Sunday, August 2, 2009

ಸಮಕಾಲೀನ ಶಿಕ್ಷಣದ ತಲ್ಲಣಗಳು

ದೇಶದ ಶಿಕ್ಷಣ ರಂಗದಲ್ಲಿ ಮತ್ತೊಂದು ಮಹತ್ತರವಾದ ಕ್ರಾಂತಿ ಮಾಡಲು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ತುದಿಗಾಲಲ್ಲಿ ನಿಂತಿದ್ದಾರೆ. ಈ ಕಾರ್ಯಕ್ಕಾಗಿ ತನ್ನ ಸಚಿವಾಲಯವನ್ನು ಸಜ್ಜುಗೊಳಿಸಿಕೊಂಡು ಕಾಯುತ್ತಿದ್ದಾರೆ. ಈ ಕುರಿತಂತೆ ತಿಂಗಳ ಹಿಂದೆ ಪತ್ರಿಕಾ ಗೋಷ್ಠಿ ನಡೆಸಿ ತಮ್ಮ ಕ್ರಾಂತಿಕಾರಕ ವಿಚಾರಗಳನ್ನು ಹಂಚಿಕೊಂಡ ನಂತರ ದೇಶದಾದ್ಯಂತ ಪರ ವಿರುದ್ಧ ಅಭಿಪ್ರಾಯಗಳು ಎಣೆ ಇಲ್ಲದಂತೆ ಪ್ರಕಟಗೊಂಡಿದ್ದವು ಆನಂತರ ತಣ್ಣಗಾಗಿದ್ದ ಸಚಿವರು ಪುನಹ ಕಳೆದ ಶನಿವಾರ ತಮ್ಮ ಈ ಹಿಂದಿನ ನಿಲುವನ್ನು ಪುನಹ ಸ್ಪಷ್ಟಪಡಿಸಿದ್ದಾರೆ. ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶದಲ್ಲಿರುವ ಎಲ್ಲಾ ರಾಜ್ಯಗಳು ಸಹ ಏಕರೂಪ ಪರಿಕ್ಷಾ ಪದ್ದತಿ ಜಾರಿ ಮಾಡಲು ಆದೇಶಿಸಿದ್ದಾರೆ. ಆದೇಶ ಪಾಲಿಸದೇ ಇದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬ ಗಡುವನ್ನು ಸಹ ಅವರು ನೀಡಿದ್ದಾರೆ. ಸಚಿವರ ನೂತನ ಕಾರ್ಯಕ್ರಮವನ್ನು ವಿವಿಧ ಮಗ್ಗುಲುಗಳಿಂದ ನೋಡಿದರೆ ಎಲ್ಲಾ ಪದ್ಧತಿಗಳಲ್ಲಿ ಇರುವಂತೆ ನೂತನ ಶೈಕ್ಷಣಿಕ ಪದ್ಧತಿಯಲ್ಲಿಯೂ ವಿವಿಧ ಲೋಪ ದೋಷಗಳಿವೆ ಜೊತೆ ಜೊತೆಗೆ ಅನುಕೂಲಗಳು ಇವೆ. ಆದರೆ ಜಾರಿಗೆ ಬರಲಿರುವ ಪದ್ಧತಿ ಕೇವಲ ಸರ್ಕಾರ ತನ್ನ ಹುಳುಕುಗಳನ್ನು ಮುಚ್ಚಿಕೊಂಡು ಜಗತ್ತಿನ ಮುಂದೆ ದೊಡ್ಡ ಮನುಷ್ಯನಂತೆ ಪೋಸು ಕೊಡಲಷ್ಟೇ ಸೀಮಿತವಾಗಬಾರದು ಎಂಬ ತಲ್ಲಣ ಪ್ರಜ್ಞಾವಂತರನ್ನು ಕಾಡುತ್ತಿದೆ.
ಸ್ವಾತಂತ್ರಾನಂತರ ಸಂವಿಧಾನದಲ್ಲಿ ಈ ದೇಶದ ಪ್ರತಿಯೊಬ್ಬರಿಗೂ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ನೀಡುವುದಾಗಿ ಘೋಷಿಸಿದ ಪರಿಣಾಮ ಈ ಮೌಲ್ಯಗಳನ್ನು ಜಾರಿಗೆ ತರುವ ದೃಷ್ಟಿಯಿಂದ ಸರ್ಕಾರ ಶಿಕ್ಷಣಕ್ಕೆ ಮಾರುಹೋಯಿತು. ದೇಶದ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡಲೇ ಬೇಕಾದ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ ಶಿಕ್ಷಣಕ್ಕೆ ವಿವಿಧ ರೀತಿಯ ಪ್ರೋತ್ಸಾಹಗಳನ್ನು ನೀಡಿತು, ಇದೇ ವೇಳೆ ಶಿಕ್ಷಣದ ಖಾಸಗೀಕರಣವನ್ನು ಮಾಡಿದ ಸರ್ಕಾರ ಆನಂತರ ಖಾಸಗೀ ಶಿಕ್ಷಣ ಸಂಸ್ಥೆಗಳ ಉರುಳಿಗೆ ತನಗೆ ತಾನೇ ಸಿಕ್ಕಿ ಪೇಚಾಡುವ ಸ್ಥಿತಿ ತಂದುಕೊಂಡಿದಂತೂ ಸರ್ಕಾರದ ದುರಂತಗಳಲ್ಲಿ ಒಂದು. ರಾಜ್ಯ ಸರ್ಕಾರ ಇಂದಿಗೂ ಸಹ ವೃತ್ತಿ ಶಿಕ್ಷಣದ ಸಮಸ್ಯೆಗೆ ಸಂಬಂಧಿಸಿದಂತೆ ಹಾಗೂ ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಪ್ರತಿಸಾರಿಯೂ ಮುಜುಗರ ಅನುಭವಿಸುತ್ತಿರುವುದು ತಾಜಾ ಉದಾಹರಣೆಯಾಗಿದೆ. ಸರ್ಕಾರಗಳು ಶಿಕ್ಷಣಕ್ಕೆ ಸಬಂಧಿಸಿದಂತೆ ಯಾವುದೇ ಸ್ಪಷ್ಟ ನೀತಿ ನಿಯಮಗಳನ್ನು ಹೊಂದಿಲ್ಲ ಹಾಗೂ ಒಂದು ವೇಳೆ ಹೊಂದಿದ್ದರೂ ಅದು ಕಾರ್ಯರೂಪಕ್ಕೆ ಬರುವಲ್ಲಿ ವಿಫಲವಾಗಿದೆ ಎಂಬುದು ಈ ಉದಾಹರಣೆಗಳಿಂದ ಧೃಡವಾಗಿದೆ.
ಅದೇನೇ ಇರಲಿ ಶಿಕ್ಷಣದ ಸಾರ್ವತ್ರಿಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಆತುರಾತುರವಾಗಿ ಕೈಗೊಂಡ ನಿರ್ಧಾರಗಳು ಸರ್ಕಾರ ತನ್ನ ಮರ್ಯಾದೆಯನ್ನು ಉಳಿಸಿಕೊಳ್ಳಲು ನೆರವಾಗಿದೆಯೋ ವಿನಹ: ಇದರಿಂದ ಶಿಕ್ಷಣ ರಂಗದ ಗುಣಮಟ್ಟ ಸುಧಾರಿಸಲಿಲ್ಲ. ಇದಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅಪರಾದಗಳೇ ಪ್ರತ್ಯಕ್ಷ ಸಾಕ್ಷಿಯಾಗಿವೆ. ಶಿಕ್ಷಣದ ಹೆಚ್ಚಳದೊಂದಿಗೆ ಪೋಲೀಸ್ ಠಾಣೆಗಳು, ನ್ಯಾಯಾಲಯಗಳು ಅಪಘಾತಗಳು ಹಾಗೂ ಅಪರಾದಗಳು ಗಣನೀಯವಾಗಿ ಕಡಿಮೆ ಆಗಬೇಕಿತ್ತು. ಆದರೆ ಅದಕ್ಕೆ ತದ್ವಿರುದ್ದವಾದ ಬೆಳವಣಿಗೆ ಸಂಭವಿಸುತ್ತಿರುವುದು ಶಿಕ್ಷಣದ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಶಿಕ್ಷಿತರ ಹೆಚ್ಚಳದೊಂದಿಗೆ ಅಪರಾಧಗಳು, ಸಾಮಾಜಿಕ ಅನಾಹುತಗಳು ಸಮಾಜದಲ್ಲಿ ಹೆಚ್ಚಾಗುತ್ತಲೆ ಸಾಗಿವೆ ಎಂದರೆ ಅಂತಹ ಶಿಕ್ಷಣದ ಅವಶ್ಯಕತೆಯಾದರೂ ಏನು?
ಆರ್ಥಿಕ ಅಭಿವೃದ್ಧಿಯ ಮಾನದಂಡವಾಗಿ ಮಾನವ ಆಭಿವೃದ್ದಿ ಸೂಚ್ಯಾಂಕವನ್ನು ಬಳಸಲು ಆರಂಭಿಸದ ಮೇಲೆ ಅಭಿವೃದ್ದಿ ಎಂಬುದು ಕೇವಲ ಯಂತ್ರ, ಕಟ್ಟಡ, ರಸ್ತೆ, ಸೂರಿಗಷ್ಟೇ ಸೀಮಿತಗೊಂಡಿಲ್ಲ ಅದಕ್ಕೆ ಬದಲಾಗಿ ಸಾಕ್ಷರತೆ, ಆರೋಗ್ಯ, ಉದ್ಯೋಗದಂಹ ವಿಚಾರಗಳನ್ನು ಒಳಗೊಂಡಿದ್ದು ಇವುಗಳ ಗರಿಷ್ಟತೆ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳಬೇಕೆಂದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿರುವ ವಿಷಯಗಳನ್ನು ಉನ್ನತೀಕರಿಸಬೇಕಿದೆ ಇವುಗಳೆಲ್ಲವೂ ಅಂಕಿ ಸಂಖ್ಯೆಗಳಲ್ಲಿಯೇ ನಿರ್ಧಾರವಾಗುತ್ತಿರುವುದರಿಂದ ಕೇವಲ ಅಂಕಿಸಂಖ್ಯೆನ್ನು ಉನ್ನತೀಕರಿಸಲಷ್ಟೇ ಸರ್ಕಾರ ಲಕ್ಷ್ಯ ನೀಡುತ್ತಿರುವುದು ಹಲವು ತಲೆಮಾರುಗಳಿಗೆ ಮಾಡಿದ ದ್ರೋಹವಲ್ಲದೆ ಮತ್ತೇನೂ ಅಲ್ಲ.
ಸರ್ಕಾರಿ, ಖಾಸಗಿ ಅಥವಾ ಪಟ್ಟಣ ಹಾಗೂ ಗ್ರಾಮೀಣ ಶಿಕ್ಷಣಗಳನ್ನು ತೌಲನಿಕವಾಗಿ ಗಮನಿಸಿದಾಗ ಅವುಗಳ ನಡುವೆ ಇರುವ ಅಂತರ ಅಗಾಧವಾದುದೇ ಅಗಿದೆ. ಈ ಜಟಿಲತೆಯಲ್ಲಿ ಸಿಲುಕಿರುವ ಲಕ್ಷಾಂತರ ವಿದ್ಯಾರ್ಥಿಗಳು ಅದರಲ್ಲಿಯೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಆರಕ್ಕೆರದ ಮೂರಕ್ಕಿಳಿಯದ ಸ್ಥಿತಿಯಲ್ಲಿದ್ದು ಯಾತನೆ ಅನುಭವಿಸುತ್ತಿದ್ದಾರೆ. ಪಟ್ಟಣ ಪ್ರದೇಶದ ಶಾಲೆಗಳಲ್ಲಿರುವ ಸೌಕರ್ಯ ಆ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಎತ್ತರಿಸಿದ್ದರೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಸರ್ಕಾರ ನೀಡಿರುವ ಸೌಲಭ್ಯ ವಿದ್ಯಾರ್ಥಿಗಳಿಗೆ ತಲುಪುವುದಕಿಂತಲೂ ಜನಪ್ರಿಯತೆಗಷ್ಟೇ ಸೀಮಿತವಾಗಿರುವುದು ಮತ್ತೊಂದು ದುರಂತ. ಈ ನಡುವೆ ಸರ್ಕಾರ ಶೈಕ್ಷಣಿಕ ವಲಯದಲ್ಲಿ ವಿವಿಧ ಬಗೆಯ ಮಾರ್ಪಾಡುಗಳನ್ನು ಮಾಡಿದ್ದರೂ ಅವುಗಳೆಲ್ಲವೂ ಸರ್ಕಾರ ಶೈಕ್ಷಣಿಕ ಸಾರ್ವತ್ರೀಕರಣವನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ನೆರವಾಗಿವೆ ಮತ್ತು ನೆರವಾಗುತ್ತಿವೆ.
ಈಗ ಸರ್ಕಾರ ಪ್ರಾರ್ಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ಹಂತ ತಲುಪಿಯಾಗಿದೆ. ಮುಂದಿನ ಸವಾಲಿರುವುದು ಉನ್ನತ ಶಿಕ್ಷಣದ್ದು, ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆಯನ್ನು ಆದಷ್ಟು ಬೇಗ ಹೆಚ್ಚಿಸಿ ಅಲ್ಲಿಯೂ ನಾವು ಸಾಧನೆಗೈದಿದ್ದೇವೆ ಎಂಬುದನ್ನು ಸರ್ಕಾರ ವಿಶ್ವ ಸಂಸ್ಥೆಯ ಮಟ್ಟದಲ್ಲಿ ಸಾಭೀತು ಮಾಡಿ ಮತ್ತಷ್ಟು ಷಹಬ್ಬಾಸ್ ಗಿರಿ ಸಂಪಾದಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವರು ಜಾಗೃತರಾಗಿದ್ಧಾರೆ. ಭಾರತ 2020ರ ವೇಳೆಗೆ ವಿಶ್ವದ ಸೂಪರ್ ಪವರ್ ದೇಶಗಳಲ್ಲೊಂದಾಗಬೇಕು ಎಂದರೆ ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಮತ್ತಷ್ಟು ಹೆಚ್ಚುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶಿಕ್ಷಣ ಸುಧಾರಣೆಗೆ ಮುಂದಾಗಿದೆ. ದೇಶದ ಹೆಚ್ಚು ಜನರಿಗೆ ಉನ್ನತ ಶಿಕ್ಷನವನ್ನು ತಲುಪಿಸುವುದು ಸ್ವಾಗತಾರ್ಹ ಬೆಳೆವಣಿಗೆಯೇ ಆದರೆ ಅದು ಸರ್ಕಾರದ ಪ್ರತಿಷ್ಟೆಗಷ್ಟೇ ಸೀಮಿತವಾಗದೆ ಜನರ, ಸಮಾಜದ ಒಳಿತಿಗೆ ಅನುಕೂಲಕರವಾದರೆ ಮಾತ್ರ ಸರ್ಕಾರದ ಆಶಯಕ್ಕೆ ಬೆಲೆ ಇರುತ್ತದೆ.