Friday, August 22, 2008

ಇವರೂ ರೈತರೆ ಇತ್ತಲೂ ನೋಡಿ


ವಿ.ಮಧುಸೂದನ್

ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೂರನೇ ದಿನದತ್ತ ಮುನ್ನಡೆಯುತ್ತಿದೆ. ಅಧಿಕಾರಕ್ಕೆ ಬಂದ ದಿವಸದಿಂದಲೂ ತಾವು ರೈತಪರ ರಾಜಕಾರಣಿ ಎಂಬುದನ್ನು ತೋರಿಸಿಕೊಳ್ಳಲು ಪರಿಪರಿಯಾಗಿ ಮಾತನಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದುವರೆಗೆ ಕೇವಲ ಮಾತನಾಡಿದ್ದೇ ಆಯಿತು. ತಾವು ಚುನಾವಣೆಯ ಪೂರ್ವದಲ್ಲಿ ರೈತರಿಗೆ ಅನುಕೂಲವಾಗುವಂತಹ ಕೆಲವು ಅಂಶಗಳನ್ನು ಏನು ಘೋಷಿಸಿದ್ದರೋ ಅದಷ್ಟೇ ಪ್ರಸ್ತುತ ರೈತರ ಅಗತ್ಯ ಅದನ್ನು ಹೊರತು ಪಡಿಸಿ ರಾಜ್ಯದ ರೈತರಿಗೆ ಯಾವುದೇ ಸಮಸ್ಯೆಗಳೂ ಇಲ್ಲ ಎಂದು ಮುಖ್ಯಮಂತ್ರಿಗಳು ಭಾವಿಸಿದಂತಿದೆ. ಆರಂಭ ಶೂರತ್ವ ಎಂಬಂತೆ ಅಧಿಕಾಕ್ಕೆ ಏರಿದ ಮೊದಲ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳನ್ನು ಸುತ್ತಿ ಅಲ್ಲೆಲ್ಲ ರೈತರನ್ನೂ ಒಳಗೊಂಡಂತೆ ವಿವಿಧ ಸಭೆ, ಸಂವಾದಗಳನ್ನು ಮಾಡಿದ ಯಡಿಯೂರಪ್ಪ ಆಪರೇಷನ್ ಕಮಲಕ್ಕೆ ಕೈ ಹಾಕಿದ ಮೇಲೆ ಅವುಗಳನ್ನೆಲ್ಲಾ ಮರೆತಂತಿದೆ. ರೈತರನ್ನು ಪುನಹ ನೆನಪು ಮಾಡಿಕೊಳ್ಳುವಂತಹ ವಿದ್ಯಾಮಾನಗಳು ರಾಜ್ಯದಲ್ಲಿ ನಡೆಯುತ್ತಿದ್ದರೂ ಸಹ ಅವರು ಯಾಕೋ ಅತ್ತ ಮನಸ್ಸು ಮಾಡುತ್ತಿಲ್ಲ.


ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಆಲೋಗಡ್ಡೆ ಬೆಳೆ ಈ ಸಾಲಿನಲ್ಲಿ ಹೇಗೆ ನೆಲಕಚ್ಚಿದೆ ಎಂದರೆ ಅದನ್ನು ಹಾಸನ ಜಿಲ್ಲೆಗೆ ಹೋಗಿ ನೋಡಿದರೆ ಅದರ ಹಾನಿಯ ಪ್ರಮಾಣ ಏನು ಎಂಬುದು ಗೊತ್ತಾಗುತ್ತದೆ. ಹಾಸನದ ರೈತರಿಗೆ ಹಣ ಹರಿದು ಬರುವುದೇ ಆಲೋಗಡ್ಡೆಯಿಂದ ರಾಜ್ಯದಲ್ಲಿಯೇ ಅಪಾರ ಪ್ರಮಾಣದ ಆಲೋಗಡ್ಡೆಯನ್ನು ಇಲ್ಲಿ ಬೆಳೆಯಲಾಗುತ್ತದೆ. ವಾಣಿಜ್ಯ ನಗರಿ ಮುಂಬೈನ ಆಲೋಗಡ್ಡೆ ಬೇಡಿಕೆ ಈಡೇರುವುದೇ ಹಾಸನದಲ್ಲಿ ಬೆಳೆಯುವ ಆಲೋಗಡ್ಡೆಯಿಂದ . ಈ ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು ೪೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು ೭೧ ಸಾವಿರಕ್ಕೂ ಅಧಿಕ ಕೃಷಿಕರು ಆಲೂಗಡ್ಡೆ ಬೆಳೆಯುತ್ತಾರೆ ಎಂಬ ಅಂಶವನ್ನು ಕೃಷಿ ಇಲಾಖೆಯಲ್ಲಿ ದಾಖಲಿಸಲಾಗಿದೆ. ಇಲ್ಲಿ ರಾಷ್ಟ್ರದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಆಲೂಗಡ್ಡೆಯನ್ನು ಬೆಳೆಯಲಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಆಲೂಗಡ್ಡೆ ಬೆಳೆಯುತ್ತಾರಾದರೂ ಈಚಿನ ದಿವಸಗಳಲ್ಲಿ ಬಹಳ ಜನಪ್ರೀಯವಾಗಿರುವ ಕುರ್ಕುರೆ, ಲೇಸ್, ಬಿಂಗೋ, ಪೆಪ್ಸಿಯಂತಹ ಬಹುರಾಷ್ಟ್ರೀಯ ಕಂಪೆನಿಗಳು ಉತ್ಪಾದಿಸುತ್ತಿರುವ ಅಲೂಗಡ್ಡೆ ಆಧಾರಿತ ಆಹಾರ ಪದಾರ್ಥಗಳಿಗೆ ಬಹುತೇಕ ಹಾಸನ ಜಿಲ್ಲೆಯಲ್ಲಿ ಬೆಳೆಯುವ ಆಲೂಗಡ್ಡೆಯೇ ಹೆಚ್ಚು ಪ್ರಮಾದಲ್ಲಿ ಸರಬರಾಜಾಗುತ್ತಿದೆ. ಹಾಸನ ಜಿಲ್ಲೆಯ ಅಲೂಗಡ್ಡೆ ಇಲ್ಲಿ ನಡೆಸುವ ವಾರ್ಷಿಕ ವಹಿವಾಟು ಸುಮಾರು ೩೦೦ ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿದೆ. ಇದುವರೆಗೆ ಕೇವಲ ಬೆಲೆ ಸಮಸ್ಯೆ ಎದುರಿಸುತ್ತಿದ್ದ ಆಲೂ ಬೆಳೆ ಈಗ ರೋಗ ಬಾಧೆಗೆ ಒಳಗಾಗಿದೆ. ಅಂಗಮಾರಿ ಹೆಸರಿನ ಈ ರೋಗ ಬಿಳಿಯ ಹೂವ್ವಿನೊಂದಿಗೆ ನಳನಳಿಸಬೇಕಿದ್ದ ಆಲೋಗಡ್ಡೆಯನ್ನು ಸಾಲು ಸಾಲಾಗಿ ಮಲಗಿಸಿ ಬಿಟ್ಟಿದೆ. ಜಿಲ್ಲೆಯ ಚನ್ನರಾಯಪಟ್ಟಣ, ಹೊಳೇನರಸೀಪುರ, ಅರಕಲಗೂಡು, ಹಾಸನ, ಆಲೂರು ಹಾಗೂ ಬೇಲೂರು ತಾಲ್ಲೊಕುಗಳಲ್ಲಿ ಹೆಚ್ಚು ಪ್ರಮಾಣದ ಆಲೂ ಬೆಳೆಯಲಾಗುತ್ತಿದ್ದು ಈ ತಾಲ್ಲೂಕುಗಳಲ್ಲಿ ಎಲ್ಲಿ ನೋಡಿದರೂ ರೋಗದಿಂದ ಕಪ್ಪು ಹಿಡಿದಿರುವ ಆಲೂಗಡ್ಡೆ ಗಿಡಗಳು ಹಾಸಿ ಹೊದ್ದಂತೆ ಮಲಗಿಬಿಟ್ಟಿದೆ. ಆಲ್ಲೂಗಡ್ಡೆ ಬೆಳೆಯ ಬಗ್ಗೆ ಅತೀವವಾದ ವಿಶ್ವಾಸ ಇರಿಸಿಕೊಂಡಿರುವ ಈ ಜಿಲ್ಲೆಯ ರೈತರು ಸಾಲಾ ಸೂಲದ ಜೊತೆಗೆ ತಮ್ಮ ಪತ್ನಿಯರ ಚಿನ್ನಾಭರಣಗಳನ್ನು ಮಾರಿ, ಅಡವಿಟ್ಟು ಇಲ್ಲಿ ಆಲೂಗಡ್ಡೆ ಭಿತ್ತನೆ ಮಾಡುತ್ತಾರೆ. ಆದರೆ ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇಖಡ ೯೨ % ರಷ್ಟು ಆಲೂಗಡ್ಡೆ ಬೆಳೆ ಅನಾರೋಗ್ಯಕ್ಕೆ ಒಳಗಾಗಿದ್ದು, ಈಗ ಅವರೆಲ್ಲರೂ ಸಂಕಷ್ಟದಲ್ಲಿದ್ದು ಅವರ ಗೋಳನ್ನು ಕೇಳುವವರೇ ಇಲ್ಲ.


ಪರಿಸ್ಥಿತಿ ಹೀಗಿರುವಾಗಲೇ ಯಡಿಯೂರಪ್ಪ ಹಾಸನ ಜಿಲ್ಲೆಗೆ ಭೇಟಿ ನೀಡಿದ್ದರು ಆಗ ಅವರನ್ನು ಭೇಟಿಯಾಗಿದ್ದ ರೈತರ ಅಹವಾಲು ಏನು ಎಂಬುದನ್ನು ಪೂರ್ಣವಾಗಿ ಕೇಳುವಂತಹ ಸಂಯಮವನ್ನು ಸಹ ಮುಖ್ಯಮಂತ್ರಿಗಳು ತೋರಲಿಲ್ಲ. ನೈಸರ್ಗಿಕ ರೋಗಕ್ಕೆ ಕೃಷಿ ಅಧಿಕಾರಿಗಳೇ ಕಾರಣ ಎಂದು ಹರಿಹಾಯ್ದ ಅವರು ಕೃಷಿ ಇಲಾಖೆ ಅಧಿಕಾರಿಗಳು ಕತ್ತೆ ಕಾಯುತ್ತಿದ್ದಾರೆಯೇ ಎಂದು ತನ್ನ ಉದ್ಧಟತನವನ್ನು ತೋರಿ ತಿರುಗಿಯೂ ನೋಡದೆ ಬೆಂಗಳೂರಿಗೆ ಹಾರಿ ಹೋದರು. ರಾಜ್ಯದ ಮುಖ್ಯಮಂತ್ರಿಯಾಗಿ ಒಂದು ಜಿಲ್ಲೆಯ ರೈತರ ಸಂಕಷ್ಟಕ್ಕೆ ಭಾಗಿಯಾಗದ ಇವರು ಇನ್ನು ರಾಜ್ಯದ ರೈತರ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೋ ಎಂಬುದನ್ನು ಊಹಿಸಿಕೊಳ್ಳಲು ಇದು ಸಕಾಲವಾಗಿದೆ. ರಾಜಕೀಯ ದ್ವೇಶಕ್ಕೆ ಒಂದು ಜಿಲ್ಲೆಯ ಕೃಷಿಕರನ್ನು ಬಲಿ ಮಾಡುವುದು, ಅವರನ್ನು ನಿರ್ಲಕ್ಷಿಸುವುದು ಸರಿಯಾದ ಕ್ರಮವಲ್ಲ ರಾಜಕೀಯ ಗೊಂದಲಗಳು ಏನೇ ಇರಬಹುದು ಆದರೆ ಇಡೀ ಜಿಲ್ಲೆಯಲ್ಲಿ ಸತತ ಆರು ತಿಂಗಳುಗಲ ಕಾಲ ಸಾವಿರಾರು ಜನರಿಗೆ ಉದ್ಯೋಗ ನೀಡುವ ಒಂದು ಕೃಷಿ ಉತ್ಪನ್ನದ ಸಮಸ್ಯೆಯನ್ನು ನಿರ್ಲಕ್ಷಿಸುವುದು ಅವಿವೇಕಿತನದ ಪರಮಾವಧಿ ಅಲ್ಲದೇ ಮತ್ತೇನೂ ಅಲ್ಲ.
ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆದರೂ ಅದು ಒಂದು ಅಲ್ಪಾವಧಿಯ ಬೆಳೆ ಕೇವಲ ಎರಡೇ ಎರಡು ತಿಂಗಳಲ್ಲಿ ಮುಗಿದು ಹೋಗುತ್ತದೆ. ಇಂತದ್ದೆ ಅನೇಕ ಬೆಳೆಯನ್ನು ಇಲ್ಲಿ ಬೆಳೆಯಲಾಗುತ್ತಿದೆ ಹಾಗಾಗಿ ಸಮಸ್ಯೆ ಇಲ್ಲ ಎಂದು ಅನೇಕರು ವಾದಿಸುತ್ತಾರೆ. ಆದರೆ ಆಲೂಗಡ್ಡೆ ಅಲ್ಪಾವಧಿ ಬೆಳೆಯಾದರೂ ಸಹ ಇದರ ಮೇಲೆ ಅಪಾರ ಪ್ರಮಾಣದ ಬಂಡವಾಳ ಹೋಡಿಕೆಯಾಗುತ್ತದೆ. ಆಲೂಗಡ್ಡೆಯ ಸಾಗುವಳಿಗೆ ಕನಿಷ್ಟ ಒಂದು ಎಕರೆಗೆ ೨೫ ಸಾವಿರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಇದರ ಜೊತೆಗೆ ಮುಂಗಾರು ಹಂಗಾಮಿನಲ್ಲಿ ಏಪ್ರಿಲ್-ಮೇ ತಿಂಗಳಿನಿಂದ ಡಿಸೆಂಬರ್ವರೆಗೆ ಸರಿಸುಮಾರು ಎರಡು ಲಕ್ಷ ಜನರಿಗೆ ಈ ಬೆಳೆ ಉದ್ಯೋಗ ದೊರಕಿಸಿಕೊಡುತ್ತದೆ. ಆಲೂಗಡ್ಡೆ ಭಿತ್ತನೆಯಿಂದ ಹಿಡಿದು, ಅದರ ಸಾಗುವಳಿ, ಕೊಯ್ಲು, ವಿಂಗಡಣೆ, ಸಾಗಣೆ, ಚೀಲ ಮಾಡುವಿಕೆ ಹಾಗೂ ಸಂಸ್ಕರಣೆಯ ಮಾಡಲು ಈ ಪ್ರಮಾಣದ ಜನ ದುಡಿಯುತ್ತಿದ್ದಾರೆ. ಅದರ ಜೊತೆಗೆ ಆಲೂಗಡ್ಡೆ ಸಾಗಣೆ ಒಂದು ಪ್ರಮುಖ ವಾಣಿಜ್ಯ ವ್ಯವಹಾರವಾಗಿದ್ದು, ಸಾವಿರಾರು ಲಾರಿಗಳು ಅದರ ಸಾಗಣೆ ಕೆಲಸವನ್ನು ಮಾಡುತ್ತವೆ. ಆದರೆ ಈ ಸಾರಿ ಇಂತಹ ಅಪಾರ ಪ್ರಮಾಣದ ಉದ್ಯೋಗ ಸೃಷ್ಟಿಯ ಒಂದು ಕೃಷಿಯಾಗಿರುವ ಆಲೂಗಡ್ಡೆ ಈ ಸಾರಿ ಭಾದೆಗೊಳಗಾಗಿದ್ದು ಲಕ್ಷಾಂತರ ಜನ ನಿರುದ್ಯೋಗಿಗಳಾಗುವ ಸಾಧ್ಯತೆ ಜಿಲ್ಲೆಯಲ್ಲಿ ಸೃಷ್ಪಿಯಾಗಿದೆ.


ಹಾಸನ ಜಿಲ್ಲೆಯ ಆಲೂಗಡ್ಡೆ ಬೆಳೆಗೆ ಬಂದೆರಗಿರುವ ಅಂಗಮಾರಿ ರೋಗವನ್ನು ತಡೆಯುವಲ್ಲಿ ಈಗಾಗಲೇ ವಿಫಲರಾಗಿದ್ದೇವೆ. ಯಾವುದೇ ಕೃಷಿ ಸಮಸ್ಯೆಗಳು ನಿಧಾನಗತಿಯಲ್ಲಿ ತಮ್ಮ ಪರಿಣಾಮಗಳನ್ನು ಬೀರುತ್ತವೆ ಹಾಗೂ ಅವು ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಕೋಟ್ಯಾಂತರ ರೂಪಾಯಿಯನ್ನು ಭೂಮಿಗೆ ಸುರಿದು ಈಗ ವಿಭ್ರಾಂತರಾಗಿ ಗದ್ದದ ಮೇಲೆ ಕೈಹೊತ್ತು ಕುಳಿತಿರುವ ಹಾಸನ ಜಿಲ್ಲೆಯ ರೈತರನ್ನು ರಾಜ್ಯ ಸರ್ಕಾರ ಹೀಗೆ ಕಡೆಗಣಿಸುವುದು ಮತ್ತು ಸಂಕಷ್ಟದಲ್ಲಿರುವ ರೈತರ ಸಹನೆ ಪರೀಕ್ಷೆ ಮಾಡುವುದು ಯಾರಿಗೂ ಸಾಧುವಲ್ಲ.

Wednesday, August 20, 2008

ತುಂಗಾ ತೀರದಲ್ಲೊಂದು ದಿನ




ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ ತುಂಗಾ ನದಿಯ ಬಗ್ಗೆ ಚಿಕ್ಕಂದಿನಿಂದಲೂ ಬಹಳವಾಗಿಯೇ ಕೇಳಿದ್ದೆ ಹಾಗೂ ಓದಿದ್ದೆ. ಆದರೆ ಅದನ್ನು ಕಣ್ಣಾರೆ ಕಾಣುವ ಭಾಗ್ಯ ಸಿಕ್ಕಿದ್ದು ಚಿಕ್ಕಮಗಳೂರಿನ ಮಹೇಶಣ್ಣ ನವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ. ಏಪ್ರಿಲ್ ಒಂಬತ್ತು ಶ್ರೀ ಹಾಗೂ ಶ್ರೀಮತಿ ರೂಪಾ ಮಹೇಶ್ ಅವರ ಏಕೈಕ ಮಗಳು ಸನ್ಮಿತಾಳ ಹುಟ್ಟಿದ ದಿನ. ಅಂದು ನನ್ನ ಹುಟ್ಟಿದ ದಿನವೂ ಸಹ ಹೌದು. ಇದೇ ಮೊದಲ ಬಾರಿಗೆ ನನ್ನ ಹುಟ್ಟು ಹಬ್ಬದ ದಿನ ನಾನು ನನ್ನ ಆತ್ಮೀಯರೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಿದ್ದು ಬಹಳ ಸಂತೋಷ ಉಂಟುಮಾಡಿತ್ತು. ಬಹಳ ದಿವಸಗಳ ನಂತರ ಎಲ್ಲರೂ ಒಂದೆಡೆ ಅದರಲ್ಲಿಯೂ ಬೆರಣಗೋಡಿನ ಮನೆಯಲ್ಲಿ ಸೇರುವ ಅವಕಾಶ ಯೋಗವೇ ಸರಿ. ಸನ್ಮಿತಾಳಿಗೆ ಇದು ಮೊದಲ ಹುಟ್ಟು ಹಬ್ಬವಾದ್ದರಿಂದ ಕಾರ್ಯಕ್ರಮ ಅದ್ದೂರಿಯಾಗಿಯೇ ಇತ್ತು. ಯಾವುದೇ ಕಾರ್ಯಕ್ರಮಗಳು ಒಂದೇ ದಿವಸ ಆದರೂ ಸಹ ಬೆರಣಗೋಡಿಗೆ ಬಂದವರಾರೂ ಒಂದೇ ದಿನದಲ್ಲಿ ಅಲ್ಲಿಂದ ಹೋಗುವುದಿಲ್ಲ. ಅಂತಹ ವಾತಾವರಣ, ಪ್ರಕೃತಿ ಸೌಂದರ್ಯ ಹಾಗೂ ಹೊಂದಿಕೊಂಡು ಮನಸ್ಸಂತೋಷ ಉಂಟುಮಾಡುವಂತಹ ಮನಸ್ಸುಗಳು ಅಲ್ಲಿವೆ.


ಮಾರನೆಯ ದಿವಸ ಬೆಳ್ಳಗ್ಗಿನಿಂದ ಸಂಜೆಯ ವರೆಗೂ ಹೇಗೆ ಕಾಲ ಕಳೆದೆವು ಎಂಬ ವಿಚಾರ ಯಾರೊಬ್ಬರಿಗೂ ಅರಿವಾಗಲೇ ಇಲ್ಲ. ಸಮಯದ ಅರಿವಾಗುವ ಹೊತ್ತಿಗೆ ಸಂಜೆ ನಾಲ್ಕು ಘಂಟೆಯಾಗಿತ್ತು. ಎಲ್ಲಾದರೊಂದೆಡೆಗೆ ಹೋಗಬೇಕು ಅಂದುಕೊಂಡ ಮನಸ್ಸುಗಳಿಗೆ ಮಹೇಶಣ್ಣ ನೀಡಿದ ಸಲಹೆ "ಕುದುರೆ ಅಬ್ಬಿ" ಇದು ತುಂಗಾ ನದಿಯ ತೀರದಲ್ಲಿರುವ ಒಂದು ಅಜ್ಞಾತ ಸ್ಥಳ, ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರೇಕ್ಷಣಾ ಅಥವಾ ಪ್ರವಾಸಿ ಸ್ಥಳ ಎಂದು ಗುರುತಿಸದೇ ಇದ್ದರೂ ಸಹ ಪ್ರಾಕೃತಿಕವಾಗಿ ತನ್ನದೇ ಆದಂತಹ ವೈವಿಧ್ಯತೆ ಹಾಗೂ ಆಕರ್ಷಣೆ ಹೊಂದಿರುವ ಸ್ಥಳ ಇದು.
ಬೆರಣಗೋಡಿನಿಂದ ಸುಮಾರು ಒಂದು ತಾಸು ಪ್ರಯಾಣವಾಗುತ್ತದೆ. ನಾವು ಅಲ್ಲಿಗೆ ತಲುಪುವ ವೇಳೆಗಾಗಲೇ ಸಂಜೆ ಐದು ಘಂಟೆಯಾಗಿತ್ತು. ಅಲ್ಲಿಗೆ ಹೋದ ಮೇಲೆಯೇ ಅಲ್ಲಿನ ವೈವಿದ್ಯತೆ ಹಾಗೂ ಆಕರ್ಷಣೆ ಏನು ಎಂಬುದು ಗೊತ್ತಾಗಿದ್ದು, ತುಂಗಾ ನದಿಯ ಆ ಸ್ಥಳದಲ್ಲಿ ದೊಡ್ಡ ದೊಡ್ಡ ಬಂಡೆಗಳಿವೆ ಅದೆಂತದೋ ವಿಶೇಷವಾದ ಕಲ್ಲಿನ ಜಾತಿ ಎಂದು ನನಗನಿಸಿತು. ನದಿಯ ಎರಡೂ ತೀರದಲ್ಲಿಯೂ ಸಹ ಮರಳುಗಾಡನ್ನು ನೆನಪಿಸುವಂತಹ ಮರಳಿನ ರಾಶಿ ಇದೆ. ಮರಳು ಕೋರರ ಕಣ್ಣಿಗೆ ಈ ಮರಳು ಕಂಡಿಲ್ಲವೇನೋ ಎಂದೆನಿಸಿತು. ಆ ಮರಳಿನ ರಾಶಿಯನ್ನು ಕಂಡೊಡನೆ ಬಾಲ್ಯದ ದಿವಸಗಳು ನೆನಪಾದವು.
ಈ ಸ್ಥಳದಲ್ಲಿರುವ ಬಂಡೆಗಳು ಅದೆಷ್ಟು ಸಾವಿರ ವರ್ಷಗಳಿಂದ ತುಂಗಾನದಿಯ ನೀರಿಗೆ ಬೆನ್ನು ಕೊಟ್ಟು ನಿಂತಿವೆಯೋ ಗೊತ್ತಿಲ್ಲ, ಆ ನೀರೂ ಸಹ ಅದೆಷ್ಟು ವರ್ಷಗಳಿಂದ ಈ ಬಂಡೆಗಳಿಗೆ ಮುತ್ತಿಟ್ಟು ಸಾಗುತ್ತಿವೆಯೋ ಅದನ್ನು ಸಹ ಸಂಶೋಧನೆಯ ಮೂಲಕವೇ ಖಾತ್ರಿ ಪಡಿಸಿಕೊಳ್ಳಬೇಕು.

ಸಾವಿರಾರು ವರ್ಷಗಳಿಂದ ನೀರಿನ ರಭಸಕ್ಕೆ ಮೈಯೊಡ್ಡಿರುವ ಈ ಬಂಡೆಗಳಿಗೆ ನೀರು ಒಂದು ರೂಪವನ್ನೇ ನೀಡಿದೆ. ಕ್ಷಮಿಸಿ ಅದು ಒಂದು ರೂಪವಲ್ಲ ನೂರಾರು, ಸಾವಿರಾರು ಎಂದರೆ ತಪ್ಪಾಗಲಾರದು. ಹರಿವ ನೀರಿಗೆ ಮೈಚೆಲ್ಲಿ ಕುಳಿತ ಬಂಡೆಗಳು ವರ್ಣಿಸಲಸಾದ್ಯವಾದ ರೀತಿಯ ರೂಪಗಳನ್ನು ಪಡೆದುಕೊಂಡಿವೆ. ಚಿತ್ರಕಲಾವಿದರು ರಚಿಸುವ ಚಿತ್ರಗಳಿಗೆ ಈ ಪ್ರಾಕೃತಿಕ ಶಿಲ್ಪಕಲೆಗಳೇ ಸ್ಪೂರ್ತಿದಾಯಕವೇನೋ ಎಂದೆನಿಸುತ್ತದೆ. ಒಂದೊಂದೆಡೆ ಬಂಡೆ ಕಲ್ಲುಗಳೇ ಕೊಳವೆಯ ರೂಪದಲ್ಲಿ ಕೊರೆದು ಹೋಗಿದ್ದು ಆ ನವಿರತೆ ಹಾಗೂ ಅಚ್ಚುಕಟ್ಟು ಎಂತಹ ಕಲಾವಿದನನ್ನು ನಾಚಿಸುವಂತಿದೆ. ಇನ್ನು ಕೆಲವು ಬಂಡೆಗಳ ತುದಿಯಲ್ಲಿ ಹಳ್ಳ ಉಂಟಾಗಿದ್ದು ತೊಟ್ಟಿಯಂತಹ ರೂಪ ಪಡೆದುಕೊಂಡಿವೆ. ಅಂತಹ ಬಂಡೆಗಳೇ ಆ ತುಂಗೆಗೆ ಮನಸೋತು ತನ್ನ ತನ್ನವನ್ನು ಕಳೆದುಕೊಂಡಿರುವಾಗ ಇನ್ನು ಸಣ್ಣ ಪುಟ್ಟ ಕಲ್ಲುಗಳ ಕಥೆಯೇನಾಗಿರಬೇಕು? ಆ ಕಥೆಯ ಸಾರಾಂಶವನ್ನು ಹೇಳದೇ ಇದ್ದರೆ ಈ ಬರಹ ಪೂರ್ಣವಾಗುವುದಿಲ್ಲ. ಏಕೆಂದರೆ ಆ ಸಣ್ಣ ಸಣ್ಣ ಶಿಲಾ ರೂಪಗಳ ಪರಿಶೀಲನೆ , ಅವುಗಳ ಅಂದ ಸ್ವಾದನೆ ಹಾಗೂ ಅವುಗಳ ರೂಪ ನಿರ್ಧಾರ ಮಾಡುವುದರಲ್ಲಿಯೇ ನಮ್ಮ ಹಲವು ಹೊತ್ತು ವ್ಯಯವಾಗಿದ್ದು. ಗುಂಡುಕಲ್ಲು, ಶಿವಲಿಂಗ, ಬೀಸು ಕಲ್ಲು, ಚಕ್ರಾಕಾರ, ಚಪ್ಪಟೆ ಆಕಾರ, ಇಲಿ ರೂಪ, ಎಲೆ ರೂಪ ಹೀಗೆ ಈ ಪ್ರಕೃತಿಯಲ್ಲಿರುವ ಹಲವು ವಸ್ತುಗಳ ಪ್ರಾಣಿಗಳ ವಿವಿಧ ರೂಪಗಳನ್ನು ಪಡೆದುಕೊಂಡಿರುವ ಶಿಲ್ಪಗಳು ಎಂತಹವರನ್ನು ಆಕರ್ಷಿಸುತ್ತವೆ. ಬರಿಗೈನಲ್ಲಿ ಅಲ್ಲಿಗೆ ಹೋದ ನಾವು ನಮ್ಮ ಬ್ಯಾಗುಗಳು, ಜೇಬುಗಳು ಹಾಗೂ ಜೇಬಿಲ್ಲದವರು ಪಂಚೆ, ವೇಲ್ ಗಳಲ್ಲಿಯೂ ಸಹ ಕಲ್ಲು, ಕಲ್ಲುಗಳನ್ನೇ ತುಂಬಿಕೊಂಡು ಬಂದೆವು. ವಿವಿಧ ರೂಪದ ವಿಭಿನ್ನ ಕಲ್ಲುಗಳಿಗಾಗಿ ಕಿತ್ತಾಟವೂ ನಡೆಯಿತು ಮನೆ ತಲುಪಿದಾಗ ಕಲ್ಲುಗಳನ್ನು ಯಾರಿಗೂ ಕಾಣದ ಗೌಪ್ಯ ಸ್ಥಳಗಳಲ್ಲಿ ಇಡಲು ಪ್ರಯತ್ನಿಸಿದ ಪ್ರಸಂಗವೂ ನಡೆಯಿತು ಎಂದರೆ ಅವುಗಳು ಎಷ್ಟು ಮುದ್ದಾಗಿರಬಹುದು ಎಂಬುದನ್ನು ಯಾರಾದರೂ ಊಹಿಸಿಕೊಳ್ಳಬಹುದು.

ಅನೇಕ ದಿವಸಗಳಿಂದ "ಎಲ್ಲಿಹೋದವು ಆ ನನ್ನ ದಿನಗಳು ಬಾಲ್ಯದಲ್ಲಿ ಕಳೆದ ಬಂಗಾರದ ಕ್ಷಣಗಳು " ಎಂಬ ಪ್ರಶ್ನೆ ನನ್ನನ್ನು ಬಹಳ ದಿವಸಗಳಿಂದ ಕಾಡುತ್ತಲೇ ಇತ್ತು. ಅದನ್ನು ಮರೆಸುವಂತಹ ಒಂದು ಅಚ್ಚರಿ ಮೂಡಿಸಿದವರು ಮಹೇಶಣ್ಣ, ಹೇಗೂ ಅಪರೂಪದ ಮರಳ ರಾಶಿ ದೊರೆತಿದೆ ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳಲು ಸೂಕ್ತವಾದ ಅಂಗಳ ಇದು ಎಂದ ಅವರು ಮಾತು ಮಾತನಾಡುತ್ತಲೇ ಜೋಟ್ ಹೇಳಿ ಮರಳಿಗಿಳಿದೇ ಬಿಟ್ಟರು ಅದನ್ನೇ ಕಾಯುತ್ತಿದ್ದ ವನಶ್ರೀ ಹಾಗೂ ಇತರರು ಅಂಗಳಕ್ಕಿಳಿದರು. ವಯಸ್ಸಿನ್ನ ಭೇದ ಮರೆತ ಎಲ್ಲರೂ ಮರಳಿಗಿಳಿದರು ಜೂಟಾಟ, ಕಳ್ಳ ಪೋಲಿಸ್, ಕೆರೆ ದಡ, ಕಲ್ಲು ಮಣ್ಣು, ಚೈನಾಟ ಹೀಗೆ ಬಾಲ್ಯದಲ್ಲಿ ಆಡುತ್ತಿದ್ದ ಯಾವ ಯಾವ ಆಟಗಳು ನೆನಪಾಗುತ್ತವೆಯೋ ಅವೆಲ್ಲವನ್ನು ಆಡಿದೆವು ಆದರೆ ಧಣಿವಾಗಲೇ ಇಲ್ಲ, ದಿನವಿಡೀ ಉರಿದು ಧಣಿದ ಸೂರ್ಯ ಮೋಡದಿಂದ ಜಾರುವವರೆಗೂ ನಮ್ಮ ಮನಸು ಮೈಗಳಿಗೆ ಧಣಿವಾಗಲೇ ಇಲ್ಲ. ನಮ್ಮೊಂದಿಗೆ ಬಂದಿದ್ದ ಪುಟಾಣಿಗಳು ಮೀನುಗಳನ್ನು ಹಿಡಿದರು ನೀರು ಕೊಂಡೊಯ್ದಿದ್ದ ಬಾಟಲಿಗಳಲ್ಲಿ ಸ್ವತಂತ್ರವಾಗಿದ್ದ ಮೀನಿನ ಮರಿಗಳನ್ನು ಬಂಧಿಸಲಾಗಿತ್ತು. ಅಷ್ಟು ಹೊತ್ತಿಗಾಗಲೇ ನನಗೆ ನೀರಡಿಕೆ ಯಾಯ್ತು ವನಶ್ರೀಗೂ ನೀರಾಡಿಕೆಯಾಗಿರಬೇಕು ನೀರಿಗಾಗಿ ಹೋಗುತ್ತಿದ್ದ ಆಕೆಯನ್ನು ಕಂಡೊಡನೆ ನನ್ನ ಪಾಲಿಗೆ ನೀರು ದಕ್ಕುತ್ತದೆಯೋ ಇಲ್ಲವೋ ಎಂದು ಲೆಕ್ಕಾಚಾರ ಹಾಕಿದ ನಾನು ಓಡಿಹೋಗಿ ಬಾಟಲಿಯಲ್ಲಿದ್ದ ನೀರು ಕುಡಿದೆ ನಾನು ಕುಡಿದ ರಭಸ ಹೇಗಿತ್ತೆಂದರೆ ಬಾಟಲಿಯಲ್ಲಿ ಬಂಧಿಯಾಗಿದ್ದ ಮೂರ್ನಾಲ್ಕು ಜೀವಂತ ಮೀನಿನ ಮರಿಗಳು ನಿರಾಯಾಸವಾಗಿ ನನ್ನ ಹೊಟ್ಟೆ ಸೇರಿದವು. ಅದರ ಪರಿಣಾಮ ಏನಾಗಬಹುದೋ ಎಂಬುದನ್ನು ಲೆಕ್ಕಿಸದ ನಾನು ಮತ್ತೆ ಮರಳಿನಾಟದಲ್ಲಿ ಮಗ್ನನಾದೆ. ಮರಳಿನಲ್ಲಿ ಬಿದ್ದೆವು ಅಲ್ಲಿಯೇ ಎದ್ದೆವು, ಬಿದ್ದು ಒದ್ದಾಡಿದೆವು, ಉರುಳಿ ಆನಂದಿಸಿದೆವು, ಆದರೂ ಧಣಿವಾಗಲೇ ಇಲ್ಲ ಒಂದೊಂದು ಕ್ಷಣವೂ ಬಾಲ್ಯದ ನೆನಪಾಯ್ತು ಕುದುರೆ ಅಬ್ಬಿಯನ್ನು ಬಿಟ್ಟು ಬರುವಾಗ ಮನಸು ಭಾರವಾಗಿತ್ತು. ತುಂಗಾ ತೀರದಲ್ಲೊಂದು ದಿವಸ ಬಾಲ್ಯದ ನೆನಪುಗಳನ್ನು ಹಸಿರಾಗಿಸುವಂತೆ ಮಾಡಿದ ಬೆರಣಗೋಡಿನ ಮಹೇಶಣ್ಣ ಹಾಗೂ ರೂಪಕ್ಕನವರಿಗೆ ಎಲ್ಲಕ್ಕಿಂತಲೂ ಹೆಚ್ಚಾಗಿ ಈ ಸಂತೋಷ ಕೂಟಕ್ಕೆ ನೆಪವಾದ ಸನ್ಮಿತಳಿಗೆ ಹಾಗೂ ಅವಳ ಹುಟ್ಟು ಹಬ್ಬಕ್ಕೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂಬುದು ಇನ್ನು ಅರಿವಾಗಿಲ್ಲ.