Wednesday, October 22, 2008

ಮಹಾ ಕುಸಿತವೆಂಬ ಮಹಾಮಾರಿ


ವಿ. ಮಧುಸೂದನ್

ವಿಶ್ವ ಆರ್ಥಿಕ ಮುಗ್ಗಟ್ಟಿನ ಪರಿಣಾಮಗಳು ಒಂದೊಂದಾಗಿಯೇ ಭಾರತದ ಆರ್ಥಿಕ ವ್ಯವಸ್ಥೆಯನ್ನು ಭಾದಿಸಲು ಪ್ರಾರಂಭವಾಗಿದೆ. ಮಹಾಕುಸಿತದ ಪರಿಣಾಮಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಅಂಶವೆಂದರೆ ಉದ್ಯೋಗದ ಕಡಿತ. ಆರ್ಥಿಕ ಹಿಂಜರಿತದಿಂದ ಉಂಟಾಗುತ್ತಿರುವ ಆರ್ಥಿಕ ನಷ್ಟವನ್ನು ಭರಿಸುಕೊಳ್ಳಲು ಕಾರ್ಪೊರೇಟ್ ಸಂಸ್ಥೆಗಳು ಕಂಡು ಕೊಂಡ ಮಾರ್ಗವೇ ಉದ್ಯೋಗದ ಕಡಿತ. ಈ ನೀತಿ ಹೆಚ್ಚು ಭಾದಿಸುವುದು ಭಾರತದಂತಹ ಮಾನವ ಸಂಪನ್ಮೂಲ ಆಧಾರಿತ ರಾಷ್ಟ್ರಗಳನ್ನು. ಈಗಾಗಲೆ ಕೆಲ ವಿಮಾನಯಾನ ಸಂಸ್ಥೆಗಳು ಹಾಗೂ ಕೆಲ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ತಮ್ಮ ಉದ್ಯೋಗದ ಪ್ರಮಾಣದಲ್ಲಿ ಕಡಿತ ಮಾಡಲು ಮುಂದಾಗಿರುವುದು ಎಂತಹವರಿಗೂ ಕರುಳು ಕಲಕುವಂತಹ ವಿಚಾರವಾಗಿದೆ. ಆರ್ಥಿಕ ಮುಗ್ಗಟ್ಟಿನಂತಹ ವಿಚಾರಗಳು ವಿಶ್ವದಲ್ಲಿ ಸಂಭವಿಸುತ್ತಿರುವುದು ಇದೇ ಮೊದಲೇನು ಅಲ್ಲ ಈ ಹಿಂದೆ ಇಂತಹ ಸಂದರ್ಭಗಳು ಅನೇಕ ದೇಶಗಳಿಗೆ ವಿವಿಧ ವ್ಯವಸ್ಥೆಗಳಿಗೆ ಬಂದೊದಗಿವೆ ಆದರೆ ಈ ಬಾರಿಯ ಮುಗ್ಗಟ್ಟು ಹಾಗೂ ಉದ್ಯೋಗ ಕಡಿತ ಒಂದನ್ನೊಂದು ಪರಸ್ಪರ ಅವಲಂಭಿಸಿದ್ದು, ಇದು ಮುಂಬರುವ ದಿವಸಗಳಲ್ಲಿ ಎಂತಹ ಪರಿಣಾಮಗಳನ್ನು ಉಂಟುಮಾಡಲಿವೆ ಎಂಬುದು ಊಹೆಗೆ ನಿಲುಕದ ಸಂಗತಿಯಾಗಿದೆ.
ಈ ಹಿಂದೆಯೇ ಅನೇಕ ಐಟಿ ಸಂಸ್ಥೆಗಳು ಹಲವು ಉದ್ಯೋಗಿಗಳನ್ನು ತನ್ನ ಸಂಸ್ಥೆಯಿಂದ ಬಿಡುಗಡೆ ಮಾಡುತ್ತಿದಂತಹ ಘಟನೆಗಳು ಅಗಾಗ್ಗೆ ಸಂಭವಿಸುತ್ತಿದ್ದವು ಆದರೆ ಈಗ ಅದು ಹಲವು ಕಂಪೆನಿಗಳಿಗೆ ಅನಿವಾರ್ಯವಾಗಿದೆ. ಈಗ ಮಾಡುತ್ತಿರುವ ಉದ್ಯೋಗದ ಕಡಿತ ಏಕೆ ಮಹತ್ವ ಪಡೆದುಕೊಂಡಿದೆ ಎಂದರೆ ಇಂದು ಉದ್ಯೋಗ ಎಂಬುದು ಮಧ್ಯಮ ವರ್ಗದ ಜನರ ಜೀವನ ಶೈಲಿಯನ್ನು, ವಿಧಾನವನ್ನು ಬಹಳ ಗಮನಾರ್ಹವಾಗಿ ಬದಲಿಸಿದ ಸಂಗತಿಯಾಗಿದೆ. ಇದಕ್ಕೆ ಕಾರಣವೆಂದರೆ ಮುಂದುವರೆದ ತಂತ್ರಜ್ಞಾನ, ಉತ್ತಮವಾದಂತಹ ಆರ್ಥಿಕ ಪ್ರಗತಿ ಹಾಗೂ ಯೋಗ್ಯ ಸಂಪನ್ಮೂಲದ ಲಭ್ಯತೆ ಎಂದರೆ ತಪ್ಪಾಗಲಾರದು. ಹೀಗೆ ಒಂದು ಸಾಮಾಜಿಕ ಸ್ಥರವನ್ನೆ ಬದಲಾವಣೆ ಮಾಡಿದ ಮಹತ್ವದ ಅಂಶ ಇಂದು ಬುಡಸಮೇತ ಅಲುಗಾಡಿಸುತ್ತಿದೆ ಎಂದರೆ ಅದು ಮಹತ್ವದ ಅಂಶವೇ ಸರಿ. ಎಂಬತ್ತರ ದಶಕದ ನಂತರ ಸ್ಪರ್ಧೆಗೆ ತನ್ನನ್ನು ತಾನು ತೆರದುಕೊಂಡ ವಿಶ್ವದ ಉದ್ಯಮ ಅನೇಕ ಕ್ರಾಂತಿಗಳಿಗೆ ಕಾರಣವಾಯಿತು. ಇದರ ಸಲುವಾಗಿ ಮೂರಂಕೆಯಲ್ಲಿದ್ದ ಸಂಬಳ ಆರು ಅಂಕೆಗಳ ವರೆಗೂ ಏರಿಕೆಯಾಯ್ತು, ಮೂರು ಕಾಸಿಗೆ ಬಾಳುತ್ತಿದ್ದವರನ್ನೆಲ್ಲಾ ಆರು ಕಾಸಿಗೆ ನೇಮಕ ಮಾಡಿಕೊಂಡಿದ್ದು ಕಾರ್ಪೊರೇಟ್ ಕಂಪೆನಿಗಳು ಅದೇ ಕಾರ್ಪೊರೇಟ್ ಕಂಪೆನಿಗಳು ದುಡಿದ ಆರು ಕಾಸನ್ನು ಖರ್ಚು ಮಾಡುವುದು ಹೇಗೆ ಎಂಬ ವಿಧಾನಗಳನ್ನು ಸ್ಪಷ್ಟವಾಗಿ ಹೇಳಿಕೊಟ್ಟವು ಇದೆಲ್ಲದರ ನಂತರ ಹೇಗೋ ಒಂದು ಹಂತ ತಲುಪಿ ಇದೇ ಉತ್ತಮ ಜೀವನ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದ ಜನ ತತ್ತರಿಸುವಂತಹ ಕಾಲ ಇದಾಗಿದೆ.
ಕೈತುಂಬಾ ಐದರಿಂದ ಆರು ಅಂಕೆಗಳ ಸಂಬಳ ಪಡೆಯುತ್ತಿದ್ದ ಯುವ ಜನತೆ ಎಗ್ಗು ಸಿಗ್ಗಿಲ್ಲದಂತೆ ಖರ್ಚು ಮಾಡಿ ಜೀವನದ ಅನುಭವ ಹೊಂದುತ್ತಿದ್ದರು. ಕಾರು, ಫ್ಲಾಟುಗಳೆಂಬ ನಕ್ಷತ್ರಕ್ಕೆ ಕೈಚಾಚಲು ಸಾಲವೆಂಬ ಏಣಿಯನ್ನು ಹತ್ತಿ ಎತ್ತರಕ್ಕೆ ಏರುತ್ತಿದ್ದವರಿಗೆ ಈಗ ಸಂಕಷ್ಟ ಬಂದೊದಗಿದೆ. ಸಂಬಳವನ್ನೇ ಆಧರಿಸಿ ಅನೇಕ ಕಮಿಟ್ ಮೆಂಟ್ಗಳನ್ನು ಮಾಡಿಕೊಂಡಿದ್ದ ಜನರನ್ನ ಏಕಾ ಏಕಿ ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂಬ ಮೆಸೇಜುಗಳು ಬರ ಸಿಡಿಲಿನಂತ ಬಂದಪ್ಪಳಿಸುತ್ತಿದ್ದರೆ ಮಾಯಾನಗರಿಗಳಲ್ಲಿ ಆಫೀಸು ಎಂಬ ಸ್ವರ್ಗದಲ್ಲಿ ದುಡಿಯುತ್ತಿದ್ದ ಜನತೆ ಗ್ರಾಮೀಣ ಭಾಗದ ರೈತರಂತೆ ಆತ್ಮಹತ್ಯಾ ಸರಣಿಗೆ ಕೊರಳೊಡ್ಡುವ ದಿವಸಗಳು ಹತ್ತಿರವಾಗುತ್ತಿವೆಯೇನೋ ಎಂಬಂತೆ ಬಾಸವಾಗುತ್ತಿವೆ.

1 comment:

ಜಿ.ಎಸ್.ಬಿ. ಅಗ್ನಿಹೋತ್ರಿ said...

ಹೌದು... ಮಹಾ ಮಹಾಮಾರಿ.
ನಿಮ್ಮ ಲೇಖನ ಓದಿದ ಮೇಲೆ ನನ್ನ ಸ್ನೇಹಿತನ ನೆನಪಾಯ್ತು. ಕೆಲಸ ಕಳೆದುಕೊಂಡು ಈಗ ಊರು ಸೇರಿದ್ದಾನೆ. ಆತ ಅನುಭವಿಸದ ನೋವು ನಿಜಕ್ಕೂ ನನ್ನನ್ನ ಮನ ಕಂಪಿಸಿದೆ. ಈಗ ಊರಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾನೆ.