬೆಳೆ ಈಗ ರೋಗ ಬಾಧೆಗೆ ಒಳಗಾಗಿದೆ. ಅಂಗಮಾರಿ ಹೆಸರಿನ ಈ ರೋಗ ಬಿಳಿಯ ಹೂವ್ವಿನೊಂದಿಗೆ ನಳನಳಿಸಬೇಕಿದ್ದ ಆಲೋಗಡ್ಡೆಯನ್ನು ಸಾಲು ಸಾಲಾಗಿ ಮಲಗಿಸಿ ಬಿಟ್ಟಿದೆ. ಜಿಲ್ಲೆಯ ಚನ್ನರಾಯಪಟ್ಟಣ, ಹೊಳೇನರಸೀಪುರ, ಅರಕಲಗೂಡು, ಹಾಸನ, ಆಲೂರು ಹಾಗೂ ಬೇಲೂರು ತಾಲ್ಲೊಕುಗಳಲ್ಲಿ ಹೆಚ್ಚು ಪ್ರಮಾಣದ ಆಲೂ ಬೆಳೆಯಲಾಗುತ್ತಿದ್ದು ಈ ತಾಲ್ಲೂಕುಗಳಲ್ಲಿ ಎಲ್ಲಿ ನೋಡಿದರೂ ರೋಗದಿಂದ ಕಪ್ಪು ಹಿಡಿದಿರುವ ಆಲೂಗಡ್ಡೆ ಗಿಡಗಳು ಹಾಸಿ ಹೊದ್ದಂತೆ ಮಲಗಿಬಿಟ್ಟಿದೆ. ಆಲ್ಲೂಗಡ್ಡೆ ಬೆಳೆಯ ಬಗ್ಗೆ ಅತೀವವಾದ ವಿಶ್ವಾಸ ಇರಿಸಿಕೊಂಡಿರುವ ಈ ಜಿಲ್ಲೆಯ ರೈತರು ಸಾಲಾ ಸೂಲದ ಜೊತೆಗೆ ತಮ್ಮ ಪತ್ನಿಯರ ಚಿನ್ನಾಭರಣಗಳನ್ನು ಮಾರಿ, ಅಡವಿಟ್ಟು ಇಲ್ಲಿ ಆಲೂಗಡ್ಡೆ ಭಿತ್ತನೆ ಮಾಡುತ್ತಾರೆ. ಆದರೆ ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇಖಡ ೯೨ % ರಷ್ಟು ಆಲೂಗಡ್ಡೆ ಬೆಳೆ ಅನಾರೋಗ್ಯಕ್ಕೆ ಒಳಗಾಗಿದ್ದು, ಈಗ ಅವರೆಲ್ಲರೂ ಸಂಕಷ್ಟದಲ್ಲಿದ್ದು ಅವರ ಗೋಳನ್ನು ಕೇಳುವವರೇ ಇಲ್ಲ.


ಪರಿಸ್ಥಿತಿ ಹೀಗಿರುವಾಗಲೇ ಯಡಿಯೂರಪ್ಪ ಹಾಸನ ಜಿಲ್ಲೆಗೆ ಭೇಟಿ ನೀಡಿದ್ದರು ಆಗ ಅವರನ್ನು ಭೇಟಿಯಾಗಿದ್ದ ರೈತರ ಅಹವಾಲು ಏನು ಎಂಬುದನ್ನು ಪೂರ್ಣವಾಗಿ ಕೇಳುವಂತಹ ಸಂಯಮವನ್ನು ಸಹ ಮುಖ್ಯಮಂತ್ರಿಗಳು ತೋರಲಿಲ್ಲ. ನೈಸರ್ಗಿಕ ರೋಗಕ್ಕೆ ಕೃಷಿ ಅಧಿಕಾರಿಗಳೇ ಕಾರಣ ಎಂದು ಹರಿಹಾಯ್ದ ಅವರು ಕೃಷಿ ಇಲಾಖೆ ಅಧಿಕಾರಿಗಳು ಕತ್ತೆ ಕಾಯುತ್ತಿದ್ದಾರೆಯೇ ಎಂದು ತನ್ನ ಉದ್ಧಟತನವನ್ನು ತೋರಿ ತಿರುಗಿಯೂ ನೋಡದೆ ಬೆಂಗಳೂರಿಗೆ ಹಾರಿ ಹೋದರು. ರಾಜ್ಯದ ಮುಖ್ಯಮಂತ್ರಿಯಾಗಿ ಒಂದು ಜಿಲ್ಲೆಯ ರೈತರ ಸಂಕಷ್ಟಕ್ಕೆ ಭಾಗಿಯಾಗದ ಇವರು ಇನ್ನು ರಾಜ್ಯದ ರೈತರ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೋ ಎಂಬುದನ್ನು ಊಹಿಸಿಕೊಳ್ಳಲು ಇದು ಸಕಾಲವಾಗಿದೆ. ರಾಜಕೀಯ ದ್ವೇಶಕ್ಕೆ ಒಂದು ಜಿಲ್ಲೆಯ ಕೃಷಿಕರನ್ನು ಬಲಿ ಮಾಡುವುದು, ಅವರನ್ನು ನಿರ್ಲಕ್ಷಿಸುವುದು ಸರಿಯಾದ ಕ್ರಮವಲ್ಲ ರಾಜಕೀಯ ಗೊಂದಲಗಳು ಏನೇ ಇರಬಹುದು ಆದರೆ ಇಡೀ ಜಿಲ್ಲೆಯಲ್ಲಿ ಸತತ ಆರು ತಿಂಗಳುಗಲ ಕಾಲ ಸಾವಿರಾರು ಜನರಿಗೆ ಉದ್ಯೋಗ ನೀಡುವ ಒಂದು ಕೃಷಿ ಉತ್ಪನ್ನದ ಸಮಸ್ಯೆಯನ್ನು ನಿರ್ಲಕ್ಷಿಸುವುದು ಅವಿವೇಕಿತನದ ಪರಮಾವಧಿ ಅಲ್ಲದೇ ಮತ್ತೇನೂ ಅಲ್ಲ.
ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆದರೂ ಅದು ಒಂದು ಅಲ್ಪಾವಧಿಯ ಬೆಳೆ ಕೇವಲ ಎರಡೇ ಎರಡು ತಿಂಗಳಲ್ಲಿ ಮುಗಿದು ಹೋಗುತ್ತದೆ. ಇಂತದ್ದೆ ಅನೇಕ ಬೆಳೆಯನ್ನು ಇಲ್ಲಿ ಬೆಳೆಯಲಾಗುತ್ತಿದೆ ಹಾಗಾಗಿ ಸಮಸ್ಯೆ ಇಲ್ಲ ಎಂದು ಅನೇಕರು ವಾದಿಸುತ್ತಾರೆ. ಆದರೆ ಆಲೂಗಡ್ಡೆ ಅಲ್ಪಾವಧಿ ಬೆಳೆಯಾದರೂ ಸಹ ಇದರ ಮೇಲೆ ಅಪಾರ ಪ್ರಮಾಣದ ಬಂಡವಾಳ ಹೋಡಿಕೆಯಾಗುತ್ತದೆ. ಆಲೂಗಡ್ಡೆಯ ಸಾಗುವಳಿಗೆ ಕನಿಷ್ಟ ಒಂದು ಎಕರೆಗೆ ೨೫ ಸಾವಿರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಇದರ ಜೊತೆಗೆ ಮುಂಗಾರು ಹಂಗಾಮಿನಲ್ಲಿ ಏಪ್ರಿಲ್-ಮೇ ತಿಂಗಳಿನಿಂದ ಡಿಸೆಂಬರ್ವರೆಗೆ ಸರಿಸುಮಾರು ಎರಡು ಲಕ್ಷ ಜನರಿಗೆ ಈ ಬೆಳೆ ಉದ್ಯೋಗ ದೊರಕಿಸಿಕೊಡುತ್ತದೆ. ಆಲೂಗಡ್ಡೆ ಭಿತ್ತನೆಯಿಂದ ಹಿಡಿದು, ಅದರ ಸಾಗುವಳಿ, ಕೊಯ್ಲು, ವಿಂಗಡಣೆ, ಸಾಗಣೆ, ಚೀಲ ಮಾಡುವಿಕೆ ಹಾಗೂ ಸಂಸ್ಕರಣೆಯ ಮಾಡಲು ಈ ಪ್ರಮಾಣದ ಜನ ದುಡಿಯುತ್ತಿದ್ದಾರೆ. ಅದರ ಜೊತೆಗೆ ಆಲೂಗಡ್ಡೆ ಸಾಗಣೆ ಒಂದು ಪ್ರಮುಖ ವಾಣಿಜ್ಯ ವ್ಯವಹಾರವಾಗಿದ್ದು, ಸಾವಿರಾರು ಲಾರಿಗಳು ಅದರ ಸಾಗಣೆ ಕೆಲಸವನ್ನು ಮಾಡುತ್ತವೆ. ಆದರೆ ಈ ಸಾರಿ ಇಂತಹ ಅಪಾರ ಪ್ರಮಾಣದ ಉದ್ಯೋಗ ಸೃಷ್ಟಿಯ ಒಂದು ಕೃಷಿಯಾಗಿರುವ ಆಲೂಗಡ್ಡೆ ಈ ಸಾರಿ ಭಾದೆಗೊಳಗಾಗಿದ್ದು ಲಕ್ಷಾಂತರ ಜನ ನಿರುದ್ಯೋಗಿಗಳಾಗುವ ಸಾಧ್ಯತೆ ಜಿಲ್ಲೆಯಲ್ಲಿ ಸೃಷ್ಪಿಯಾಗಿದೆ.


ಹಾಸನ ಜಿಲ್ಲೆಯ ಆಲೂಗಡ್ಡೆ ಬೆಳೆಗೆ ಬಂದೆರಗಿರುವ ಅಂಗಮಾರಿ ರೋಗವನ್ನು ತಡೆಯುವಲ್ಲಿ ಈಗಾಗಲೇ ವಿಫಲರಾಗಿದ್ದೇವೆ. ಯಾವುದೇ ಕೃಷಿ ಸಮಸ್ಯೆಗಳು ನಿಧಾನಗತಿಯಲ್ಲಿ ತಮ್ಮ ಪರಿಣಾಮಗಳನ್ನು ಬೀರುತ್ತವೆ ಹಾಗೂ ಅವು ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಕೋಟ್ಯಾಂತರ ರೂಪಾಯಿಯನ್ನು ಭೂಮಿಗೆ ಸುರಿದು ಈಗ ವಿಭ್ರಾಂತರಾಗಿ ಗದ್ದದ ಮೇಲೆ ಕೈಹೊತ್ತು ಕುಳಿತಿರುವ ಹಾಸನ ಜಿಲ್ಲೆಯ ರೈತರನ್ನು ರಾಜ್ಯ ಸರ್ಕಾರ ಹೀಗೆ ಕಡೆಗಣಿಸುವುದು ಮತ್ತು ಸಂಕಷ್ಟದಲ್ಲಿರುವ ರೈತರ ಸಹನೆ ಪರೀಕ್ಷೆ ಮಾಡುವುದು ಯಾರಿಗೂ ಸಾಧುವಲ್ಲ.

Wednesday, August 20, 2008

ತುಂಗಾ ತೀರದಲ್ಲೊಂದು ದಿನ




ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ ತುಂಗಾ ನದಿಯ ಬಗ್ಗೆ ಚಿಕ್ಕಂದಿನಿಂದಲೂ ಬಹಳವಾಗಿಯೇ ಕೇಳಿದ್ದೆ ಹಾಗೂ ಓದಿದ್ದೆ. ಆದರೆ ಅದನ್ನು ಕಣ್ಣಾರೆ ಕಾಣುವ ಭಾಗ್ಯ ಸಿಕ್ಕಿದ್ದು ಚಿಕ್ಕಮಗಳೂರಿನ ಮಹೇಶಣ್ಣ ನವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ. ಏಪ್ರಿಲ್ ಒಂಬತ್ತು ಶ್ರೀ ಹಾಗೂ ಶ್ರೀಮತಿ ರೂಪಾ ಮಹೇಶ್ ಅವರ ಏಕೈಕ ಮಗಳು ಸನ್ಮಿತಾಳ ಹುಟ್ಟಿದ ದಿನ. ಅಂದು ನನ್ನ ಹುಟ್ಟಿದ ದಿನವೂ ಸಹ ಹೌದು. ಇದೇ ಮೊದಲ ಬಾರಿಗೆ ನನ್ನ ಹುಟ್ಟು ಹಬ್ಬದ ದಿನ ನಾನು ನನ್ನ ಆತ್ಮೀಯರೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಿದ್ದು ಬಹಳ ಸಂತೋಷ ಉಂಟುಮಾಡಿತ್ತು. ಬಹಳ ದಿವಸಗಳ ನಂತರ ಎಲ್ಲರೂ ಒಂದೆಡೆ ಅದರಲ್ಲಿಯೂ ಬೆರಣಗೋಡಿನ ಮನೆಯಲ್ಲಿ ಸೇರುವ ಅವಕಾಶ ಯೋಗವೇ ಸರಿ. ಸನ್ಮಿತಾಳಿಗೆ ಇದು ಮೊದಲ ಹುಟ್ಟು ಹಬ್ಬವಾದ್ದರಿಂದ ಕಾರ್ಯಕ್ರಮ ಅದ್ದೂರಿಯಾಗಿಯೇ ಇತ್ತು. ಯಾವುದೇ ಕಾರ್ಯಕ್ರಮಗಳು ಒಂದೇ ದಿವಸ ಆದರೂ ಸಹ ಬೆರಣಗೋಡಿಗೆ ಬಂದವರಾರೂ ಒಂದೇ ದಿನದಲ್ಲಿ ಅಲ್ಲಿಂದ ಹೋಗುವುದಿಲ್ಲ. ಅಂತಹ ವಾತಾವರಣ, ಪ್ರಕೃತಿ ಸೌಂದರ್ಯ ಹಾಗೂ ಹೊಂದಿಕೊಂಡು ಮನಸ್ಸಂತೋಷ ಉಂಟುಮಾಡುವಂತಹ ಮನಸ್ಸುಗಳು ಅಲ್ಲಿವೆ.


ಮಾರನೆಯ ದಿವಸ ಬೆಳ್ಳಗ್ಗಿನಿಂದ ಸಂಜೆಯ ವರೆಗೂ ಹೇಗೆ ಕಾಲ ಕಳೆದೆವು ಎಂಬ ವಿಚಾರ ಯಾರೊಬ್ಬರಿಗೂ ಅರಿವಾಗಲೇ ಇಲ್ಲ. ಸಮಯದ ಅರಿವಾಗುವ ಹೊತ್ತಿಗೆ ಸಂಜೆ ನಾಲ್ಕು ಘಂಟೆಯಾಗಿತ್ತು. ಎಲ್ಲಾದರೊಂದೆಡೆಗೆ ಹೋಗಬೇಕು ಅಂದುಕೊಂಡ ಮನಸ್ಸುಗಳಿಗೆ ಮಹೇಶಣ್ಣ ನೀಡಿದ ಸಲಹೆ "ಕುದುರೆ ಅಬ್ಬಿ" ಇದು ತುಂಗಾ ನದಿಯ ತೀರದಲ್ಲಿರುವ ಒಂದು ಅಜ್ಞಾತ ಸ್ಥಳ, ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರೇಕ್ಷಣಾ ಅಥವಾ ಪ್ರವಾಸಿ ಸ್ಥಳ ಎಂದು ಗುರುತಿಸದೇ ಇದ್ದರೂ ಸಹ ಪ್ರಾಕೃತಿಕವಾಗಿ ತನ್ನದೇ ಆದಂತಹ ವೈವಿಧ್ಯತೆ ಹಾಗೂ ಆಕರ್ಷಣೆ ಹೊಂದಿರುವ ಸ್ಥಳ ಇದು.
ಬೆರಣಗೋಡಿನಿಂದ ಸುಮಾರು ಒಂದು ತಾಸು ಪ್ರಯಾಣವಾಗುತ್ತದೆ. ನಾವು ಅಲ್ಲಿಗೆ ತಲುಪುವ ವೇಳೆಗಾಗಲೇ ಸಂಜೆ ಐದು ಘಂಟೆಯಾಗಿತ್ತು. ಅಲ್ಲಿಗೆ ಹೋದ ಮೇಲೆಯೇ ಅಲ್ಲಿನ ವೈವಿದ್ಯತೆ ಹಾಗೂ ಆಕರ್ಷಣೆ ಏನು ಎಂಬುದು ಗೊತ್ತಾಗಿದ್ದು, ತುಂಗಾ ನದಿಯ ಆ ಸ್ಥಳದಲ್ಲಿ ದೊಡ್ಡ ದೊಡ್ಡ ಬಂಡೆಗಳಿವೆ ಅದೆಂತದೋ ವಿಶೇಷವಾದ ಕಲ್ಲಿನ ಜಾತಿ ಎಂದು ನನಗನಿಸಿತು. ನದಿಯ ಎರಡೂ ತೀರದಲ್ಲಿಯೂ ಸಹ ಮರಳುಗಾಡನ್ನು ನೆನಪಿಸುವಂತಹ ಮರಳಿನ ರಾಶಿ ಇದೆ. ಮರಳು ಕೋರರ ಕಣ್ಣಿಗೆ ಈ ಮರಳು ಕಂಡಿಲ್ಲವೇನೋ ಎಂದೆನಿಸಿತು. ಆ ಮರಳಿನ ರಾಶಿಯನ್ನು ಕಂಡೊಡನೆ ಬಾಲ್ಯದ ದಿವಸಗಳು ನೆನಪಾದವು.
ಈ ಸ್ಥಳದಲ್ಲಿರುವ ಬಂಡೆಗಳು ಅದೆಷ್ಟು ಸಾವಿರ ವರ್ಷಗಳಿಂದ ತುಂಗಾನದಿಯ ನೀರಿಗೆ ಬೆನ್ನು ಕೊಟ್ಟು ನಿಂತಿವೆಯೋ ಗೊತ್ತಿಲ್ಲ, ಆ ನೀರೂ ಸಹ ಅದೆಷ್ಟು ವರ್ಷಗಳಿಂದ ಈ ಬಂಡೆಗಳಿಗೆ ಮುತ್ತಿಟ್ಟು ಸಾಗುತ್ತಿವೆಯೋ ಅದನ್ನು ಸಹ ಸಂಶೋಧನೆಯ ಮೂಲಕವೇ ಖಾತ್ರಿ ಪಡಿಸಿಕೊಳ್ಳಬೇಕು.

ಸಾವಿರಾರು ವರ್ಷಗಳಿಂದ ನೀರಿನ ರಭಸಕ್ಕೆ ಮೈಯೊಡ್ಡಿರುವ ಈ ಬಂಡೆಗಳಿಗೆ ನೀರು ಒಂದು ರೂಪವನ್ನೇ ನೀಡಿದೆ. ಕ್ಷಮಿಸಿ ಅದು ಒಂದು ರೂಪವಲ್ಲ ನೂರಾರು, ಸಾವಿರಾರು ಎಂದರೆ ತಪ್ಪಾಗಲಾರದು. ಹರಿವ ನೀರಿಗೆ ಮೈಚೆಲ್ಲಿ ಕುಳಿತ ಬಂಡೆಗಳು ವರ್ಣಿಸಲಸಾದ್ಯವಾದ ರೀತಿಯ ರೂಪಗಳನ್ನು ಪಡೆದುಕೊಂಡಿವೆ. ಚಿತ್ರಕಲಾವಿದರು ರಚಿಸುವ ಚಿತ್ರಗಳಿಗೆ ಈ ಪ್ರಾಕೃತಿಕ ಶಿಲ್ಪಕಲೆಗಳೇ ಸ್ಪೂರ್ತಿದಾಯಕವೇನೋ ಎಂದೆನಿಸುತ್ತದೆ. ಒಂದೊಂದೆಡೆ ಬಂಡೆ ಕಲ್ಲುಗಳೇ ಕೊಳವೆಯ ರೂಪದಲ್ಲಿ ಕೊರೆದು ಹೋಗಿದ್ದು ಆ ನವಿರತೆ ಹಾಗೂ ಅಚ್ಚುಕಟ್ಟು ಎಂತಹ ಕಲಾವಿದನನ್ನು ನಾಚಿಸುವಂತಿದೆ. ಇನ್ನು ಕೆಲವು ಬಂಡೆಗಳ ತುದಿಯಲ್ಲಿ ಹಳ್ಳ ಉಂಟಾಗಿದ್ದು ತೊಟ್ಟಿಯಂತಹ ರೂಪ ಪಡೆದುಕೊಂಡಿವೆ. ಅಂತಹ ಬಂಡೆಗಳೇ ಆ ತುಂಗೆಗೆ ಮನಸೋತು ತನ್ನ ತನ್ನವನ್ನು ಕಳೆದುಕೊಂಡಿರುವಾಗ ಇನ್ನು ಸಣ್ಣ ಪುಟ್ಟ ಕಲ್ಲುಗಳ ಕಥೆಯೇನಾಗಿರಬೇಕು? ಆ ಕಥೆಯ ಸಾರಾಂಶವನ್ನು ಹೇಳದೇ ಇದ್ದರೆ ಈ ಬರಹ ಪೂರ್ಣವಾಗುವುದಿಲ್ಲ. ಏಕೆಂದರೆ ಆ ಸಣ್ಣ ಸಣ್ಣ ಶಿಲಾ ರೂಪಗಳ ಪರಿಶೀಲನೆ , ಅವುಗಳ ಅಂದ ಸ್ವಾದನೆ ಹಾಗೂ ಅವುಗಳ ರೂಪ ನಿರ್ಧಾರ ಮಾಡುವುದರಲ್ಲಿಯೇ ನಮ್ಮ ಹಲವು ಹೊತ್ತು ವ್ಯಯವಾಗಿದ್ದು. ಗುಂಡುಕಲ್ಲು, ಶಿವಲಿಂಗ, ಬೀಸು ಕಲ್ಲು, ಚಕ್ರಾಕಾರ, ಚಪ್ಪಟೆ ಆಕಾರ, ಇಲಿ ರೂಪ, ಎಲೆ ರೂಪ ಹೀಗೆ ಈ ಪ್ರಕೃತಿಯಲ್ಲಿರುವ ಹಲವು ವಸ್ತುಗಳ ಪ್ರಾಣಿಗಳ ವಿವಿಧ ರೂಪಗಳನ್ನು ಪಡೆದುಕೊಂಡಿರುವ ಶಿಲ್ಪಗಳು ಎಂತಹವರನ್ನು ಆಕರ್ಷಿಸುತ್ತವೆ. ಬರಿಗೈನಲ್ಲಿ ಅಲ್ಲಿಗೆ ಹೋದ ನಾವು ನಮ್ಮ ಬ್ಯಾಗುಗಳು, ಜೇಬುಗಳು ಹಾಗೂ ಜೇಬಿಲ್ಲದವರು ಪಂಚೆ, ವೇಲ್ ಗಳಲ್ಲಿಯೂ ಸಹ ಕಲ್ಲು, ಕಲ್ಲುಗಳನ್ನೇ ತುಂಬಿಕೊಂಡು ಬಂದೆವು. ವಿವಿಧ ರೂಪದ ವಿಭಿನ್ನ ಕಲ್ಲುಗಳಿಗಾಗಿ ಕಿತ್ತಾಟವೂ ನಡೆಯಿತು ಮನೆ ತಲುಪಿದಾಗ ಕಲ್ಲುಗಳನ್ನು ಯಾರಿಗೂ ಕಾಣದ ಗೌಪ್ಯ ಸ್ಥಳಗಳಲ್ಲಿ ಇಡಲು ಪ್ರಯತ್ನಿಸಿದ ಪ್ರಸಂಗವೂ ನಡೆಯಿತು ಎಂದರೆ ಅವುಗಳು ಎಷ್ಟು ಮುದ್ದಾಗಿರಬಹುದು ಎಂಬುದನ್ನು ಯಾರಾದರೂ ಊಹಿಸಿಕೊಳ್ಳಬಹುದು.

ಅನೇಕ ದಿವಸಗಳಿಂದ "ಎಲ್ಲಿಹೋದವು ಆ ನನ್ನ ದಿನಗಳು ಬಾಲ್ಯದಲ್ಲಿ ಕಳೆದ ಬಂಗಾರದ ಕ್ಷಣಗಳು " ಎಂಬ ಪ್ರಶ್ನೆ ನನ್ನನ್ನು ಬಹಳ ದಿವಸಗಳಿಂದ ಕಾಡುತ್ತಲೇ ಇತ್ತು. ಅದನ್ನು ಮರೆಸುವಂತಹ ಒಂದು ಅಚ್ಚರಿ ಮೂಡಿಸಿದವರು ಮಹೇಶಣ್ಣ, ಹೇಗೂ ಅಪರೂಪದ ಮರಳ ರಾಶಿ ದೊರೆತಿದೆ ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳಲು ಸೂಕ್ತವಾದ ಅಂಗಳ ಇದು ಎಂದ ಅವರು ಮಾತು ಮಾತನಾಡುತ್ತಲೇ ಜೋಟ್ ಹೇಳಿ ಮರಳಿಗಿಳಿದೇ ಬಿಟ್ಟರು ಅದನ್ನೇ ಕಾಯುತ್ತಿದ್ದ ವನಶ್ರೀ ಹಾಗೂ ಇತರರು ಅಂಗಳಕ್ಕಿಳಿದರು. ವಯಸ್ಸಿನ್ನ ಭೇದ ಮರೆತ ಎಲ್ಲರೂ ಮರಳಿಗಿಳಿದರು ಜೂಟಾಟ, ಕಳ್ಳ ಪೋಲಿಸ್, ಕೆರೆ ದಡ, ಕಲ್ಲು ಮಣ್ಣು, ಚೈನಾಟ ಹೀಗೆ ಬಾಲ್ಯದಲ್ಲಿ ಆಡುತ್ತಿದ್ದ ಯಾವ ಯಾವ ಆಟಗಳು ನೆನಪಾಗುತ್ತವೆಯೋ ಅವೆಲ್ಲವನ್ನು ಆಡಿದೆವು ಆದರೆ ಧಣಿವಾಗಲೇ ಇಲ್ಲ, ದಿನವಿಡೀ ಉರಿದು ಧಣಿದ ಸೂರ್ಯ ಮೋಡದಿಂದ ಜಾರುವವರೆಗೂ ನಮ್ಮ ಮನಸು ಮೈಗಳಿಗೆ ಧಣಿವಾಗಲೇ ಇಲ್ಲ. ನಮ್ಮೊಂದಿಗೆ ಬಂದಿದ್ದ ಪುಟಾಣಿಗಳು ಮೀನುಗಳನ್ನು ಹಿಡಿದರು ನೀರು ಕೊಂಡೊಯ್ದಿದ್ದ ಬಾಟಲಿಗಳಲ್ಲಿ ಸ್ವತಂತ್ರವಾಗಿದ್ದ ಮೀನಿನ ಮರಿಗಳನ್ನು ಬಂಧಿಸಲಾಗಿತ್ತು. ಅಷ್ಟು ಹೊತ್ತಿಗಾಗಲೇ ನನಗೆ ನೀರಡಿಕೆ ಯಾಯ್ತು ವನಶ್ರೀಗೂ ನೀರಾಡಿಕೆಯಾಗಿರಬೇಕು ನೀರಿಗಾಗಿ ಹೋಗುತ್ತಿದ್ದ ಆಕೆಯನ್ನು ಕಂಡೊಡನೆ ನನ್ನ ಪಾಲಿಗೆ ನೀರು ದಕ್ಕುತ್ತದೆಯೋ ಇಲ್ಲವೋ ಎಂದು ಲೆಕ್ಕಾಚಾರ ಹಾಕಿದ ನಾನು ಓಡಿಹೋಗಿ ಬಾಟಲಿಯಲ್ಲಿದ್ದ ನೀರು ಕುಡಿದೆ ನಾನು ಕುಡಿದ ರಭಸ ಹೇಗಿತ್ತೆಂದರೆ ಬಾಟಲಿಯಲ್ಲಿ ಬಂಧಿಯಾಗಿದ್ದ ಮೂರ್ನಾಲ್ಕು ಜೀವಂತ ಮೀನಿನ ಮರಿಗಳು ನಿರಾಯಾಸವಾಗಿ ನನ್ನ ಹೊಟ್ಟೆ ಸೇರಿದವು. ಅದರ ಪರಿಣಾಮ ಏನಾಗಬಹುದೋ ಎಂಬುದನ್ನು ಲೆಕ್ಕಿಸದ ನಾನು ಮತ್ತೆ ಮರಳಿನಾಟದಲ್ಲಿ ಮಗ್ನನಾದೆ. ಮರಳಿನಲ್ಲಿ ಬಿದ್ದೆವು ಅಲ್ಲಿಯೇ ಎದ್ದೆವು, ಬಿದ್ದು ಒದ್ದಾಡಿದೆವು, ಉರುಳಿ ಆನಂದಿಸಿದೆವು, ಆದರೂ ಧಣಿವಾಗಲೇ ಇಲ್ಲ ಒಂದೊಂದು ಕ್ಷಣವೂ ಬಾಲ್ಯದ ನೆನಪಾಯ್ತು ಕುದುರೆ ಅಬ್ಬಿಯನ್ನು ಬಿಟ್ಟು ಬರುವಾಗ ಮನಸು ಭಾರವಾಗಿತ್ತು. ತುಂಗಾ ತೀರದಲ್ಲೊಂದು ದಿವಸ ಬಾಲ್ಯದ ನೆನಪುಗಳನ್ನು ಹಸಿರಾಗಿಸುವಂತೆ ಮಾಡಿದ ಬೆರಣಗೋಡಿನ ಮಹೇಶಣ್ಣ ಹಾಗೂ ರೂಪಕ್ಕನವರಿಗೆ ಎಲ್ಲಕ್ಕಿಂತಲೂ ಹೆಚ್ಚಾಗಿ ಈ ಸಂತೋಷ ಕೂಟಕ್ಕೆ ನೆಪವಾದ ಸನ್ಮಿತಳಿಗೆ ಹಾಗೂ ಅವಳ ಹುಟ್ಟು ಹಬ್ಬಕ್ಕೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂಬುದು ಇನ್ನು ಅರಿವಾಗಿಲ್ಲ.

Sunday, June 22, 2008

"ಪುಣ್ಯಭೂಮಿ"

'ಪುಣ್ಯಭೂಮಿ' ಹಾಸನ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂದು ಸ್ವಯಂಸೇವಾ ಸಂಸ್ಥೆ, ಕೃಷಿಕರಿಗೆ ನೆರವಾಗುತ್ತಿರುವ "ಪುಣ್ಯಭೂಮಿ" ಕುರಿತಾದ ಕಿರು ಸಾಕ್ಷ್ಯಚಿತ್ರ.
ಬರಹ-ನಿರ್ದೇಶನ: ವಿ.ಮಧುಸೂದನ್
ಕೃಪೆ: ಝೀ ಕನ್ನಡ.

Friday, June 20, 2008

ನಮಗೆಂತಹ ಸಂಸದರು ಬೇಕು?


"ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಲು ಓಡಾಡಿದರಂತೆ" ಇದು ಕನ್ನಡ ನಾಡಿನ ಜನಪ್ರಿಯ ಗಾದೆಗಳಲ್ಲಿ ಒಂದು, ನಮ್ಮ ಹಿರಿಯರು ಶತಶತಮಾನಗಳ ಹಿಂದೆಯೇ ಇಂಥದೊಂದು ಗಾದೆಯನ್ನು ನಮಗೆ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ. ಆದರೂ ಸಹ ಕೊಳ್ಳೆಯಂತಹ ಸಂದರ್ಭಗಳಲ್ಲಿ ನಾವು ಜಾಗೃತರಾಗದೇ ಇರುವುದು ನಮಗೆ ಕೆಡುಕುಂಟು ಮಾಡುತ್ತದೆಯೋ ಹೊರತು ಇತರರಿಗಲ್ಲ. ಹಾಗೆ ನೋಡಿದರೆ ಇದೇನು ಹೊಸತಲ್ಲ ಕನ್ನಡಕ್ಕೆ, ಕನ್ನಡ ನಾಡಿಗೆ, ಕನ್ನಡಿಗನಿಗೆ ಸಂಬಂಧಿಸಿದಂತೆ ಆಗ್ಗಿಂದಾಗ್ಗೆ ಅನ್ಯಾಯ ಆಗುತ್ತಲೇ ಇರುತ್ತದೆ ಹಾಗಾದಾಗೆಲ್ಲ ಕನ್ನಡಿಗರು ಪ್ರತಿಭಟಿಸುತ್ತಾರೆ, ರಾಜಕಾರಣಿಗಳು ಹೇಳಿಕೆ ನೀಡುತ್ತಾರೆ ಈ ಕ್ರಿಯೆ ಪ್ರತಿಕ್ರಿಯೆಗಳೆಲ್ಲ ಒಂದಷ್ಟು ದಿವಸಗಳ ಮಟ್ಟಿಗೆ ನಡೆಯುತ್ತವೆ ಮತ್ತೆ ಯಥಾಸ್ಥಿತಿ, ನಾವು ಪುನಹ: ಜಾಗೃತರಾಗಬೇಕು ಎಂದರೆ ನಮಗೆ ಸಂಬಂಧಿಸಿದಂತೆ ಮತ್ತೊಂದು ಅನ್ಯಾಯ ಸಂಭವಿಸಬೇಕು ಅದರ ಹೊರತಾಗಿ ನಾವು ಜಾಗೃತರಾಗುವುದೇ ಇಲ್ಲ ಇದು ಕನ್ನಡ ನಾಡಿನ ದುರಂತವೋ ಅಥವಾ ಕನ್ನಡಿಗನಿಗೆ ಅಂಟಿದ ಶಾಪವೋ ಎಂದು ನಿರ್ಧರಿಸುವುದು ಕಠಿಣದ ಕೆಲಸ.
ಕಾವೇರಿ ನ್ಯಾಯಾಧೀಕರಣದ ತೀರ್ಪು ಪ್ರಕಟಗೊಂಡ ಸಂದರ್ಭದಲ್ಲಿ ಸರಿಸುಮಾರು ತಿಂಗಳುಗಳ ಕಾಲ ಸರ್ಕಾರ ಯಾವುದೇ ನಿರ್ಧಾರಕ್ಕೆ ಬರಲೇ ಇಲ್ಲ. ಕಾವೇರಿ ಕೊಳ್ಳ ಪ್ರದೇಶದಲ್ಲಿ ಪ್ರತಿಭಟನೆಗಳೇನೋ ನಡೆದವು ಆದರೆ ಆರಂಭ ವೇಗವನ್ನು ಕೊನೆಯವರೆಗೂ ಕಾಪಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ರಾಜ್ಯಕ್ಕೆ ಅನ್ಯಾಯವಾದ ಸಂದಿಗ್ದ ಸಂದರ್ಭದಲ್ಲಿ ನಮ್ಮ ಸಂಸದರೂ ಸೇರಿದಂತೆ ಯಾವುದೇ ಜನ ಪ್ರತಿನಿಧಿಗಳು ಪಕ್ಷದ ಹಿತಾಸಕ್ತಿ ಕಾಪಾಡುವ ಸಲುವಾಗಿ ವಿಧಾನ ಮಂಡಳದ ಅಧಿವೇಶನದಲ್ಲಿ ಜಗ್ಗಾಡಿದರೋ ಹೊರತು ನಾಡಿಗೊದಗಿದ ಆಪತ್ತಿನ ಕುರಿತಾಗಿ ಗಂಭೀರ ಚರ್ಚೆ ಮಾಡುವಂತಹ ಕಳಕಳಿ ತೋರಲಿಲ್ಲ, ಕರ್ನಾಟಕದ ಸಂಸದರೂ ಸಹ ಒಂದು ಆರೋಗ್ಯಕರ ಚರ್ಚೆಗೆ ನಾದಿಹಾಡುವ ಗಂಭೀರ ಪ್ರಯತ್ನ ಮಾಡಲಿಲ್ಲ. ಸರ್ಕಾರದ ಯಾವುದೇ ಹಂತದಲ್ಲಿ ಆಗ ಚರ್ಚೆ ನಡೆದರೂ ಅದು ಕೊಳ್ಳೆ ಹೊಡೆದ ಮೇಲೆ ಬಾಗಿಲು ಮುಚ್ಚುವ ಪ್ರಯತ್ನವಾಗುತ್ತಿತ್ತು ಎಂಬುದೂ ಸಹ ಸರ್ವವಿಧಿತ. ಆದರೆ ಆ ಸಂದರ್ಭಕ್ಕೆ ಕನ್ನಡಿಗರಿಗೆ ಉಳಿದದ್ದು ಅದೊಂದೇ ಮಾರ್ಗ. ಅಂತಹ ಘನಘೋರ ಅನ್ಯಾಯದ ಸಂದರ್ಭದಲ್ಲಿಯೂ ನಮ್ಮ ಜನಪ್ರತಿನಿಧಿಗಳಿಗೆ ಅವರ ಕರ್ತವ್ಯವನ್ನು ನಾವೇ ನೆನಪುಮಾಡಿ ಕೊಡಬೇಕೆಂದರೆ ನಾವು ಎಂಥಹ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದೆವೆ? ಈ ಪ್ರಶ್ನೆಯನ್ನು ಪ್ರತಿಯೋಬ್ಬ ಕನ್ನಡಿಗನೂ ಕೇಳಿಕೊಳ್ಳಲು ಸಕಾಲವಾಗಿತ್ತು.
ಕಾವೇರಿಗೆ ಸಂಬಂಧಿಸಿದಂತೆ ಕನ್ನಡಿಗರಿಗೆ ಅನ್ಯಾಯ, ತುಂಗೆಗೆ ಸಂಬಂಧಿಸಿದಂತೆ ಆಂಧ್ರದಿಂದ ಅನ್ಯಾಯ, ಕೃಷ್ಣೆಗೆ ಸಂಬಂಧಿಸಿದಂತೆ ಅದರಲ್ಲಿಯೂ ಅನ್ಯಾಯ, ಇದು ನೆರೆರಾಜ್ಯಗಳಿಂದ ಅನ್ಯಾಯವಾದರೆ, ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಮತ್ತು ರೈಲ್ವೆಗೆ ಸಂಬಂಧಿಸಿದಂತೆ ಕೇಂದ್ರದಿಂದ ಅನ್ಯಾಯ ಹೀಗೆ ಒಂದರಮೇಲೊಂದರೆಂತೆ ನಿರಂತರವಾದ ಅನ್ಯಾಯಗಳು ಆಗ್ಗಿಂದಾಗ್ಗೆ ಅದೂ ಒಂದೇ ರಾಜ್ಯದ ಮೇಲೆ ಏಕೆ ಸಂಭವಿಸುತ್ತಲೇ ಇರುತ್ತವೆ? ಇದಕ್ಕೆ ಕೊನೆ ಇಲ್ಲವೇ? ಪರಿಹಾರ ಇಲ್ಲವೇ? ನಿರಂತರ ಅನ್ಯಾಯಗಳಿಂದ ಕನ್ನಡಿಗರಿಗೆ ಕನ್ನಡ ನಾಡಿಗೆ ಮುಕ್ತಿಯೇ ಇಲ್ಲವೇ? "ಸಾಯೋ ತನಕ ಶನಿ ಕಾಟ ಆದರೆ ಬಾಳೋದು ಯಾವಾಗ?" ಎಂಬಂತೆ ಕನ್ನಡಿಗರು ಅನ್ಯಾಯ ಮುಕ್ತರಾಗಿ ನೆಮ್ಮದಿಯಿಂದ ಬಾಳುವುದು ಯಾವಾಗ? ಅನ್ಯಾಯ ಎಂದೆನಿಸಿದಾಗ ವಿವಿಧ ರೀತಿಗಳಲ್ಲಿ ಪ್ರತಿಭಟಿಸುವುದು ಅನಿವಾರ್ಯ ಆದ್ದರಿಂದ ಜನತೆಗೆ ಉಂಟಾಗುವ ಅನಾನುಕೂಲಗಳಾದರೂ ಎಷ್ಟು? ಬಂದ್ ಗಳಿಂದ ನಿಲ್ಲುವ ವಾಣಿಜ್ಯ ಚಟುವಟಿಕೆಗಳಿಂದ ಸಂಭವಿಸುವ ನಷ್ಟ ಎಷ್ಟು? ಜನರ ಜೀವಕ್ಕೆ, ಆಸ್ತಿಗೆ ಬರುವ ಸಂಚಕಾರ ಎಷ್ಟು ಪ್ರತಿಕೂಲ? ಇಂತಹ ಪ್ರತಿಕೂಲ ಪರಿಸ್ಥಿತಿಗಳು ಯಾವ ನಾಡಿಗೆ ತಾನೇ ನೆಮ್ಮದಿ ತಂದು ಕೊಡುತ್ತವೆ? ಈ ಕುರಿತು ನಮ್ಮ ಜನಪ್ರತಿನಿಧಿಗಳು ಎಂದಾದರೂ ಗಂಭೀರವಾಗಿ ಆಲೋಚಿಸಿದ್ದಾರೆಯೇ? ಒಂದು ವೇಳೆ ಆಲೋಚಿಸಿದುದೇ ಆದಲ್ಲಿ ಇಂತಹ ಘಟನೆಗಳಿಗೇಕೆ ಮತ್ತೆ ಮತ್ತೆ ಅವಕಾಶ ಮಾಡುತ್ತಾರೆ , ಈ ಪ್ರಶ್ನೆಗಳಿಗೆ ನಾವು ನಮ್ಮ ಜನಪ್ರತಿನಿಧಿಗಳಿಂದ ಉತ್ತರ ನಿರೀಕ್ಷಿಸಿದರೆ ಅದು ಬಹುಷ ತಪ್ಪಾಗಬಹುದು, ಬದಲಾಗಿ ನಾವು ಎಂಥಹವರನ್ನು ಚುನಾಯಿಸಿದ್ದೇವೆ? ಏಕೆ ಅವರನ್ನೇ ಚುನಾಯಿಸಿದ್ದೇವೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಹೆಚ್ಚು ಉಪಯುಕ್ತ ಮತ್ತು ಸಮಯೋಚಿತ.
ನಾವು ಚುನಾಯಿಸಿ ಕಳುಹಿಸಿರುವ ಪ್ರತಿನಿಧಿಗಳಲ್ಲಿ ಅನೇಕರು ಸರ್ಕಾರದ ಕಲಾಪಗಳಿಗೇ ಹೋಗುವುದಿಲ್ಲ. ಇನ್ನು ಕೆಲವರು ಹೋಗುತ್ತಾರೆ ಆದರೆ ಅಲ್ಲಿಯೇ ಕಣ್ತುಂಬ ನಿದ್ರೆ ಮಾಡಿ ಬರುತ್ತಾರೆ, ಉಳಿದವರು ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ ಬಾಯಿದ್ದೂ ಮೂಖರಂತೆ ಇರುತ್ತಾರೆ ಇದರಿಂದ ನಾವು ನಿರೀಕ್ಷಿಸುವುದಾದರೂ ಏನನ್ನು? ಇವರು ಕನ್ನಡಿಗರ ಕನಸನ್ನು ಸಕಾರ ಗೊಳಿಸುತ್ತಾರೆಯೇ? ಇವರನ್ನು ನಂಬಿ ನಾವು ನೆಮ್ಮದಿಯಿಂದ ಇರಬಹುದೇ? ಇದೆಲ್ಲದರ ನಡುವೆ ಕೆಲವೇ ಕೆಲವರು .ಮಾತನಾಡುತ್ತಾರೆ ಮಾತನಾಡುವಂತಹ ವರ್ಚಸ್ಸನ್ನು, ಪ್ರಭಾವವನ್ನು ಇಟ್ಟುಕೊಂಡಿದ್ದಾರಾದರೂ "ಉಕ್ಕಿನ ಕೊಡಲಿಯೇ ಆದರೂ ಕಡಿಯಲಿಕ್ಕೆ ಕಾವು ಬೆಕಲ್ಲವೇ?" ಕಾವಿನಂತಹ ಕನಿಷ್ಟ ಬೆಂಬಲವನ್ನು ಘೋಷಿಸಿದರ ಏನಾದರೊಂದಷ್ಟು ಸಾಧನೆ ಆದೀತು ಆದರೆ ಪಕ್ಷ ರಾಜಕಾರಣ ಅದಕ್ಕೆ ಅಡ್ಡಿ ಮಾಡುತ್ತಿದೆ ಪಕ್ಷಾತೀತ ರಾಜಕಾರಣ ಮಾಡುವಷ್ಟು ನಮ್ಮ ಪ್ರತಿನಿಧಿಗಳು ಸಮರ್ಥರಲ್ಲ ಆದರೆ ಸ್ವಹಿತಾಸಕ್ತಿಗೆ ಧಕ್ಕೆ ಬಂದಾಗ ಮತ್ತು ಸ್ವಾರ್ಥ ಸಾಧನೆ ಆಗಬೇಕೆಂದಾಗ ಮಾತ್ರ ಪಕ್ಷಾಂತ ಮಾಡುತ್ತಾರೆ ಅಷ್ಟೇ. ಈಗ ಕೊಡಲಿಯೂ ಇದೆ ಕಾವೂ ಇದೆ ಅಗತ್ಯ ಸಂದರ್ಭಗಳಲ್ಲಿಯಾದರೂ ಅವೆರಡೂ ಜತೆಗೂಡಿದರೆ ಕಾರ್ಯ ಸಾಧನೆ ಕಠಿಣವಾಗಲಾರದು.
ಸಮಸ್ಯೆ ಪರಿಹಾರವಾಗುವುದು ಪರಿಶ್ರಮದಿಂದ, ಪರಿಶ್ರಮಿಸಬೇಕೆಂದರೆ ಸಮಸ್ಯೆಯ ಗಂಭೀರತೆ ಹಾಗೂ ಪರಿಣಾಮಗಳ ಆಳ ಅಧ್ಯಯನ ಅಗತ್ಯ ಜೊತೆಗೆ ಪರಿಹಾರ ಮಾರ್ಗಗಳ ಅರಿವೂ ಇರಬೇಕು ಎಲ್ಲಕಿಂತಲೂ ಮಿಗಿಲಾಗಿ ಸಮಸ್ಯೆ ಪರಿಹರಿಸಬೇಕೆಂಬ ಮನಸ್ಸಿರಬೇಕು. ಬಹುಷ: ನಮ್ಮ ಯಾವ ಪ್ರತಿನಿಧಿಗಳು ಈ ಅಂಶದ ಬಗ್ಗೆ ಆಲೋಚಿಸಿದಂತೆ ಕಾಣುತ್ತಿಲ್ಲ ರಾಜಕಾರಣ ಎಂದರೆ ಅದು ಅನುಭವಿಸಲಿಕ್ಕೆ ಮಾತ್ರ ಎಂದು ಅವರು ಭಾವಿಸಿರುವಂತಿದೆ. "ಅರಿಯದ ಹುಡುಗ ಆರಂಭ ಮಾಡಿ ಹೊಡೆ ಹೊಲ ಕೊಯ್ದು ಮೆದೆ ಹಾಕಿದ" ಎಂಬಂತಹ ಲಕ್ಷಣಗಳು ನಮ್ಮ ಪ್ರತಿನಿಧಿಗಳಲ್ಲಿ ಕಾಣುತ್ತಿದೆ.
ಚಲನಚಿತ್ರ ತಾರೆಯರಿಗೆ ಜನಸಾಮಾನ್ಯರ ಸಮಸ್ಯೆಯ ಅರಿವಿರುವುದಿಲ್ಲ ಎಂಬ ಪ್ರತೀತಿ ಇದೆ. ಆದರೆ ನೆರೆ ರಾಜ್ಯಗಳಾದ ಆಂಧ್ರ ಹಾಗೂ ತಮಿಳು ನಾಡುಗಳಲ್ಲಿ ಚಿತ್ರತಾರೆಯರೇ ಹೆಚ್ಚಾಗಿ ಜನಪ್ರತಿನಿಧಿಗಳಾಗಿ ಆರಿಸಿ ಬರುತ್ತಾರೆ. ಅವರಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅಂಥಹವರ ಪ್ರಮಾಣ ಕಡಿಮೆ ಆದರೂ ಸಾಮಾನ್ಯರ ಸಮಸ್ಯೆಗಳು ಏಕೆ ಇವರಿಗೆ ಅರ್ಥವಾಗುತ್ತಿಲ್ಲ ಎಂಬುದ ಸೋಜಿಗದ ಸಂಗತಿಯಾಗಿದೆ. ನೆರೆ ರಾಜ್ಯದ ಪ್ರತಿನಿಧಿಗಳು ಚಿತ್ರತಾರೆಯರಾಗಿರಲಿ, ಭಾಷಾಂಧರಾಗಿರಲಿ, ಭಾಷಾ ಹೀನರಾಗಿರಲಿ ಅವರಿಗೆ ವಾಸ್ತವತೆಯ ಅರಿವಿದೆ " ಹದ ನೋಡಿ ಹರಗುವಂತಹ, ಬೆದ ನೋಡಿ ಭಿತ್ತುವಂತಹ" ಪರಿಜ್ಞಾನ ಅವರಲ್ಲಿದೆ. ಕನಿಷ್ಠ ಅಂತಹ ಪ್ರಜ್ಞಾವಂತರನ್ನಾದರೂ ಆರಿಸುವ ಪರಿಪಾಠ ಇನ್ನು ಮುಂದೆ ನಮ್ಮದಾಗಬೇಕು ಇದು ಕೇವಲ ಕರ್ನಾಟಕದ ಮತದಾರರ ಕರ್ತವ್ಯ ಮಾತ್ರವಲ್ಲ ಜೊತೆಗೆ ಈ ನಾಡಿನಲ್ಲಿ ಹುಟ್ಟಿದ, ಈ ನಾಡಿನಲ್ಲಿ ಬೆಳೆದ, ಈ ನಾಡನ್ನು ಆಳಿದ ರಾಜಕೀಯ ಪಕ್ಷಗಳ ಕರ್ತವ್ಯವೂ ಸಹ ಆಗಬೇಕು ಕೇವಲ ಜಾತಿ ರಾಜಕೀಯ, ಹಣದ ರಾಜಕೀಯ ಮತ್ತು ಹೆಂಡದ ರಾಜಕೀಯ ಮಾಡುವುದನ್ನು ಬಿಟ್ಟು ನಮ್ಮ ರಾಜ್ಯ ಪ್ರತಿನಿಧಿಸಲು ನಮ್ಮ ಪಕ್ಷದಲ್ಲಿ ಯಾರು ಸಮರ್ಥರು, ಏಕೆ ಸಮರ್ಥರು, ಹೇಗೆ ಸಮರ್ಥರು ಎಂಬ ಮಾನದಂಡಗಳನ್ನು ಮುಂದಿಟ್ಟುಕೊಂಡು ಪಕ್ಷದ ಟಿಕೆಟ್ ನೀಡುವುದು ಒಳಿತು. ಹೆಣಕ್ಕೆ ಶೃಂಗಾರ ಯಾಕೆ? ಗುಣಕ್ಕೆ ಮತ್ಸರ ಯಾಕೆ ಅಲ್ಲವೇ?
ಕನಿಷ್ಟ ಕೇಂದ್ರದ ರಾಜಕೀಯಕ್ಕೆ ಸಂಬಂಧಿಸಿದಂತೆಯಾದರೂ ನಮ್ಮ ಸರ್ವ ಪಕ್ಷಗಳು ಒಮ್ಮತ ಪ್ರದರ್ಶಿಸಬೇಕು ಈ ಮೂಲಕ ಇನ್ನಾದರೂ ಕೇಂದ್ರ ರಾಜಕಾರಣ ಗಟ್ಟಿಗೊಳ್ಳಬೇಕು, ಪಕ್ಷ ಯಾವುದಾದರೇನು? ನಾಡಿನ ಸಮನ್ವಯತೆಗೆ ಕೊರತೆ ಇರಬಾರದು, ಕನ್ನಡದ ಬಗ್ಗೆ, ನಾಡಿನ ಬಗ್ಗೆ ಕನಿಷ್ಟ ಭಾವನಾತ್ಮಕತೆ ಇರಬೇಕು. ಈ ಮೂಲಕವಾದರೂ ಸಮನ್ವಯತೆ ಸಾಧನೆಯಾಗಬೇಕು ನಮ್ಮ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಪ್ರಸ್ತಾಪಿಸುವಂತಹ ಕೇಂದ್ರಕ್ಕೆ ಮನವರಿಕೆ ಮಾಡುವಂತಹ ಮತ್ತು ಪರಿಹಾರ ಗಳಿಸಿಕೊಳ್ಳುವಂತಹ ಉತ್ತಮ ವಾಗ್ಮಿಗಳನ್ನು ನಮ್ಮ ಸಂಸದರನ್ನಾಗಿ ಆಯ್ಕೆಮಾಡಬೇಕು, ಏಕೆಂದರೆ ಆಧುನಿಕ ಸರ್ಕಾರಗಳಲ್ಲಿ ಚರ್ಚೆಯೇ ಬಂಡವಾಳ, ಚರ್ಚೆಯ ಮೂಲಕ ನಡೆಯುವಂತದ್ದೆ ಸರ್ಕಾರ, ಈ ವ್ಯವಸ್ಥೆಯ ನಡುವೆ " ಬಾಯಿದ್ದೋನು ಬರದಲ್ಲಿಯೂ ಬದುಕುತ್ತಾನೆ" ಈ ಮೂಲಕ ಕೇಂದ್ರದಂತಹ ದೊಡ್ಡ ವ್ಯವಸ್ಥೆಯೊಂದಿಗೆ ಹಗೆ ಇಟ್ಟುಕೊಳ್ಳದೆ, ನೆರೆ ರಾಜ್ಯಗಳಂತಹ ಸಣ್ಣ ವ್ಯವಸ್ಥೆಯೊಂದಿಗೆ ಸಲಿಗೆ ಇಟ್ಟುಕೊಳ್ಳದೆ ರಾಜಕಾರಣ ಮಾಡುವಂತಹ ರಾಜಕಾರಣಿಗಳು ನಮ್ಮ ಪ್ರತಿನಿಧಿಗಳಾಗಬೇಕು. ಎಲ್ಲಕಿಂತಲೂ ಮಿಗಿಲಾಗಿ ಜಾಗತೀಕರಣದಂತಹ ಈ ಸಂದರ್ಭದಲ್ಲಿಯಾದರೂ ಮತದಾರರು " ರಾಮರಾಜ್ಯವಾಳಿದರೂ ರಾಗಿ ಬೀಸುವುದೆ ತಪ್ಪುತ್ತದೆಯೇ" ಎಂಬ ಮನೋಬಾವದಿಂದ ಹೊರಬರಬೇಕಾದುದು ಅತ್ಯಗತ್ಯ ಇಲ್ಲವಾದರೆ ಕಾವೇರಿ ಕೃಷ್ಣೆಯಂತಹ ಮತ್ತು ಶಾಸ್ತ್ರೀಯ ಭಾಷೆಯಂತಹ ಮೌಲ್ಯಗಳು ಸದಾ ಪರರ ಪಾಲಾಗುತ್ತಿರುತ್ತವೆ ಇಂತಹ ಬೆಳವಣಿಗೆಯಿಂದ " ಕೋಣೆ ಮಕ್ಕಳು ಕೊಳೆತವು, ಬೀದಿ ಮಕ್ಕಳು ಬೆಳೆದವು" ಎಂಬಂತಹ ಸ್ಥಿತಿ ಕನ್ನಡಿಗರದ್ದಾಗುತ್ತವೆ. ಯಾವ ಸ್ಥಿತಿ ನಮ್ಮದಾಗಬೇಕು? ಅದನ್ನು ನಾವು ಹೇಗೆ ನಮ್ಮದಾಗಿಸಿಕೊಳ್ಳಬೇಕು ? ಆಯ್ಕೆ ನಮ್ಮ ಮುಂದೆಯೇ ಇದೆ. ಆಯ್ಕೆಯ ಕಾಲದಲ್ಲಿ ಜಾಗೃತರಾಗಬೇಕಾದುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ.

ಕಾವೇರಿ ತೀರ್ಪು ಕನ್ನಡಿಗರಿಗೆ ಉರುಳಾದದ್ದು ಯಾಕೆ?



ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹಾಸನ, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹುಟ್ಟಿ ಕೇರಳ, ತಮಿಳುನಾಡು ಹಾಗೂ ಪಾಂಡಿಚೇರಿ ರಾಜ್ಯಗಳ ಮೂಲಕ ಹಾದು ಹಿಂದು ಮಹಾಸಾಗರವನ್ನು ಸೇರಿಕೊಳ್ಳುವ ಕಾವೇರಿ ನದಿ ಇಂದು ರಾಜ್ಯದಾದ್ಯಂತ ಮನೆ ಮಾತಾಗಿದೆ. ತನ್ನ ವಿವಾದದಿಂದಲೇ ಈ ಪರಿಯಲ್ಲಿ ಹಾಗೂ ಇಷ್ಟು ಧೀರ್ಘಕಾಲ ಚರ್ಚೆಗೆ ಗ್ರಾಸವಾಗಿರುವ ನದಿ ಬಹುಷ ಇದೊಂದೇ ಇರಬೇಕು. ವಿವಾದ ಬಗೆಹರಿಸುವ ಸಲುವಾಗಿ ನ್ಯಾಯಾಧೀಕರಣವೇನೋ ತನ್ನ ಅಂತಿಮ ವರದಿಯನ್ನು ಪ್ರಕಟಿಸಿದೆ ಆದರೆ ವಿವಾದ ಮಾತ್ರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ನಾಡಿನ ಜೀವನದಿಯಾದ ಕಾವೇರಿ ಹಾಸನ ಜಿಲ್ಲೆಯಲ್ಲಿಯೂ ಸಹ ಸುಮಾರು ಸಹ ಸುಮಾರು ೨೦ ಕಿಲೋ ಮೀಟರ್ ಗಳಷ್ಟು ಹರಿಯುತ್ತದೆ. ಕೊಡಗಿನ ಕುಶಾಲನಗರ, ಕೂಡಿಗೆಯ ಮೂಲಕ ಹರಿಯುವ ನದಿ ಶಿರಂಗಾಲದವರೆಗೆ ಪ್ರವಹಿಸಿ ನಂತರ ಅರಕಲಗೂಡು ತಾಲ್ಲೋಕಿನ ಗಡಿ ಗ್ರಾಮವಾದ ಕಡವಿನ ಹೊಸಹಳ್ಳಿಯ ಮುಖಾಂತರ ಹಾಸನ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಕೊಣನೂರು, ರಾಮನಾಥಪುರ ಹಾಗೂ ಕಟ್ಟೇಪುರಗಳಲ್ಲಿ ಹರಿಯುವ ಕಾವೇರಿ ಕೇರಳಾಪುರದ ಮೂಲಕ ಮೈಸೂರು ಜಿಲ್ಲೆ ಪ್ರವೇಶಿಸುತ್ತದೆ. ವಿಶೇಷವೆಂದರೆ ಕಾವೇರಿ ಕಟ್ಟೆಗೆ ಸಂಬಂಧಿಸಿದಂತೆ ವಿವಾದಕ್ಕೆ ಒಳಗಾಗಿದ್ದು ಕಾವೇರಿಗೆ ಮೊದಲ ಕಟ್ಟೆಯನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೋಕಿನ ಕಟ್ಟೆಪುರ ಗ್ರಾಮದ ಬಳಿ ನಿರ್ಮಾಣ ಮಾಡಲಾಗಿದೆ.
ಕಾವೇರಿಯ ಮೊದಲ ಒಪ್ಪಂದ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡುಗಳ ನಡುವಿನ ವೈಮನಸ್ಯ ಇಂದು ನಿನ್ನೆಯದಲ್ಲ ಅದರ ಮುಲ ಹುಡುಕಿದರೆ ಚೋಳರ ಕಾಲದವರೆವಿಗೂ ಹೋಗುತ್ತದೆ. ಆದರೆ ಇದು ಹೆಚ್ಚು ಪ್ರಾಶಸ್ತ್ಯ ಪಡೆದುಕೊಂಡಿದ್ದು ೧೭-೧೮ ನೇ ಶತಮಾನದಲ್ಲಿ. ೧೮೭೬-೭೮ ರಲ್ಲಿ ಉಂಟಾದ ಭೀಕರ ಕ್ಷಾಮದ ಹಿನ್ನೆಲೆಯಲ್ಲಿ ವೇದಾವತಿ ನದಿಗೆ ವಾಣಿವಿಲಾಸ ಸಾಗರ ಅಣೆ ಕಟ್ಟಲು ದಿವಾನ್ ಶೇಷಾದ್ರಿ ಅಯ್ಯರ್ ಕ್ರಮ ಕೈಗೊಂಡಾಗ ಸದರಿ ಯೋಜನೆಯನ್ನು ವಿರೋಧಿಸಿ ಮದ್ರಾಸ ಪ್ರಾಂತ 1890ರಲ್ಲಿ ಇದನ್ನು ತೀವ್ರವಾಗಿ ಆಕ್ಷೇಪಿಸಿತು. ಆದರೆ ತನ್ನ ನೆಲದಲ್ಲಿ ಹರಿಯುವ ನೀರಿನ ಹಕ್ಕಿನ ಬಗ್ಗೆ ಕನ್ನಡಿಗರು ವಾದ ಮಾಡಿದ ಪರಿಣಾಮವಾಗಿ 1892ರಲ್ಲಿ ಮೊದಲ ಒಪ್ಪಂದವೊಂದು ಏರ್ಪಟ್ಟಿತು ಇದರ ಪ್ರಕಾರ ಕಾವೇರಿ ಕೊಳ್ಳದ ಯಾವುದೇ ಯೋಜನೆಗಳಿಗೆ ಮದ್ರಾಸ್ ಪ್ರಾಂತ್ಯದ ಅನುಮತಿ ಪಡೆಯಬೇಕಿತ್ತು.
ಎಲ್ಲಿಯ ವೇದಾವತಿ ಅದೆಲ್ಲಿಯ ಕಾವೇರಿ: ವೇದಾವತಿಗೆ ಅಣೆಕಟ್ಟಿದರೆ ತಮಿಳುನಾಡಿನವರಿಗೇನು? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಏಕೆಂದರೆ ಕಾವೇರಿಗೂ ವೇದಾವತಿಗೂ ಯಾವುದೇ ತರಹದ ಸಂಬಂಧವಿಲ್ಲ. ಕಾವೇರಿ ತನ್ನದೇ ಆದ ಕೊಳ್ಳ ನಿರ್ಮಿಸಿಕೊಂಡಿದ್ದು, ವೇದಾವತಿ ಕೃಷ್ಣಾ ನದಿಯ ಕೊಳ್ಳಕ್ಕೆ ಸೇರ್ಪಡೆಗೊಳ್ಳುತ್ತದೆ. ಹಾಗಿದ್ದಾಗ್ಯೂ ತಮಿಳುನಾಡು ತಗದೆ ತೆಗೆದ ಕಾರಣವೆಂದರೆ, ಬ್ರಿಟೀಷರ ಅಧೀನಕ್ಕೊಳಗಾಗಿದ್ದ ಮೈಸೂರು ಸಂಸ್ಥಾನ ಯಾವುದೇ ಯೋಜನೆಗಳನ್ನು ಕೈಗೊಳ್ಳಬೇಕೆಂದರೆ ಅದು ಮದ್ರಾಸ್ ಪ್ರಾಂತ್ಯದ ಒಪ್ಪಿಗೆ ಪಡೆಯಬೇಕು ಎಂಬ ಕಾರಣ ಮುಂದಿರಿಸಿಕೊಂಡು ತಮಿಳುನಾಡು, ವಾಣಿವಿಲಾಸ ಯೋಜನೆಗೆ ಅಡ್ಡಿ ಮಾಡಿತ್ತು.
1924ರ ಒಪ್ಪಂದ: 1911ರ ವೇಳೆಗೆ ಕನ್ನಂಬಾಡಿ ಕಟ್ಟೆಯ ಮೊದಲ ಹಂತ ಪೂರ್ಣಗೊಂಡು ಎರಡನೇ ಹಂತದ ಕಾರ್ಯಾಚರಣೆ ಪ್ರಾರಂಭಿಸಿದಾಗ ಮದ್ರಾಸ್ ಪ್ರಾಂತ್ಯ ಮತ್ತೆ ಆಕ್ಷೇಪ ಎತ್ತಿತು. ಈ ಆಕ್ಷೇಪವನ್ನು ಕಡೆಗಣಿಸಿ ಕೆಲಸ ಮುಂದುವರೆಯಿತಾದರೂ ಸಹ 1892ರ ಒಪ್ಪಂದದಂತೆ ಕೇಂದ್ರದ ಮಧ್ಯಸ್ಥಿಕೆಗೆ ಮನವಿ ಮಾಡಲಾಗಿ ಕೇಂದ್ರ ಸರ್ಕಾರವು ಹೆಚ್.ಡಿ. ಗ್ರಿಷಿತ್ ಎಂಬುವವರ ಮಧ್ಯಸ್ಥಿಕೆಯಲ್ಲಿ ಕನ್ನಂಬಾಡಿ ಕಟ್ಟೆಯ ಕೆಲಸ ಪೂರ್ಣಗೊಂಡಿತು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಮದ್ರಾಸ್ ರಾಜ್ಯ ಲಂಡನ್ ನಲ್ಲಿರುವ ಸೆಕ್ರೆಟರಿ ಆಫ್ ಸ್ಟೇಟ್ ಗೆ ಈ ಬಗ್ಗೆ ಮೇಲ್ಮನವಿ ಮಾಡಿತು ವಾಸ್ತವವಾಗಿ ಇಂತಹ ಮೇಲ್ಮನವಿಗೆ 1892ರ ಒಪ್ಪಂದದಲ್ಲಿ ಅವಕಾಶ ಇರಲಿಲ್ಲ ಆದರೂ ಮದ್ರಾಸ್ ಮತ್ತು ಕೇಂದ್ರ ಸರ್ಕಾರಗಳ ಒತ್ತಡಕ್ಕೆ ಒಳಪಟ್ಟ ಮೈಸೂರು ಸಂಸ್ಥಾನವು 1924ರಲ್ಲಿ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿತು ಈ ಒಪ್ಪಂದದ ಅವಧಿ 50ವರ್ಷಗಳಲ್ಲಿ ತಮಿಳುನಾಡು ತನ್ನ ಕರಾರನ್ನು ಮೀರಿ 18ಲಕ್ಷ ಎಕರೆಯಲ್ಲಿ ನೀರಾವರಿ ಮಾಡಿತು. ಈ ಸಲುವಾಗಿ ತಮಿಳುನಾಡು 1924ರ ಒಪ್ಪಂದ ಭಂಗಿಸಿ ಕುಟ್ಟತ್ತಿ ಮತ್ತು ಪುಲಂಬಾಡಿ ಕಾಮಗಾರಿ ಕೈಗೊಂಡಿತು ಆದರೆ ಕರ್ನಾಟಕ ಹೇಮಾವತಿ, ಹಾರಂಗಿ ಮತ್ತು ಕಬಿನಿ ಕಾಮಗಾರಿಯನ್ನು ಕೈಗೆತ್ತಿಕೊಂಡಾಗ ವಿರೋಧಿಸಿತು ಹಾಗೂ ನ್ಯಾಯಕ್ಕಾಗಿ 1968ರಲ್ಲಿ ಮದ್ರಾಸ್ ರಾಜ್ಯದ ಶ್ರೇಷ್ಟತ್ತಮ ನ್ಯಾಯಾಲಯಕ್ಕೆ ಹೋಯಿತು, ಆದರೆ 3ರಾಜ್ಯಗಳ ಒಪ್ಪಂದವಾಗಿ 1972ರಲ್ಲಿ ಖಟ್ಲೆಯನ್ನು ಹಿಂಪಡೆಯಲಾಯಿತು.
ಸರ್ವೋಚ್ಚ ನ್ಯಾಯಾಲಯದತ್ತ ಕಾವೇರಿ: 1972ರಲ್ಲಿ ನೇಮಿಸಿದ್ದ ಸತ್ಯಶೋಧಕ ಸಮಿತಿ 1974ರಲ್ಲಿ ವರದಿ ಸಲ್ಲಿಸಿ ಒಟ್ಟು 740ಟಿಎಂಸಿ ನೀರಿನಲ್ಲಿ ತಮಿಳುನಾಡು ೪೮೯, ಕರ್ನಾಟಕ ೧೭೭ ಹಾಗೂ ಕೇರಳ 05ಟಿಎಂಸಿ ನೀರನ್ನು ಬಳಸುತ್ತಿದ್ದು ಇದರಲ್ಲಿ 100ಟಿಎಂಸಿ ನೀರನ್ನು ತಮಿಳುನಾಡು ಉಳಿಸಬೇಕು ಎಂದಿತು. ಈ ವೇಳೆಗಾಗಲೇ 1924ರ ಒಪ್ಪಂದ 1974ರ ವೇಳೆಗಾಗಲೇ ಮುಗಿಯುತ್ತ ಬಂದಿತ್ತು ಈ ವಿವಾದದ ಬಗ್ಗೆ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಮುಖ್ಯಮಂತ್ರಿಗಳು ಹಲವು ಸುತ್ತಿನ ಮಾತುಕತೆ ನಡೆಸಿದರೂ ವಿವಾದ ಬಗೆಹರಿಯಲಿಲ್ಲ ತಮಿಳುನಾಡು ರೈತರು ಈ ಬಗ್ಗೆ ಶ್ರೇಷ್ಟತ್ತಮ ನ್ಯಾಯಾಲಯಕ್ಕೆ ಮನವಿ ಮಾಡಿದಾಗ ದೆಹಲಿಯ ಈ ಪೀಠವು ವಿಷಯವನ್ನು ತ್ರಿಸದಸ್ಯ ಟ್ರಿಬ್ಯುನಲ್ ಗೆ ಒಪ್ಪಿಸಲು 1990ರಲ್ಲಿ ತೀರ್ಪು ನೀಡಿದ್ದು, ಕೇಂದ್ರ ಸರ್ಕಾರ ತ್ರಿಸದಸ್ಯ ಆಯೋಗವನ್ನು 1990ರ ಜೂನ್ 2ರಂದು ರಚನೆ ಮಾಡಿತು. 1991ರಲ್ಲಿ ಮಧ್ಯಂತರ ತೀರ್ಪು ನೀಡಿದ ಆಯೋಗ ತಮಿಳುನಾಡಿಗೆ ವಾರ್ಷಿಕ 205ಟಿಎಂಸಿ ನೀರು ಹರಿಸುವಂತೆ ಆದೇಶ ನೀಡಿತು.
ಈಗ ಸುಮಾರು 17ವರ್ಷಗಳ ಧೀರ್ಘ ಅವಧಿಯ ನಂತರ ಕಾವೇರಿ ನ್ಯಾಯಾಧೀಕರಣ ತೀರ್ಪು ನೀಡಿದೆ. ಕಾವೇರಿ ಪಾತ್ರದ ಒಟ್ಟು ನೀರಿನ ಪ್ರಮಾಣ 740ಟಿಎಂಸಿ ಎಂದು ಗುರುತಿಸಿರುವ ನ್ಯಾಯಾಧೀಕರಣ ತಮಿಳುನಾಡಿಗೆ 419ಟಿಎಂಸಿ, ಕರ್ನಾಟಕಕ್ಕೆ270ಟಿಎಂಸಿ ಹಾಗೂ ಕೇರಳಕ್ಕೆ 30ಟಿಎಂಸಿ ಮತ್ತು ಪುದುಚೇರಿಗೆ 07ಟಿಎಂಸಿ ನೀರನ್ನು ಹಂಚಿದೆ. 10ಟಿಎಂಸಿ ನೀರನ್ನು ಪರಿಸರದ ದೃಷ್ಟಿಯಿಂದ ಉಳಿಸಿರುವ ನ್ಯಾಯಾಧೀಕರಣ 04ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಯುವ ಸೋರಿಕೆ ಎಂದು ಗುರುತಿಸಿದೆ. ತಮಿಳುನಾಡಿಗೆ ನಿಗಧಿ ಮಾಡಿರುವ 419ಟಿಎಂಸಿ ನೀರನ್ನು ಅದು ಬಳಸಬೇಕೆಂದರೆ ಕರ್ನಾಟಕ ಪ್ರತಿವರ್ಷ 192ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ.
ಕಾವೇರಿ ಕೊಳ್ಳದಲ್ಲಿ ಲಭ್ಯವಾಗುತ್ತಿರುವ ಒಟ್ಟು ನೀರಿನ ಪ್ರಮಾಣಕ್ಕೆ ವಿವಿಧ ರಾಜ್ಯಗಳ ಕೊಡುಗೆ ಹೀಗಿದೆ, ಕರ್ನಾಟಕದ ಕೊಡುಗೆ 425ಟಿಎಂಸಿ ಆದರೆ ತಮಿಳುನಾಡಿನ ಕೊಡುಗೆ 212ಟಿಎಂಸಿ ಮತ್ತು ಕೇರಳದ ಕೊಡುಗೆ 113ಟಿಎಂಸಿ ಅಂದರೆ ಈ ಪ್ರಮಾಣದ ನೀರು ಆಯಾ ರಾಜ್ಯದ ಜಲಾನಯನ ಪ್ರದೇಶದಲ್ಲಿ ಸಂಗ್ರಹವಾಗುತ್ತಿದೆ ಇದನ್ನು ಶೇಖಡಾವಾರು ಪ್ರಮಾಣದಲ್ಲಿ ಹೇಳುವುದಾದರೆ ಕರ್ನಾಟಕ ಶೇ೫೩.೮% ರಷ್ಟು ನೀರನ್ನು, ತಮಿಳುನಾಡು ಶೇ ೩೧.9ರಷ್ಟು ನೀರನ್ನು ಹಾಗೂ ಕೇರಳ ಶೇ ೧೪.3ರಷ್ಟು ನೀರನ್ನು ಕೊಡುಗೆ ನೀಡುತ್ತಿವೆ. ಕಾವೇರಿಗೆ ತಮಿಳುನಾಡಿನ ಕೊಡುಗೆ ಕರ್ನಾಟಕಕ್ಕಿಂತಲೂ ಕಡಿಮೆ ಇದ್ದರೂ ಸಹ ಅದು ಬಳಕೆ ಮಾಡುತ್ತಿರುವ ಪ್ರಮಾಣ ಅಗಾದವಾದುದು. ಕರ್ನಾಟಕದಲ್ಲಿ ಕಾವೇರಿಯ ಅಚ್ಚುಕಟ್ಟು ಪ್ರದೇಶ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಗರಿಷ್ಟ ಪ್ರಮಾಣದಲ್ಲಿದೆ ಉಳಿದ ಮೈಸೂರು ಹಾಗೂ ಚಾಮರಾಜನಗರದ ಅಚ್ಚುಕಟ್ಟು ಪ್ರದೇಶ ಬಹಳ ಕಡಿಮೆ ಆದರೆ ತಮಿಳುನಾಡಿನ ಕೊಯಮತ್ತೂರು, ತಿರುಚನಾಪಳ್ಳಿ ಹಾಗೂ ತಂಜಾವೂರು ಜಿಲ್ಲೆಗಳು ಸಂಪೂರ್ಣ ನದಿ ಕಾವೇರಿ ನೀರಾವರಿಗೆ ಒಳಪಟ್ಟಿವೆ.
ಕಾವೇರಿ ಕೊಳ್ಳದ ನಗರ ಪ್ರದೇಶ: ಕಾವೇರಿ ನ್ಯಾಯಾಧೀಕರಣದ ತೀರ್ಪು ಹೊರಬಂದ ನಂತರ ಮಂಡ್ಯ ನಗರದಲ್ಲಿ ನಡೆದಷ್ಟು ಪ್ರತಿಭಟನೆಗಳು ಬೇರೆ ಜಿಲ್ಲೆಗಳಲ್ಲಿ ನಡೆಯಲಿಲ್ಲ ಆದರೆ ಒಂದಂಶವನ್ನು ನಾವು ಪರಿಗಣಿಸಬೇಕು ಕಾವೇರಿ ತೀರ್ಪು ಕೇವಲ ಕಾವೇರಿ ನದಿಗಷ್ಟೇ ಸಂಬಂಧಿಸಿದುದಲ್ಲ. ಕಾವೇರಿಗೆ ಕರ್ನಾಟಕದಲ್ಲಿಯೇ ಸುಮಾರು 20ಉಪನದಿಗಳಿವೆ. ಇದರ ಮೊದಲ ಉಪನದಿ 'ಕನ್ನಿಕೆ' ಭಾಗಮಂಡಲದ ಬಳಿ ಕಾವೇರಿಯೊಂದಿಗೆ ಸಂಗಮವಾಗುತ್ತದೆ. ಅನಂತರದಲ್ಲಿ ನಿಡುಹೊಳೆ, ಹಾರಂಗಿ, ಹೇಮಾವತಿ, ಲಕ್ಷ್ಮಣತೀರ್ಥ, ಕಪಿಲಾ, ಅರ್ಕಾವತಿ ಇವೇ ಮೊದಲಾದ ನದಿಗಳು ಕಾವೇರಿಯನ್ನು ಸಂಧಿಸುತ್ತವೆ. ಈ ಎಲ್ಲಾ ನದಿಗಳ ಸಂಗಮದಿಂದಾಗಿಯೇ ಕಾವೇರಿ ನದಿಯ ಒಟ್ಟು ನೀರನ ಪ್ರಮಾಣ 740ಟಿಎಂಸಿ ಎಂದು ನ್ಯಾಯಾಧೀಕರಣ ಗುರುತಿಸಿರುವುದು. ಈ ಹಿನ್ನೆಲೆಯಲ್ಲಿ ಹೇಮಾವತಿಯ ುಪನದಿಯಾದ ಯಗಚಿಯ ನೀರಿನ ಪ್ರಮಾಣವನ್ನು ಸಹ ಗುರುತಿಸಲಾಗಿದೆ. ಆದ್ದರಿಂದ ಕಾವೇರಿ ಕೊಳ್ಳ ಎಂದಾಕ್ಷಣ ಹೇಮಾವತಿ, ಯಗಚಿ ನದಿಗಳ ಯೋಜನೆಯ ಮೇಲೂ ಸಹ ನ್ಯಾಯಾಧೀಕರಣದ ತೀರ್ಪು ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಹೇಮಾವತಿ ಹಾಗೂ ಯಗಚಿ ನದಿಯ ಅಚ್ಚುಕಟ್ಟುದಾರರೂ ಸಹ ಜಾಗೃತರಾಗಬೇಕು. ಅಂತೆಯೇ ಈ ನದಿ, ಉಪನದಿಗಳಿಂದ ಬೆಂಗಳೂರು ಸೇರಿದಂತೆ ನೂರಾರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು ನಗರ ವಾಸಿಗಳು ಇದನ್ನು ಮರೆತಹಾಗಿದೆ. ಕಾವೇರಿ ಸಮಸ್ಯೆ ಕೇವಲ ರೈತರಿಗೆ ಮಾತ್ರ ಸಂಬಂಧಿಸಿದುದು ಎಂದು ನಗರವಾಸಿಗಳು ಕೈತೊಳೆದುಕೊಂಡರೆ ಅದು ನಮ್ಮ ಮೂರ್ಖತನವಾದೀತು, ಅಥವಾ ರೈತರ ಹೋರಾಟದ ಫಲ ನಮಗೂ ದಕ್ಕುತ್ತದೆ ಎಂದುಕೊಂಡರೆ ನೀತಿವಂತರು ಸಾಲ ಮಾಡಿ ಹಬ್ಬ ಮಾಡಿದರೆ ಸೋಮಾರಿಗಳು ಉಂಡುಂಡು ತಿರುಗುತ್ತಿದ್ದರು ಎನ್ನುವಂತಹ ಪರಿಸ್ಥಿತಿಯಾಗುತ್ತದೆ.
ರಾಜಕಾರಣಿಗಳೇಕೆ ಮೌನಿಯಾಗುತ್ತಾರೆ?: ನ್ಯಾಯಾಧೀಕರಣದ ತೀರ್ಪು ಹೊರಬಿದ್ದಾಗ ಅದಕ್ಕೆ ಮೊದಲು ಸ್ಪಂಧಿಸಬೇಕಾದುದು ನಮ್ಮ ಸರ್ಕಾರ ಆದರೆ ಒಬ್ಬ ಸಾಮಾನ್ಯ ರೈತ ಪ್ರತಿಭಟಿಸಿದಷ್ಟು ಸಹ ನಮ್ಮ ರಾಜಕಾರಣಿಗಳು ಪ್ರತಿಕ್ರಿಯಿಸಲಿಲ್ಲ ಹಿರಿಯ ರಾಜಕಾರಣಿಗಳಾದ ಹೆಚ್.ಎನ್. ನಂಜೇಗೌಡ, ಮಂಡ್ಯದ ಜಿ.ಮಾದೇಗೌಡರಂತಹವರನ್ನು ಹೊರತುಪಡಿಸಿ ಉಳಿದವರಾರೂ ತುಟಿ ಬಿಚ್ಚಲಿಲ್ಲ. ರಾಜ್ಯ ಸರ್ಕಾರವಂತೂ ತನ್ನ ನಿಲುವು ಏನು? ಎಂಬುದನ್ನು ತಕ್ಷಣ ಸ್ಪಷ್ಟಪಡಿಸುವುದಿಲ್ಲ ಇನ್ನು ಸಂಸದರಂತೂ ರಾಜ್ಯದಲ್ಲಿ ಇದ್ದಾರೆಯೋ ಇಲ್ಲವೋ ಎಂಬಂತಹ ಸ್ಥಿತಿ ನಿರ್ಮಾಣವಾಗಿರುತ್ತದೆ. ಕಳೆದ ಸಾರಿ ತೀರ್ಪು ಪ್ರಕಟಗೊಂಡ ಸಂಧರ್ಭ 'ನಮ್ಮ ಸಂಸದರು ಕಾಣೆಯಾಗಿದ್ದಾರೆ' ಎಂದು ಪೋಲೀಸರಿಗೆ ಸಾರ್ವಜನಿಕರು ದೂರು ನೀಡುವವರೆಗೂ ಕಾವೇರಿ ಕೊಳ್ಳದ ಸಂಸದರೂ ಸಹ ಮಾತನಾಡಿರಲಿಲ್ಲ ಇದರ ಅರ್ಥ ನಾವು ಕಾವೇರಿ ನ್ಯಾಯಾಧೀಕರಣದ ತೀರ್ಪು ಒಪ್ಪಿದ್ದೇವೆ ಎಂತಲೋ? ಅಥವಾ ಸ್ವಯಂಕೃತಾಪರಾದದ ಸಂಕೇತ ಎಂತಲೋ? ಎಂಬುದನ್ನು ಮೌನವಾಗಿದ್ದವರೇ ಸ್ಪಷ್ಟಪಡಿಸಬೇಕು.
ತಮಿಳುನಾಡಿನಲ್ಲಿ ನೀರಾವರಿಯಾಗಿರುವ ಭೂಮಿಯ ಪ್ರಮಾಣ 27ಲಕ್ಷ ಎಕರೆ ಆದರೆ ಕರ್ನಾಟಕ ಈ ಕ್ಷೇತ್ರದಲ್ಲಿ ಈವರೆಗೆ ಸಾಧನೆ ಮಾಡಿದ್ದು 18ಲಕ್ಷ ಎಕರೆ ಮಾತ್ರ ಆಗಿರುವುದರಿಂದ ಈ ಪ್ರಮಾಣದ ನೀರು ಹಂಚಿಕೆ ಸೂಕ್ತ ಎಂಬ ಸ್ಪಷ್ಟನೆಯನ್ನು ನ್ಯಾಯಾಧೀಕರಣ ನೀಡಿದೆ. ಕರ್ನಾಟಕದ ಹೆಚ್ಚಿನ ಸಾಧನೆಗೆ 1924ರ ಒಪ್ಪಂದ ಅಡ್ಡಿಯಾಗಿತ್ತು ಎಂದು ರಾಜಕಾರಣಿಗಳು ನೆಪಹೇಳಬಹುದಾದರೂ ಇಂತದ್ದೇ ಮಿತಿ ತಮಿಳುನಾಡಿಗೂ ಇತ್ತು ಎಂಬುದು ಸತ್ಯವಲ್ಲವೇ? ಆದರೆ ತಮಿಳುನಾಡಿಗೆ ಸಾಧ್ಯವಾದ ಈ ಸಾಧನೆ ಕರ್ನಾಟಕಕ್ಕೆ ಏಕೆ ಸಾಧ್ಯವಾಗಲಿಲ್ಲ? ತಮಿಳುನಾಡಿನ ಅಚ್ಚುಕಟ್ಟು ಪ್ರದೇಶ 27ಲಕ್ಷ ಎಕರೆ ಎಂಬ ಕಾರಣಕ್ಕಾಗಿಯೇ ನ್ಯಾಯಾಧೀಕರಣ ಆ ರಾಜ್ಯಕ್ಕೆ ಹೆಚ್ಚು ನೀರು ಹಂಚಿದೆಯಾದ್ದರಿಂದ, ತಮಿಳುನಾಡು ಒಪ್ಪಂದ ಬಾಹಿರವಾಗಿ ನೀರಾವರಿ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಾಡಳಿತ ಏನು ಮಾಡುತ್ತಿತ್ತು? ನೀರಾವರಿ ವಿಸ್ತರಿಸಲೇನೋ ಶಕ್ತಿ ಇರಲಿಲ್ಲ ಎಂದರೆ ಆಕ್ಷೇಪಿಸಲೂ ಶಕ್ತಿ ಇರಲಿಲ್ಲವೇ? ನಮ್ಮ ಸರ್ಕಾರಗಳು ನಮ್ಮ ರಾಜಕಾರಣಿಗಳು ಅಂದು ಮೈಮರೆತ ತಪ್ಪಿಗೆ ಇಂದು ಕನ್ನಡ ನಾಡು ಬೆಲೆ ತೆರಬೇಕಾಗಿ ಬಂದಿದೆ.
ಕರ್ನಾಟಕ ಸ್ವಾತಂತ್ರ್ಯ ನಂತರ ಕೈಗೆತ್ತಿಕೊಂಡ ಯಾವುದೇ ಯೋಜನೆಯನ್ನು ಸಹ ನಿಯಮಿತ ಅವಧಿಯಲ್ಲಿ ಪೂರೈಸಲಿಲ್ಲ. ಕಟ್ಟೆಗಳನ್ನು ನಿರ್ಮಾಣಮಾಡಿ ಸಾವಿರಾರು ಎಕರೆ ಬಡ ಜನರ ಕೃಷಿ ಭೂಮಿ ಮುಳುಗಿಸಲಾಗಿದೆಯೇ ಹೊರತು, ಕೃಷಿ ಭೂಮಿಗೆ ನೀರು ಹರಿಸಲು ಅಗತ್ಯವಿದ್ದ ಕಾಲುವೆಗಳನ್ನು ಸೂಕ್ತವಾಗಿ ನಿರ್ಮಿಸಲಿಲ್ಲ ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಆಲಮಟ್ಟಿ, ಇದರ ಪರಿಣಾಮ ನೆರೆರಾಜ್ಯಗಳು ಕೇಳಿ ಕೇಳಿದಾಗೆಲ್ಲ ನೀರು ಹರಿಸಲು ಸರ್ಕಾರಕ್ಕೆ ಅನುಕೂಲವಾಯ್ತು ಈ ಪರಿಪಾಠದಿಂದ ರಾಜ್ಯ ಸರ್ಕಾರ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬ ಸ್ಥಿತಿ ತಲುಪಬೇಕಾಗಿ ಬಂತು.
ನದಿ ಪ್ರಾಕೃತಿಕ ಅಗತ್ಯವೇ?: ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಯೂ ಸಹ ವಾತಾವರಣದಲ್ಲಿ ಬದುಕಲು ಅನುಕೂಲವಾದಂತಹ ಸ್ಥಿತಿಯನ್ನು ಪ್ರಕೃತಿ ಸೃಷ್ಟಿಸಿದೆ. ಆದ್ದರಿಂದಲೇ ನೀರಿನ ಮೂಲ ಮಳೆಯೇ ಆಗಿದ್ದರೂ ಅದರ ಬಳಕೆ ಮಾತ್ರ ಕೆರೆ, ಕಟ್ಟೆ, ನದಿ, ಅಂತರ್ಜಲ ಮತ್ತು ತೊರೆ, ಹಳ್ಳಗಳ ಮುಖಾಂತರ ನೆರವೇರುವಂತಹ ಅನುಕೂಲವನ್ನು ನಿಸರ್ಗ ನಿರ್ಮಿಸಿದೆ. ಈ ನಿಟ್ಟಿನಲ್ಲಿ ಯೋಚಿಸಿದರೆ ನಮಗೆ ಕಾವೇರಿಯಂತಹ ಹಾಗೂ ಅದರ ಉಪನದಿಗಳಂತಹ ನೀರಿನ ಮೂಲಗಳ ಅಗತ್ಯ ಈ ಭೌಗೋಳಿಕ ಸನ್ನಿವೇಷಕ್ಕೆ ಇದೆ. ಆದ್ದರಿಂದಲೇ ಕರುನಾಡ ಪ್ರಕೃತಿಯ ಒಡಲಲ್ಲಿ ಕಾವೇರಿ ಜನ್ಮಿಸಿರುವುದು. ತಮಿಳುನಾಡಿನಂತಹ ಪ್ರದೇಶಕ್ಕೂ ಅದರ ಅಗತ್ಯವಿರುವುದರಿಂದಲೇ ಅದು ಅಲ್ಲಿಗೂ ಹರಿದಿರಬಹುದು ಆದರೆ ತಮಿಳುನಾಡಿನ ನೆಲದಲ್ಲಿ 129ಟಿಎಂಸಿ ಯಷ್ಟು ಅಗಾಧವಾದ ಅಂತರ್ಜಲದಂತಹ ಕೊಡುಗೆಯನ್ನು ನೀಡಿದೆ ಎಂಬ ಸತ್ಯವನ್ನು ವಿಶ್ವಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮದ ವರದಿ ಬಹಿರಂಗಪಡಿಸಿದೆ ಆದರೆ ಈ ವಾಸ್ತವವನ್ನು ಕಾವೇರಿ ನ್ಯಾಯಾಧೀಕರಣ ಪರಿಗಣಿಸದೇ ಇರುವುದು ಕನ್ನಡಿಗರ ದುರಂತವೇ ಸರಿ.

Thursday, June 19, 2008

EXPERIENCE OF VIPASSANA




Change is nature’s law and the only constant. But never did I expect that the 12-day Vipassana course would bring about such a perceptible change in me. Today, I am a new man.

What spurred me to join the course was an email from our Chairman extolling the virtues of Vipassana. Until then, I had no idea of what Vipassana meant. I attended the course from March 1 to 12, at the Alur centre on the outskirts of Bangalore.

My journey to the Vipassana camp began with a clear mind, without any expectations. The strict rules and regulations of the course were initially a cause for concern—no mobile phones, no conversation, no newspapers, no television. For a person who belongs to the news department this was unthinkable. “How am I going to survive this ordeal,” I wondered.

The first three days were tough, but soon I began to enjoy the course and looked forward to the next day. After completing the course, my perspective of myself and the world has changed. Vipassana has taught me to understand myself through introspection and constant observation.

Earlier, I used to get tense very easily and my mind would constantly be in an agitated state. But now I have learnt to control my mind to a great extent by practising self control.

Vipassana has also taught me to deal with the problems that we face in our day-to-day lives. We normally tend to run away from our problems. But Vipassana has taught me to analyse and understand my problems.

Vipassana is very helpful for media professionals like us. Since I belong to the news section, there is always of pressure and tension to deliver the output on time, besides competition from the rival media channels. This course helps us to relax and calm down, to take each day as it comes and to think through things.

I thank our Chairman for granting special leave to Esselites desiring to attend the course. I recommend that every Esselite undergo the cours

Friday, May 30, 2008

ಪ್ರಜಾ ಪ್ರಭುತ್ವದ ಆಶಯ ಎತ್ತಿಹಿಡಿದ ಚುನಾವಣಾ ಆಯೋಗ


ರಾಜಕೀಯವೆಂದರೆ ವಾಕರಿಕೆ ಬರುವಂತಹ ಮಟ್ಟದಲ್ಲಿದ್ದ ರಾಜ್ಯದ ರಾಜಕೀಯ, ಚುನಾವಣಾ ಆಯೋಗ ಕೈಗೊಂಡ ಕೆಲವು ಕಟ್ಟು ನಿಟ್ಟಿನ ಕ್ರಮದಿಂದಾಗಿ ರಾಜ್ಯದ ಜನತೆಯಲ್ಲಿ ಒಂದಷ್ಟು ಸಮಾಧಾನ ಮೂಡಿಸಿದೆ. ಚುನಾವಣಾ ಆಯೋಗ ಈ ಮಟ್ಟದ ಕ್ರಮ ಕೈಗೊಳ್ಳುತ್ತದೆ ಎಂಬ ಸುಳಿವು ಈ ಮೊದಲೇ ಜನಸಾಮಾನ್ಯರಿಗೆ ದೊರೆತಿದ್ದರೆ ಪ್ರಜಾಪ್ರಭುತ್ವದ ಆಶಯಕ್ಕೆ ಮತ್ತಷ್ಟು ಮನ್ನಣೆ ಬರುವಂತೆ ಹೆಚ್ಚು ಹೆಚ್ಚು ಜನರಿಗೆ ಚುನಾವಣೆಗ ಸ್ಪರ್ಧಿಸುವಂತಹ ಅವಕಾಶ ದೊರೆಯುತ್ತಿತ್ತೇನೋ?

ಈ ಹಿಂದೆ ಸುಮಾರು ಇಪ್ಪತ್ತು ವರ್ಷಗಳಿಂದ ಈಚೆಗೆ, ಲೋಕಸಭೆ ಹಾಗೂ ವಿಧಾನ ಸಭೆಗಳಿಗೆ ನಡೆದ ಚುನಾವಣೆಗಳು, ಜನ ಸಾಮಾನ್ಯರಲ್ಲಿ ಅಸಮದಾನ ಉಂಟುಮಾಡಿದ್ದವು. ಚುನಾವಣೆ ಸಮಯದಲ್ಲಿ ನಡೆಯುತ್ತಿದ್ದ ಅಬ್ಬರದ ಪ್ರಚಾರ , ಹರಿಯುತ್ತಿದ್ದ ಹಣ ಹಾಗೂ ಹೆಂಡದ ಹೊಳೆ, ಸಮಾಜದಲ್ಲಿ ಪ್ರಜಾಪ್ರಭುತ್ವದ ಬಗ್ಗೆಯೇ ಅಸಹ್ಯ ಉಂಟು ಮಾಡುತ್ತಿತ್ತು. ಯಾವುದೇ ವ್ಯವಸ್ಥೆಗಿಂತಲೂ ಸರ್ವಶ್ರೇಷ್ಟ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಪ್ರಜಾ ಪ್ರಭುತ್ವದಂತಹ ಶ್ರೇಷ್ಟ ವ್ಯವಸ್ಥೆಯನ್ನು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶದ ಜನರು ಅಣಕಿಸುವ ಮುನ್ನ, ಪ್ರಜಾತಂತ್ರ ವ್ಯವಸ್ಥೆಯನ್ನು ಅನುಷ್ಟಾನಗೊಳಿಸಲು ಸಂವಿಧಾನಿಕವಾಗಿ ಅಸ್ಥಿತ್ವಕ್ಕೆ ಬಂದಿರುವ ಚುನಾವಣಾ ಆಯೋಗ ಎಚ್ಚೆತ್ತು ಕೊಂಡಿದ್ದು ಮೆಚ್ಚತ್ತಕ್ಕಂಹ ವಿಚಾರವಾಗಿದೆ.

ಭಾರತೀಯ ಸಂವಿಧಾನದ ಭಾಗ 15ರಲ್ಲಿ ಚುನಾವಣಾ ಆಯೋಗದ ಕರ್ತವ್ಯ ಹಾಗೂ ಅಧಿಕಾರಗಳ ಬಗ್ಗೆ ೩೨೪ ರಿಂದ 329ನೇ ವಿಧಿಯವರೆಗೂ ವಿವರಿಸಲಾಗಿದೆ. ನಮ್ಮ ದೇಶದ ಸಂಸತ್ತಿನ ಹಾಗೂ, ಯಾವುದೇ ರಾಜ್ಯಗಳ ವಿಧಾನ ಮಂಡಲ ಮತ್ತು ರಾಷ್ಟ್ರಪತಿಯ ಚುನಾವಣೆಗಳಿಗೆ ಸಂಬಂಧಿಸಿದಂತೆ ಚುನಾವನಾ ಆಯೋಗ ಜವಾಬ್ದಾರಿಯುತವಾದಂತಹ ಕೆಲಸ ನಿರ್ವಹಿಸಬಹುದಾಗಿದ್ದು, ಮತದಾರರ ಪಟ್ಟಿ ತಯಾರಿಕೆಯಿಂದ ಹಿಡಿದು ಚುನಾವಣೆಯ ನಿರ್ವಹಣೆ, ನಿರ್ದೇಶನ ಮತ್ತು ನಿಯಂತ್ರಣಗಳನ್ನು ಚುನಾವಣಾ ಆಯೋಗ ಮಾಡಬಹುದಾಗಿದೆ. ಆದರೆ ಕಳೆದ ವರ್ಷ ಮೈಸೂರಿನ ಚಾಮುಂಡಿ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆ ಪ್ರಜಾತಂತ್ರ ವ್ಯವಸ್ಥೆಯನ್ನು ಅಣಕಿಸುವ ಪರಿಯಲ್ಲಿದ್ದುದೇ ಚುನಾವಣಾ ಆಯೋಗ ಈ ಬಾರಿ ಈ ಮಟ್ಟದ ವಿಧಿವಿದಾನಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಕಾರಣವಾಗಿರಬಹುದು. ಈ ಎಲ್ಲಾ ಬೆಳವಣಿಗೆ ಚುನಾವಣಾ ಆಯೋಗಕ್ಕೆ ಶಿಸ್ತು ರೂಪಿಸಲು ಸಹಾಯಕವಾಗಿದೆ ಎಂಬುದು ಒಳ್ಳೆಯ ಬೆಳವಣಿಗೆಯೇ ಆಗಿದ್ದರೂ ಅದಕ್ಕೆ ಕರ್ನಾಟಕ ಕಾರಣವಾಯಿತಲ್ಲ ಎಂಬುದನ್ನು ಕನ್ನಡಿಗರು ಆಲೋಚಿಸುವಂಸುವಂತಾಗಿದೆ.

ಈ ಹಿಂದಿನ ಚುನಾವಣೆಗಳಲ್ಲಿ ನಡೆಯುತ್ತಿದ್ದ ಅಬ್ಬರದ ಪ್ರಚಾರ ಹರಿಯುತ್ತಿದ್ದ ಹಣದ ಹೊಳೆ ಇವೆಲ್ಲವೂ ಸಜ್ಜನರನ್ನು ಚಿಂತೆಗೆ ದೂಡಿದ್ದವು, ಸಾಮಾನ್ಯರು ಚುನಾವಣೆ ಎಂದರೆ ಅದು ಧಣಿಗಳಿಗೆ, ಹಣ ಉಳ್ಳವರಿಗೆ ಹಾಗೂ ಎಷ್ಟಾದರೂ ಸಹ ಖರ್ಚು ಮಾಡಲು ತಯಾರಿರುವವರಿಗೆ ಎಂಬ ರೀತಿ ಬಾಸವಾಗುತ್ತಿದ್ದವು. ಈ ಕಾರಣದಿಂದಲೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿಕೊಂಡು, ಚುನಾವಣೆಗಳಲ್ಲಿ ಆಸಕ್ತಿ ಇರುವವರೂ ಸಹ ಚುನಾವಣೆಗಳಿಂದ ದೂರವೇ ಉಳಿದಿದ್ದು ತಮ್ಮ ಅಸಹಾಯಕತೆ ಪ್ರದರ್ಶಿಸುತ್ತಿದ್ದರು ಆದರೆ ಚುನಾವಣಾ ಆಯೋಗ ಪ್ರಸ್ತುತ ಚುನಾವಣೆಯಲ್ಲಿ ಕೈಗೊಂಡ ಕ್ರಮಗಳು ಜನಸಾಮಾನ್ಯರಲ್ಲಿ ಚುನಾವಣೆ ಹಾಗೂ ಪ್ರಜಾಪ್ರಭುತ್ವ ಮತ್ತು ರಾಜಕಾರಣದ ಬಗ್ಗೆ ಆಶಾ ಕಿರಣ ಮೂಡಿಸಿವೆ.

ಚುನಾವಣಾ ಅಧಿಕಾರಿಗಳಿಗೆ ಯಾವ ವಿಧಧ ಅಧಿಕಾರವಿರುತ್ತದೆ ಹಾಗೂ ಅದನ್ನು ಸಮರ್ಥವಾಗಿ ಹೇಗೆ ಬಳಸಬಹುದು ಎಂಬುದನ್ನು ರೇಮಂಡ್ ಪೀಟರ್ ಅಂತಹ ದಕ್ಷ ಅಧಿಕಾರಿಗಳು ತೋರಿಸಿಕೊಟ್ಟಿರುವಂತದ್ದು ಸಹ ಕರ್ನಾಟಕದ ಚುನಾವಣೆಯಲ್ಲಿ ವ್ಯಕ್ತವಾಗಿದೆ. ದಕ್ಷ ಅಧಿಕಾರಿಗಳ ಪ್ರಾಮಾಣಿಕ ಕರ್ತವ್ಯ ನಿರ್ವಹಣೆಯಿಂದಾಗಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಹರಿದು ಬಂದಿದೆ. ಚುನಾವಣಾ ಸಮಯಗಳಲ್ಲಿ ಅಧಿಕಾರಿಗಳಿಗೆ ಎಂತಹ ಅಧಿಕಾರವಿರುತ್ತದೆ ಎಂಬುದರ ಅರಿವು ಮಾಡಿಕೊಟ್ಟು ಅದನ್ನು ಸಮರ್ಥವಾಗಿ ಬಳಸಲು ಅವಕಾಶ ಕೊಟ್ಟ ಚುನಾವಣಾ ಆಯೋಗದ ಕ್ರಮ ಪ್ರಶಂಸನಾರ್ಹವಾಗಿದೆ. ಆದರೆ ಇದೇ ಅಧಿಕಾರಿಗಳು ಬೆಂಗಳೂರು ಹಾಗೂ ಕೋಲಾರದಲ್ಲಿ ನೂರೈವತ್ತಕ್ಕೂ ಅಧಿಕ ಜನರ ಅಮೂಲ್ಯ ಪ್ರಾಣ ಬಲಿತೆಗೆದುಕೊಂಡ ಕಳ್ಳಭಟ್ಟಿ ನಿಯಂತ್ರಿಸುವಲ್ಲಿ ವಿಫಲರಾಗಿರುವುದು ಶೋಚನೀಯ ಸಂಗತಿಯಾಗಿದೆ.

ಇಷ್ಟೆಲ್ಲಾ ಸೂಕ್ತ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗ, ಕೇವಲ ಚುನಾವಣೆಗಳು ಬಂದಾಗ ಮಾತ್ರ ಹೆಚ್ಚು ಜಾಗೃತರಾಗದೆ, ವರ್ಷದ ಎಲ್ಲಾ ಕಾಲದಲ್ಲಿಯೂ ಜಾಗೃತವಾಗಿದ್ದು ಅಪಾರ ದೋಷಗಳಿಂದ ಕೂಡಿರುವ ಮತದಾರರ ಪಟ್ಟಿಯನ್ನು ಕಡಾ ಕಂಡಿತವಾಗಿ ಸಿದ್ದಪಡಿಸುವತ್ತ ಜಾಗೃತವಾಗಬೇಕಿದೆ ಹಾಗೂ ಬಹಳಾ ಕಾಲದಿಂದಲೂ ಸಮಸ್ಯೆಯಾಗಿಯೇ ಉಳಿದು ಬಂದಿರುವ ಕಡಿಮೆ ಪ್ರಮಾಣದ ಮತದಾನ ಸಮಸ್ಯೆಯನ್ನು ಬಗೆಹರಿಸುವತ್ತಲೂ ಆಲೋಚಿಸಬೇಕಾಗಿದೆ. ಪ್ರತೀ ಚುನಾವಣೆಯಲ್ಲು ಒಟ್ಟಾರೆ ಶೇಕಡ 50ಕ್ಕಿಂತಲೂ ಕಡಿಮೆ ಪ್ರಮಾಣದ ಮತದಾನವಾಗುತ್ತಿದ್ದು ಈ ಪ್ರಮಾಣದ ಮತದಾನದಿಂದ ಆಯ್ಕೆಯಾಗುವಂತಹ ಸದಸ್ಯರನ್ನು ಹಾಗೂ ಸರ್ಕಾರಗಳನ್ನು ಸರ್ವಸಮ್ಮತವಾಗಿ ಒಪ್ಪಕೊಳ್ಳುವುದು ಕಠಿಣ ಸಂಗತಿಯಾಗಿರುತ್ತದೆ.

ಒಟ್ಟಾರೆ ಕರ್ನಾಟಕದಲ್ಲಿ ಈಗ ನಡೆದ ಚುನಾವಣೆಯ ವಿಧಿ ಹಾಗೂ ವಿಧಾನಗಳು ನಮ್ಮ ರಾಜ್ಯದ ಹಾಗೂ ದೇಶದ ಜನರಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಹೊಸದಾದ ಆಶಾಕಿರಣ ಮೂಡಿಸುವಲ್ಲಿ ಯಶಸ್ವಿಯಾಗಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಪ್ರಜಾಪ್ರತಿಧಿಗಳು ಹಾಗೂ ಈಗ ಅಸ್ಥಿತ್ವಕ್ಕೆ ಬಂದಿರುವ ಸರ್ಕಾರವನ್ನು ಅವಲಂಭಿಸಿದೆ.

ನಮ್ಮ ರಾಜಕಾರಣಿಗಳಿಗೆ ಕ್ಷಮೆ ಇದೆಯೇ?



ರಕ್ಷಣೆ ಇಲ್ಲದ ರಾಜ್ಯದ ಮೇಲೆ ಎಂತೆಂತಹ ದಾಳಿಗಳನ್ನು ಮಾಡಬಹುದು ಎಂಬುದಕ್ಕೆ ಕರ್ನಾಟಕ ಉದಾಹರಣೆಯಾಗಬೇಕೇ? ಕರ್ನಾಟಕದ ಮೇಲೆ ನೆರೆ ರಾಜ್ಯಗಳ ಸವಾರಿ ಇಂದು ಹೊಸತೇನು ಅಲ್ಲ. ಇದು ಪಾರಂಪರಿಕವಾಗಿ ನಡೆದುಕೊಂಡು ಬಂದಿರುವುದು ನಮ್ಮ ಇತಿಹಾಸದಿಂದ ವೇದ್ಯವಾಗುತ್ತದೆ. ಇಂತಹ ಸನ್ನಿವೇಶ ಪ್ರಾಚೀನ ಕಾಲದಿಂದ ಅಸ್ಥಿತ್ವದಲ್ಲಿದ್ದರೂ ಸಹ ಇದಾವುದನ್ನು ಲೆಕ್ಕಿಸದೆ ಸ್ವಾರ್ಥ ವನ್ನೇ ಪ್ರಧಾನವಾಗಿರಿಸಿಕೊಂಡು ಒಂದು ಆಡಳಿತಾತ್ಮಕ ವ್ಯವಸ್ಥೆಯನ್ನು ಗಾಳಿಗೆ ತೂರಿದ ನಮ್ಮ ರಾಜಕಾರಣಿಗಳಿಗೆ ಕ್ಷಮೆ ಇದೆಯೇ?

2004ರ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭೆಗೆ ಯಾವುದೇ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಆ ಸಂದರ್ಭದಲ್ಲಿ ಅಸ್ಥಿತ್ವಕ್ಕೆ ಬಂದಿದ್ದು ಸಮ್ಮಿಶ್ರ ಸರ್ಕಾರ, ಮೊದಲು ಕಾಂಗ್ರೇಸ್ನೊಂದಿಗೆ ಆನಂತರ ಬಿ.ಜೆ.ಪಿ ಯೊಂದಿಗೆ ಸರ್ಕಾರ ರಚನೆ ಮಾಡಿ ಸರಿ ಸುಮಾರು 20-20 ತಿಂಗಳುಗಳ ಕಾಲ ಆಡಳಿತ ನಡೆಸಿದ ಜಾತ್ಯಾತೀತ ಜನತಾದಳ ಸ್ವಾರ್ಥವನ್ನು ಮೈಗೂಡಿಸಿಕೊಂಡು ಎರಡೂ ಪಕ್ಷಗಳೊಂದಿಗೆ ಸಂಬಂಧ ಕಡಿದು ಸರ್ಕಾರಗಳನ್ನು ಉರುಳಿಸಿದ ಕಥೆ ಜನ ಸಾಮಾನ್ಯರೆಲ್ಲರಿಗೂ ಗೊತ್ತು.

ಹೀಗೆ 2004ರ ನಂತರ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲು ಕೈ ಜೋಡಿಸಿದ ಯಾವುದೇ ಪಕ್ಷದವರೂ ನಾಡು ನುಡಿ ಹಾಗೂ ಇಲ್ಲಿನ ಜನರ ಕುರಿತಾಗಿ ಕಿಂಚಿತ್ತಾದರೂ ಆಲೋಚಿಸಿದ್ದರೇ ಎಂಬುದು ಪ್ರಶ್ನಾರ್ಹ. ಒಂದು ಸರ್ಕಾರದ ಅಸ್ಥಿತ್ವವಾಗಲಿ ಅಥವಾ ಅವನತಿಯಾಗಲಿ ಒಂದು ರಾಜ್ಯದ ಮೇಲೆ ಸೂಕ್ಷ್ಮವಾಗಿ ಹಾಗೂ ಸಮಗ್ರವಾಗಿ ಎಂಥೆಂತಹ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದನ್ನು ಯೋಚಿಸದೇ ನಿರ್ಧಾರ ಕೈಗೊಳ್ಳುವ ಮುಖಂಡರು ನಮ್ಮ ಮೇಲೆ ಹತ್ತಾರು ವರ್ಷಗಳಿಂದ ಆಡಳಿತ ನಡೆಸುತ್ತಿದ್ದಾರೆ ಹಾಗೂ ಅವರನ್ನೇ ನಾವು ಪುನ: ಪುನ: ಆಯ್ಕೆ ಮಾಡುತ್ತಿದ್ದೇವೆ ಎಂಬುದು ಮತದಾರರು ತಲೆ ತಗ್ಗಿಸುವಂತಹ ವಿಷಯವಾಗಿದೆ.

ಪ್ರಸ್ತುತ ಕರ್ನಾಟಕದ ವಿಚಾರವನ್ನು ಗಮನಿಸುವುದಾದರೆ ಒಂದೆಡೆ ತಮಿಳುನಾಡಿನ ಕಿರುಕುಳ, ಮತ್ತೊಂದೆಡೆ ಎಂದಿಗೂ ಯಾವುದಕ್ಕೂ ಈ ಪರಿಯಲ್ಲಿ ತಂಟೆ ಮಾಡದ ಕೇರಳ ಇಂದು ಅಪಸ್ವರ ಎಳೆದು ಕುಳಿತಿದೆ. ಇನ್ನು ಮಹಾರಾಷ್ಟ್ರದ ರಗಳೆ ಹಿಂದಿನಿಂದಲೂ ಇದ್ದದ್ದೇ, ಆಂಧ್ರದ ಹಿಂಸೆ ಸದ್ಯಕ್ಕೆ ಇಲ್ಲವಾದರೂ ಅದರ ರಗಳೆಯನ್ನು ತಳ್ಳಿ ಹಾಕುವಂತಿಲ್ಲ. ಹೊಗೇನಕಲ್ ದ್ವೀಪದಲ್ಲಿ ನಡೆಯುತ್ತಿರುವ ಕಾಮಗಾರಿ ಅಧಿಕೃತವೋ, ಅನಧೀಕೃತವೋ ಎಂಬ ವಿಚಾರ ಇನ್ನು ಮುಂದೆ ನಿರ್ಧಾರವಾಗಬೇಕಾಗಿದೆ. ಆದರೆ ಒಂದು ರಾಜ್ಯದಲ್ಲಿ ಜನಪ್ರಿಯ ಸರ್ಕಾರ ಇಲ್ಲದ ಸಂಧರ್ಭದಲ್ಲಿ ಅವರು ಅದನ್ನು ಕೈಗೆತ್ತಿಕೊಂಡಿದ್ದು, ಅವರ ಸಮಯಸಾಧಕತನ ಹಾಗೂ ನಮ್ಮ ಜನಪ್ರತಿನಿಧಿಗಳ ಮೂರ್ಖತನ ಎಂಬುದರಲ್ಲಿ ಎರಡನೇ ಮಾತಿಲ್ಲ. ತಮಿಳುನಾಡು ಜಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮೇಲೆ ಆಗ್ಗಾಗ್ಗೆ ಸವಾರಿ ಮಾಡುತ್ತಲೇ ಬಂದಿದ್ದು ಅದನ್ನು ಸಮರ್ಥವಾಗಿ ಎದುರಿಸಲಾಗದ ನಮ್ಮ ಮುಂಖಂಡರೆನಿಸಿಕೊಂಡವರು ತಮಿಳುನಾಡು ರಾಜಕೀಯ ಕಾರಣಕ್ಕಾಗಿ ಈ ವಿಚಾರವನ್ನು ಆಗ್ಗಾಗ್ಗೆ ಪ್ರಸ್ಥಾಪಿಸುತ್ತಿದ್ದು ಸದಾ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿವೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ಈ ಸಂಗತಿಯೂ ಸಹ ನಮ್ಮ ಮುರ್ಖ ರಾಜಕಾರಣಿಗಳ ಹೊಣೆಗೇಡಿ ಹೇಳಿಕೆಗಳು, ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸ್ವಾಭಿಮಾನ ಸಂಬಂಧಿ ವಿಚಾರಗಳಿಗೆ ನೇರವಾಗಿ ಸಂಬಂಧಿಸಿದುದು ಎಂಬ ಅರಿವಿದ್ದಿದ್ದರೆ ಈ ಹೇಳಿಕೆಗಳನ್ನು ಯಾವುದೇ ಜವಾಬ್ದಾರಿಯುತವಾದ ವ್ಯಕ್ತಿ ನೀಡುತ್ತಿರಲಿಲ್ಲ.

ಅನೇಕ ಸಮಸ್ಯೆಗಳಿದ್ದರೂ ಸಹ ಇದುವರೆಗೆ ಸೌಹಾರ್ಧಯುತವಾಗಿ ನಡೆದುಕೊಂಡು ಬಂದಿದ್ದ ಕೇರಳ ದಕ್ಷಣ ಕನ್ನಡ ಜಿಲ್ಲೆಯ ಸೂಳ್ಯ ತಾಲ್ಲೂಕಿನ ಗಡಿ ಭಾಗದ ನೂರಾರು ಎಕರೆ ಜಾಗ ತನಗೆ ಸೇರಬೇಕು ಎಂದು ಅಲ್ಲಿ ವನಸಂವರ್ಧನೆಗೆ ಮುಂದಾಗಿರುವುದು ದುರಂತದ ಸಂಗತಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯವೂ ಸಹ ಕರ್ನಾಟಕದಲ್ಲಿ ಜನಪ್ರಿಯ ಸರ್ಕಾರ ಅಸ್ಥಿತ್ವದಲ್ಲಿ ಇಲ್ಲದೇ ಇರದ ಕಾಲದಲ್ಲಿ ಮುಂದಾಗಿರುವುದು ಪರಸ್ಪರ ರಾಜ್ಯಗಳ ದೌರ್ಭಲ್ಯವೇ ಆಗಿದೆ.

ಮಹಾರಾಷ್ಟ್ರ ರಾಜ್ಯವಂತೂ ಅಲ್ಲಿಯ ರಾಜ್ಯ ಸರ್ಕಾರವೂ ಸೇರಿದಂತೆ ವಿವಿಧ ಸಂಘಟನೆಗಳು ಎಗ್ಗು ಸಿಗ್ಗಿಲ್ಲದೆ ಕರ್ನಾಟಕದ ಮೇಲೆ ವಿಪರೀತ ಹೇಳಿಕೆಗಳನ್ನು ನೀಡುತ್ತಾ ಗಡಿ ಸಮಸ್ಯೆ ಬಿಗಡಾಯಿಸುವಂತೆ ಮಾಡುತ್ತಿರುವುದು ಅವಕಾಶವಾದವಲ್ಲದೆ ಮತ್ತೇನೂ ಅಲ್ಲ. ಸದ್ಯದ ಸ್ಥಿತಿಯಲ್ಲಿ ಆಂಧ್ರ ಯಾವುದೇ ಸಮಸ್ಯೆಗಳನ್ನು ಉಂಟು ಮಾಡದೇ ಇದ್ದಾಗ್ಯೂ ಕರ್ನಾಟಕದಲ್ಲಿ ಒಂದು ಜನಪ್ರಿಯ ಸರ್ಕಾರ ಹಾಗೂ ದಕ್ಷ ಆಡಳಿತ ಅಸ್ಥಿತ್ವದಲ್ಲಿ ಇದ್ದ ಸಂದರ್ಭದಲ್ಲಿಯೇ ನಮ್ಮ ಜಿಲ್ಲಾಧಿಕಾರಿ ಹಾಗೂ ತಾಲ್ಲೂಕು ದಂಡಾಧಿಕಾರಿಗಳಿಗೆ ಗೊತ್ತಿಲ್ಲದಂತೆ ರಾಜ್ಯದ ಒಳಗೂ ಕಾಮಗಾರಿ ಮಾಡಿದ ಅವಿವೇಕಿಗಳು. ಈ ಕಾರಣದಿಂದ ಅವರನ್ನು ನಾವು ಯಾವಾಗಲೂ ಕಡೆಗಣಿಸಲಾಗದು.

ಒಂದು ರಾಜ್ಯದಲ್ಲಿ ದಕ್ಷ ಆಡಳಿತ ಹಾಗೂ ಸರ್ಕಾರ ಇಲ್ಲದಾಗ ಏನೆಲ್ಲಾ ಅವಘಡಗಳು ಸಂಭವಿಸುತ್ತವೆ ಎಂಬ ಪಾಠವನ್ನು ಈ ಸಂಧರ್ಭದಲ್ಲಿ ಕಲಿಯುವ ಅವಕಾಶವನ್ನೂ ಈ ಹಿಂದೆ ೨೦-೨೦ ತಿಂಗಳು ನಮ್ಮನ್ನು ಆಳಿದ ಸಮ್ಮಿಶ್ರ ಸರ್ಕಾರಗಳು ಕಲಿಸಿ ಹೋಗಿವಿ ಹಾಗೂ ರಾಜಕಾರಣಿಗಳನ್ನು ಸಹ ಸ್ವಯಂ ಬೋಧನೆಗೆ ಒಳಗಾಗಿರಬಹುದು, ಇಂತಹಜ ಸ್ಥಿತಿ ಮುಂದೆ ಕನ್ನಡಿಗರಿಗೆ ಬಾರದಂತೆ ತಡೆಯುವ ಶಕ್ತಿ ಇರುವುದು ಕನ್ನಡಿಗರಿಗೆ ಮಾತ್ರ.

Thursday, May 29, 2008

ವೈಜ್ಞಾನಿಕ ಕ್ರಾಂತಿ ಅಭಿವೃದ್ದಿಯ ಮೂಲ ಮಂತ್ರವಾಗಲಿ




ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಭಾರತದಲ್ಲಿ ಉನ್ನತ ಸಂಶೋಧನೆಗಳು ಹಾಗೂ ಪ್ರಯೋಗಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಹಾಗೂ ಸ್ವಾಗತಾರ್ಹ. ಈಚೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ಮಿತ ಧ್ರುವಗಾಮಿ ಕ್ಷಿಪಣಿ ( ಪಿಎಸ್ ಎಲ್ ವಿ-ಸಿ೯) ಏಕಕಾಲದಲ್ಲಿ ಹತ್ತು ಉಪಗ್ರಹಗಳನ್ನು ಯಶಸ್ವಿಯಾಗಿ ಉಡ್ಡಾಯನ ಮಾಡಿ ಅವುಗಳನ್ನು ಕಕ್ಷೆಗೆ ಸೇರಿಸುವ ಮೂಲಕ ವಿಶ್ವದ ಗಮನ ಸೆಳೆದಿದೆ. ಈ ಮೂಲಕ ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆ ಲವಲವಿಕೆಯಿಂದ ಕೂಡಿದ್ದು ಮುಂದುವರೆದ ದೇಶಗಳ ಸಂಶೋಧನೆ ಹಾಗೂ ಸಾಧನೆಯ ಮಟ್ಟದಲ್ಲಿಯೇ ಮುಂದುವರೆಯುತ್ತಿದೆ ಎಂಬುದನ್ನು ವಿಶ್ವಕ್ಕೆ ತೋರಿಸಿದಂತಾಗಿದೆ. ಈ ಎಲ್ಲಾ ಯಶಸ್ಸಿನ ಗುಟ್ಟು, ಈ ಹಿಂದೆ ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನೆಗೆ ನಮ್ಮ ಸರ್ಕಾರಗಳು ಹಾಗೂ ಈ ದೇಶದ ಧುರೀಣರು ನೀಡಿದ ಪ್ರಾಧ್ಯಾನ್ಯತೆಯನ್ನು ಸ್ಮರಿಸುವ ಕಾಲ ಇದಾಗಿದೆ.

ಏಪ್ರಿಲ್ ೨೮ ರಂದು ಬಾಹ್ಯಾಕಾಶ ಕಕ್ಷೆಗೆ ಸೇರಿಸಲಾದ ಕಾರ್ಟೋಸ್ಯಾಟ್-2ಎ ಉಪಗ್ರಹ ಭೂಮಿಯ ಮೇಲ್ಮೈ ವಿಸ್ತೀರ್ಣ ಹಾಗೂ ಭೂಮಿಯ ಮೇಲಿನ ವಿವಿಧ ಚಟುವಟಿಕೆಗಳನ್ನು ತಿಳಿಯಲು ಉಪಯುಕ್ತವಾಗಿದೆ ಎಂದು ತಿಳಿದುಬಂದಿದೆ. ಈ ವರೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಯೋಗಳನ್ನು ನಡೆಸಿ, ಈ ಸಂಬಂಧಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಪರಿಣಾಮ ಯಾವುದೇ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿಯೂ ಆಗದಂತಹ ಉನ್ನತ ಮಟ್ಟದ ದೂರಸಂಪರ್ಕ ಕ್ರಾಂತಿ ಭಾರತದಲ್ಲಿ ಆಗುತ್ತಿರುವುದು ಗಮನಾರ್ಹ.

ದೇಶದ ಭೌಗೋಳಿಕ ಸ್ಥಿತಿ, ಪ್ರಾಕೃತಿಕ ಸ್ಥಿತಿ ಹಾಗೂ ಹವಾಮಾನ ಕುರಿತಂತೆ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಈವರೆಗೆ ಅನೇಕ ಉಪಗ್ರಹಗಳನ್ನು ಹಾರಿಸಲಾಗಿದ್ದು ಮೊನ್ನೆ ಕಕ್ಷೆಗೆ ಸೇರಿಸಲಾದ ಉಪಗ್ರಹದಿಂದ ಇನ್ನು ಉನ್ನತವಾದ ಮಾಹಿತಿ ಪಡೆಯಬಹುದಾಗಿದೆ ಎಂಬುದು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ವಿಷಯವಾಗಿದೆ. ಅದರಲ್ಲಿಯೂ ಈ ಉಪಗ್ರಹದ ನೆರವಿನಿಂದ ಭಾರತದಲ್ಲಿನ ನದಿಗಳ ಬಗ್ಗೆ ಅವುಗಳ ಸ್ಥಿತಿಬಗ್ಗೆ ತಿಳಿಯಲು ಸಹಾಯಕವಾಗಿರುವುದು ಅತ್ಯುಪಯುಕ್ತವಾಗಿದೆ. ಆಧುನೀಕರಣದ ಭರಾಟೆಯಲ್ಲಿ, ಕೈಗಾರೀಕರಣದ ಕ್ರಾಂತಿಯ ನಡುವೆ, ಈಗಾಗಲೇ ದೇಶದಲ್ಲಿ ಅನೇಕ ನದಿಗಳು ಬತ್ತಿದ್ದು ಇದು ಮುಂದುವರೆಯುತ್ತಿರುವ ಭಾರತ ದೇಶಕ್ಕೆ ಸವಾಲಿನ ವಿಷಯವಾಗಿದೆ. ಈ ನಡುವೆ ಅಳಿವಿನ ಅಂಚಿನಲ್ಲಿರುವ ನದಿಗಳ ಬಗ್ಗೆಯೂ ಪ್ರಸ್ತುತ ಉಪಗ್ರಹದಿಂದ ಮಾಹಿತಿ ಪಡೆಯಬಗುದಾಗಿದ್ದು ಈ ಮೂಲಕ ಮುಂದಿನ ಪೀಳಿಗೆಗೆ ನಾವು ಅತ್ಯುಪಯುಕ್ತವಾದ ಕೊಡುಗೆ ನೀಡಬಹುದಾಗಿದೆ. ಆದರೆ ಪರಿಸರಿಕವಾಗಿ, ಭೌಗೋಳಿಕವಾಗಿ, ವಾತಾವರಣಕ್ಕೆ ಸಂಬಂಧಿಸಿದಂತೆ ಅತ್ಯದ್ಬುತವಾದ ಮಾಹಿತಿ ಪಡೆಯುತ್ತಿರುವ ಈ ದೇಶದಲ್ಲಿ ಮಾಹಿತಿ ಎಷ್ಟರಮಟ್ಟಿಗೆ ಈ ದೇಶದ ಜನರಿಗೆ ಹಾಗೂ ವ್ಯವಸ್ಥೆಯ ಅಭಿವೃದ್ದಿಗೆ ಸದ್ಬಳಕೆಯಾಗುತ್ತಿದೆ ಎಂಬುದು ಪ್ರಶ್ನಾರ್ಹವಾದ ವಿಷಯವಾಗಿದೆ.

ಭೌಗೋಳಿಕ ಮಾಹಿತಿ ನೀಡುವ ಸಲುವಾಗಿ ಈಗಾಗಲೇ ಅನೇಕ ಉಪಗ್ರಹಗಳನ್ನು ಉಡಾಯಿಸಲಾಗಿದ್ದು, ಅವು ಸಮರ್ಪಕವಾಗಿ ಕೆಲಸ ಮಾಡುತ್ತಿವೆ. ಅಂತರಿಕ್ಷದಿಂದ ನೇರವಾಗಿ ನಿಯಂತ್ರಣ ಕೇಂದ್ರಗಳಿಗೆ ರವಾನೆಯಾಗುತ್ತಿರುವ ವಿವಿಧ ಮಾಹಿತಿಗಳು, ಅನಾಹುತಗಳನ್ನು ತಡೆಯುವಲ್ಲಿ ಯಶಸ್ವಿಯಾಗದೇ ಇರುವುದಕ್ಕೆ, ಪರಿಣಾಮಕಾರಿಯಾದ ಮಾಹಿತಿಯ ಹರಿವು ಹಾಗೂ ದಕ್ಷ ಆಡಳಿತ ಜಾರಿ ಆಗದೇ ಇರುವುದೇ ಕಾರಣವಾಗಿದೆ. ಒಂದು ಚಿಕ್ಕ ಉದಾಹರಣೆಯ ಮೂಲಕ ವಿವರಿಸುವುದಾದರೆ, ಇಂದಿಗೂ ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಇಲ್ಲಿನ ರೈತರು ಮಳೆಯೊಂದಿಗೆ ಜೂಜಾಡುತ್ತಿದ್ದು, ಮುಂಗಾರು ಹಾಗೂ ಹಿಂಗಾರು ಮಳೆ ಕುರಿತಂತೆ ಉಪಗ್ರಹ ಸಮಗ್ರವಾದ ಮಾಹಿತಿ ನೀಡುತ್ತಿದ್ದು ಮಾಹಿತಿಗನುಗುಣವಾಗಿ ಕೃಷಿ ಪದ್ದತಿ ಯೋಜಿಸುವಲ್ಲಿ ನಮ್ಮ ವ್ಯವಸ್ಥೆ ಹಾಗೂ ಅಧಿಕಾರಿಗಳು ಸಂಪೂರ್ಣವಾಗಿ ಸೋತಿದ್ದಾರೆ. ಹೊಡೆ ಅಥವಾ ಹೂವ್ವಿನ ಕಾಲದಲ್ಲಿ ಇಡೀ ದೇಶದ ಕೃಷಿ ಸ್ಥಿತಿಯನ್ನು ಗಮನಿಸಿ, ಪ್ರಸಕ್ತ ವರ್ಷದ ಇಳುವರಿ ಅಂದಾಜು ಮಾಡುವ ತಂತ್ರಜ್ಞಾನವನ್ನು ಭಾರತ ಹೊಂದಿದೆ. ಈ ಕುರಿತಾದ ವಾರ್ಷಿಕ ವರದಿಯನ್ನು ಕಾಲಕಾಲಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಬಿಡುಗಡೆ ಮಾಡುತ್ತಲೂ ಬಂದಿದೆ. ಆದರೆ ಅದನ್ನು ವಿಶ್ಲೇಷಿಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ನಮ್ಮ ಸರ್ಕಾರ ಉತ್ತಮ ಕ್ರಮ ಕೈಗೊಂಡಿದುದೇ ಆದಲ್ಲಿ ಈಗ ಉದ್ಬವಿಸಿರುವ ಹಣದುಬ್ಬರ ಪರಿಸ್ಥಿತಿಯ ಒಂದಂಶವನ್ನಾದರೂ ನಿಯಂತ್ರಿಸಬಹುದಾಗಿತ್ತು. ಅಷ್ಟೇ ಅಲ್ಲದೇ ಯಾವುದೇ ಕೃಷಿ ಉತ್ಟನ್ನದ ಕೊರತೆ ಹಾಗೂ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಧುರೀಣರು ಅಪಹಾಸ್ಯಕ್ಕೀಡಾಗುವಂತಹ ಹೇಳಿಕೆ ನೀಡುವುದೂ ತಪ್ಪುತ್ತದೆ.

ವಾಸ್ತವವಾಗಿ ಕಳೆದ ಸಾಲಿನಲ್ಲಿ ಗೋಧಿ ಉತ್ಪಾದನೆ ಕುಂಠಿತಕ್ಕೆ ಸಂಬಂಧಿಸಿದಂಗತೆ ಭಾರತೀಯ ಕೃಷಿ ಸಚಿವಾಲಯಕ್ಕೆ ನಿಖರವಾದ ಮಾಹಿತಿ ರವಾನೆಯಾಗಿತ್ತು ಈ ಸಾಲಿನ ಗೋಧಿ ಉತ್ಪಾದನೆ ಹವಾಮಾನದ ಏರು ಪೇರಿನ ಪರಿಣಾಮದಿಂದ ಗಣನೀಯವಾಗಿ ಕುಗ್ಗಲಿದೆ ಎಂಬ ವಿಚಾರ ಸ್ಪಷ್ಟವಾಗಿ ತಿಳಿದಿದ್ದರೂ, ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುದ ಕೃಷಿ ಸಚಿವರು ಸಮಸ್ಯೆ ತಲೆದೂರಿದ ಮೇಲೆ, ಅದನ್ನು ಪರರ ಮೇಲೆ ಹೊರಿಸಲು ಮುಂದಾದುದು ಅಕ್ಷಮ್ಯ. "ದಕ್ಷಿಣ ಭಾರತೀಯರು ಗೋಧಿಯನ್ನು ಹೆಚ್ಚು ಸೇವನೆ ಮಾಡುತ್ತಿರುವುದೇ ಗೋಧಿ ಬೆಲೆ ಏರಿಕೆಗೆ ಪ್ರಮುಖ ಕಾರಣ ಈ ಮೂಲಕ ಗೋಧಿ ದಾಸ್ತಾನು ದೇಶದಲ್ಲಿ ಕಡಿಮೆಯಾಗಿದೆ". ಎಂಬ ಹಾಸ್ಯಾಸ್ಪದ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಬೆಂಬಲ ಬೆಲೆಗಿಂತಲೂ ಅಧಿಕ ಬೆಲೆ ನೀಡಿ ವಿದೇಶಗಳಿಂದ ಗೋಧಿ ಆಮದು ಮಾಡಿಕೊಂಡಿದ್ದರಿಂದ ಆರ್ಥಿಕವಾಗಿಯೂ ದೇಶಕ್ಕೆ ಬಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.

ಭಾರತೀಯ ಬಡ ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಲು ಮೀನಾ ಮೇಷಾ ಇಣಿಸಿ, ಹತ್ತಾರು ದಿವಸ ಮುಷ್ಕರ ಹಾಗೂ ವಿವಿಧ ಪ್ರತಿಭಟನೆಗಳ ಬಿಸಿ ಮುಟ್ಟಿದ ಬಳಿಕ ಒಂದು ಗಂಭೀರ ಸಮಸ್ಯೆಗೆ ಸ್ಪಂದಿಸಲು ಮುಂದಾಗುವ ಸರ್ಕಾರ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪದಾರ್ಥಗಳಿಗೆ ದುಬಾರಿ ಬೆಲೆ ನೀಡಲು ಏಕಾ ಏಕಿ ಮುಂದಾಗುವುದು ಸರ್ಕಾರದ ಬದ್ದತೆಯ ಪ್ರಶ್ನೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ, ಆಗ್ಗಿಂದಾಗ್ಗೆ ಪರಿಸ್ಥಿತಿ ಬಗೆಗಿನ ಮುನ್ಸೂಚನೆ ನೀಡುವ ಪುಟಗಟ್ಟಲೆ ವರದಿಗಳನ್ನು ವಾರ್ತಾ ಇಲಾಖೆಗೆ ಹಾಗೂ ಈ ಮೂಲಕ ಇತರೆ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸುತ್ತಲೇ ಇರುತ್ತದೆ. ಆದರೆ ಅದರ ಹರಿವು ಹಾಗೂ ಅದರಿಂದ ಉಂಟಾಗಬಹುದಾದ ಪರಿಣಾಮ ಸೂಕ್ತವಾಗಿ ನೆರವೇರುತ್ತಿಲ್ಲ. ಮಾಹಿತಿ ತಂತ್ರಜ್ಞಾನ ಇಂದು ಮನರಂಜನೆಗೆ ಬಳಕೆಯಾದಷ್ಟು ಪ್ರಮಾಣದಲ್ಲಿ ಇತರೆ ಅಭಿವೃದ್ದಿ ಕಾರ್ಯಗಳಿಗೆ ಬಳಕೆಯಾಗದೇ ಇರುವುದು ಆತಂಕಕ್ಕೆ ಈಡುಮಾಡಿದೆ. ಭಾರತದಲ್ಲಿ ಉಂಟಾಗಿರುವ ಸಂವಹನ ಹಾಗೂ ಸಂಪರ್ಕ ಕ್ರಾಂತಿ ಈ ದೇಶದ ಬಡತನ, ಗಂಡಾಂತರ, ಸಾಮಾಜಿಕ ಸಮಸ್ಯೆಗಳನ್ನು ನೀಗುವತ್ತ ಬಳಕೆಯಾದರೆ ಮಾತ್ರ ನಮ್ಮ ಕ್ರಾಂತಿಗೆ ಅರ್ಥ ಲಭಿಸೀತು. ಕ್ರಾಂತಿ ಅಭಿವೃದ್ದಿಗೆ ಬಳಕೆಯಾಗದೆ ಕೇವಲ ಇತರೆ ರಾಷ್ಟ್ರಗಳ ನಡುವೆ ನಮ್ಮ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳಲು ಮಾತ್ರ ಸೀಮಿತವಾಗದಿರಲಿ.

ಲಭ್ಯ ಮಾಹಿತಿಯನ್ನು ಸರಿಯಾಗಿ ವಿಶ್ಲೇಷಿಸದೆ, ಪರಿಸ್ಥಿತಿಗೆ ತಕ್ಕಂತೆ ಸೂಕ್ತ ಕ್ರಮ ಕೈಗೊಳ್ಳದೆ ದೇಶಕ್ಕೆ ಸಾಕಷ್ಟು ಹಾನಿ ಸಂಭವಿಸುತ್ತಿರುವುದು ಮುಂದುವರೆಯುತ್ತಿರುವ ಭಾರತಕ್ಕೆ ಕಂಟಕವಾಗಿ ಪರಿಣಮಿಸಿದೆ. ಪ್ರಯೋಗ, ಸಂಶೋಧನೆ, ಉಪಗ್ರಹಗಳ ಉಡಾವಣೆ ಹಾಗೂ ಮಾಹಿತಿ ರವಾನೆಗೆ ಸಂಬಂಧಿಸಿದಂತೆ ಲಕ್ಷಾಂತರ ಕೋಟಿ ರೂಪಾಯಿ ಸಾರ್ವಜನಿಕ ಹಣ ವಿನಿಯೋಗವಾಗುತ್ತಿದೆ. ಸಮಸ್ಯೆ ಬಗೆಹರಿಯುವ ನಿಟ್ಟಿನಲ್ಲಿ ಮಾಹಿತಿ ಬಳಕೆಯಾಗಬೇಕು, ಇಲ್ಲವಾದರೆ ನಮ್ಮ ಹಣ, ಸಂಶೋಧನೆ ಹಾಗೂ ಶ್ರಮಕ್ಕೆ ಬೆಲೆ ಇಲ್ಲದಂತಾಗುತ್ತದೆ. ಇನ್ನು ಮುಂದಾದರೂ ಮಾಹಿತಿ ಆಧರಿಸಿ ಸೂಕ್ತ ಹಾಗೂ ಉಪಯುಕ್ತ ಕ್ರಮಗಳನ್ನು ಕೈಗೊಳ್ಳುವತ್ತ ನಮ್ಮ ಸರ್ಕಾರ ಜಾಗೃತವಾಗಬೇಕು.

ಮಧುಸೂದನ್.ವಿ