
ವಿ.ಮಧುಸೂದನ್
ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೂರನೇ ದಿನದತ್ತ ಮುನ್ನಡೆಯುತ್ತಿದೆ. ಅಧಿಕಾರಕ್ಕೆ ಬಂದ ದಿವಸದಿಂದಲೂ ತಾವು ರೈತಪರ ರಾಜಕಾರಣಿ ಎಂಬುದನ್ನು ತೋರಿಸಿಕೊಳ್ಳಲು ಪರಿಪರಿಯಾಗಿ ಮಾತನಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದುವರೆಗೆ ಕೇವಲ ಮಾತನಾಡಿದ್ದೇ ಆಯಿತು. ತಾವು ಚುನಾವಣೆಯ ಪೂರ್ವದಲ್ಲಿ ರೈತರಿಗೆ ಅನುಕೂಲವಾಗುವಂತಹ ಕೆಲವು ಅಂಶಗಳನ್ನು ಏನು ಘೋಷಿಸಿದ್ದರೋ ಅದಷ್ಟೇ ಪ್ರಸ್ತುತ ರೈತರ ಅಗತ್ಯ ಅದನ್ನು ಹೊರತು ಪಡಿಸಿ ರಾಜ್ಯದ ರೈತರಿಗೆ ಯಾವುದೇ ಸಮಸ್ಯೆಗಳೂ ಇಲ್ಲ ಎಂದು ಮುಖ್ಯಮಂತ್ರಿಗಳು ಭಾವಿಸಿದಂತಿದೆ. ಆರಂಭ ಶೂರತ್ವ ಎಂಬಂತೆ ಅಧಿಕಾಕ್ಕೆ ಏರಿದ ಮೊದಲ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳನ್ನು ಸುತ್ತಿ ಅಲ್ಲೆಲ್ಲ ರೈತರನ್ನೂ ಒಳಗೊಂಡಂತೆ ವಿವಿಧ ಸಭೆ, ಸಂವಾದಗಳನ್ನು ಮಾಡಿದ ಯಡಿಯೂರಪ್ಪ ಆಪರೇಷನ್ ಕಮಲಕ್ಕೆ ಕೈ ಹಾಕಿದ ಮೇಲೆ ಅವುಗಳನ್ನೆಲ್ಲಾ ಮರೆತಂತಿದೆ. ರೈತರನ್ನು ಪುನಹ ನೆನಪು ಮಾಡಿಕೊಳ್ಳುವಂತಹ ವಿದ್ಯಾಮಾನಗಳು ರಾಜ್ಯದಲ್ಲಿ ನಡೆಯುತ್ತಿದ್ದರೂ ಸಹ ಅವರು ಯಾಕೋ ಅತ್ತ ಮನಸ್ಸು ಮಾಡುತ್ತಿಲ್ಲ.
ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಆಲೋಗಡ್ಡೆ ಬೆಳೆ ಈ ಸಾಲಿನಲ್ಲಿ ಹೇಗೆ ನೆಲಕಚ್ಚಿದೆ ಎಂದರೆ ಅದನ್ನು ಹಾಸನ ಜಿಲ್ಲೆಗೆ ಹೋಗಿ ನೋಡಿದರೆ ಅದರ ಹಾನಿಯ ಪ್ರಮಾಣ ಏನು ಎಂಬುದು ಗೊತ್ತಾಗುತ್ತದೆ. ಹಾಸನದ ರೈತರಿಗೆ ಹಣ ಹರಿದು ಬರುವುದೇ ಆಲೋಗಡ್ಡೆಯಿಂದ ರಾಜ್ಯದಲ್ಲಿಯೇ ಅಪಾರ ಪ್ರಮಾಣದ ಆಲೋಗಡ್ಡೆಯನ್ನು ಇಲ್ಲಿ ಬೆಳೆಯಲಾಗುತ್ತದೆ. ವಾಣಿಜ್ಯ ನಗರಿ ಮುಂಬೈನ ಆಲೋಗಡ್ಡೆ ಬೇಡಿಕೆ ಈಡೇರುವುದೇ ಹಾಸನದಲ್ಲಿ ಬೆಳೆಯುವ ಆಲೋಗಡ್ಡೆಯಿಂದ . ಈ ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು ೪೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು ೭೧ ಸಾವಿರಕ್ಕೂ ಅಧಿಕ ಕೃಷಿಕರು ಆಲೂಗಡ್ಡೆ ಬೆಳೆಯುತ್ತಾರೆ ಎಂಬ ಅಂಶವನ್ನು ಕೃಷಿ ಇಲಾಖೆಯಲ್ಲಿ ದಾಖಲಿಸಲಾಗಿದೆ. ಇಲ್ಲಿ ರಾಷ್ಟ್ರದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಆಲೂಗಡ್ಡೆಯನ್ನು ಬೆಳೆಯಲಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಆಲೂಗಡ್ಡೆ ಬೆಳೆಯುತ್ತಾರಾದರೂ ಈಚಿನ ದಿವಸಗಳಲ್ಲಿ ಬಹಳ ಜನಪ್ರೀಯವಾಗಿರುವ ಕುರ್ಕುರೆ, ಲೇಸ್, ಬಿಂಗೋ, ಪೆಪ್ಸಿಯಂತಹ ಬಹುರಾಷ್ಟ್ರೀಯ ಕಂಪೆನಿಗಳು ಉತ್ಪಾದಿಸುತ್ತಿರುವ ಅಲೂಗಡ್ಡೆ ಆಧಾರಿತ ಆಹಾರ ಪದಾರ್ಥಗಳಿಗೆ ಬಹುತೇಕ ಹಾಸನ ಜಿಲ್ಲೆಯಲ್ಲಿ ಬೆಳೆಯುವ ಆಲೂಗಡ್ಡೆಯೇ ಹೆಚ್ಚು ಪ್ರಮಾದಲ್ಲಿ ಸರಬರಾಜಾಗುತ್ತಿದೆ. ಹಾಸನ ಜಿಲ್ಲೆಯ ಅಲೂಗಡ್ಡೆ ಇಲ್ಲಿ ನಡೆಸುವ ವಾರ್ಷಿಕ ವಹಿವಾಟು ಸುಮಾರು ೩೦೦ ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿದೆ. ಇದುವರೆಗೆ ಕೇವಲ ಬೆಲೆ ಸಮಸ್ಯೆ ಎದುರಿಸುತ್ತಿದ್ದ ಆಲೂ ಬೆಳೆ ಈಗ ರೋಗ ಬಾಧೆಗೆ ಒಳಗಾಗಿದೆ. ಅಂಗಮಾರಿ ಹೆಸರಿನ ಈ ರೋಗ ಬಿಳಿಯ ಹೂವ್ವಿನೊಂದಿಗೆ ನಳನಳಿಸಬೇಕಿದ್ದ ಆಲೋಗಡ್ಡೆಯನ್ನು ಸಾಲು ಸಾಲಾಗಿ ಮಲಗಿಸಿ ಬಿಟ್ಟಿದೆ. ಜಿಲ್ಲೆಯ ಚನ್ನರಾಯಪಟ್ಟಣ, ಹೊಳೇನರಸೀಪುರ, ಅರಕಲಗೂಡು, ಹಾಸನ, ಆಲೂರು ಹಾಗೂ ಬೇಲೂರು ತಾಲ್ಲೊಕುಗಳಲ್ಲಿ ಹೆಚ್ಚು ಪ್ರಮಾಣದ ಆಲೂ ಬೆಳೆಯಲಾಗುತ್ತಿದ್ದು ಈ ತಾಲ್ಲೂಕುಗಳಲ್ಲಿ ಎಲ್ಲಿ ನೋಡಿದರೂ ರೋಗದಿಂದ ಕಪ್ಪು ಹಿಡಿದಿರುವ ಆಲೂಗಡ್ಡೆ ಗಿಡಗಳು ಹಾಸಿ ಹೊದ್ದಂತೆ ಮಲಗಿಬಿಟ್ಟಿದೆ. ಆಲ್ಲೂಗಡ್ಡೆ ಬೆಳೆಯ ಬಗ್ಗೆ ಅತೀವವಾದ ವಿಶ್ವಾಸ ಇರಿಸಿಕೊಂಡಿರುವ ಈ ಜಿಲ್ಲೆಯ ರೈತರು ಸಾಲಾ ಸೂಲದ ಜೊತೆಗೆ ತಮ್ಮ ಪತ್ನಿಯರ ಚಿನ್ನಾಭರಣಗಳನ್ನು ಮಾರಿ, ಅಡವಿಟ್ಟು ಇಲ್ಲಿ ಆಲೂಗಡ್ಡೆ ಭಿತ್ತನೆ ಮಾಡುತ್ತಾರೆ. ಆದರೆ ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇಖಡ ೯೨ % ರಷ್ಟು ಆಲೂಗಡ್ಡೆ ಬೆಳೆ ಅನಾರೋಗ್ಯಕ್ಕೆ ಒಳಗಾಗಿದ್ದು, ಈಗ ಅವರೆಲ್ಲರೂ ಸಂಕಷ್ಟದಲ್ಲಿದ್ದು ಅವರ ಗೋಳನ್ನು ಕೇಳುವವರೇ ಇಲ್ಲ.
ಪರಿಸ್ಥಿತಿ ಹೀಗಿರುವಾಗಲೇ ಯಡಿಯೂರಪ್ಪ ಹಾಸನ ಜಿಲ್ಲೆಗೆ ಭೇಟಿ ನೀಡಿದ್ದರು ಆಗ ಅವರನ್ನು ಭೇಟಿಯಾಗಿದ್ದ ರೈತರ ಅಹವಾಲು ಏನು ಎಂಬುದನ್ನು ಪೂರ್ಣವಾಗಿ ಕೇಳುವಂತಹ ಸಂಯಮವನ್ನು ಸಹ ಮುಖ್ಯಮಂತ್ರಿಗಳು ತೋರಲಿಲ್ಲ. ನೈಸರ್ಗಿಕ ರೋಗಕ್ಕೆ ಕೃಷಿ ಅಧಿಕಾರಿಗಳೇ ಕಾರಣ ಎಂದು ಹರಿಹಾಯ್ದ ಅವರು ಕೃಷಿ ಇಲಾಖೆ ಅಧಿಕಾರಿಗಳು ಕತ್ತೆ ಕಾಯುತ್ತಿದ್ದಾರೆಯೇ ಎಂದು ತನ್ನ ಉದ್ಧಟತನವನ್ನು ತೋರಿ ತಿರುಗಿಯೂ ನೋಡದೆ ಬೆಂಗಳೂರಿಗೆ ಹಾರಿ ಹೋದರು. ರಾಜ್ಯದ ಮುಖ್ಯಮಂತ್ರಿಯಾಗಿ ಒಂದು ಜಿಲ್ಲೆಯ ರೈತರ ಸಂಕಷ್ಟಕ್ಕೆ ಭಾಗಿಯಾಗದ ಇವರು ಇನ್ನು ರಾಜ್ಯದ ರೈತರ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೋ ಎಂಬುದನ್ನು ಊಹಿಸಿಕೊಳ್ಳಲು ಇದು ಸಕಾಲವಾಗಿದೆ. ರಾಜಕೀಯ ದ್ವೇಶಕ್ಕೆ ಒಂದು ಜಿಲ್ಲೆಯ ಕೃಷಿಕರನ್ನು ಬಲಿ ಮಾಡುವುದು, ಅವರನ್ನು ನಿರ್ಲಕ್ಷಿಸುವುದು ಸರಿಯಾದ ಕ್ರಮವಲ್ಲ ರಾಜಕೀಯ ಗೊಂದಲಗಳು ಏನೇ ಇರಬಹುದು ಆದರೆ ಇಡೀ ಜಿಲ್ಲೆಯಲ್ಲಿ ಸತತ ಆರು ತಿಂಗಳುಗಲ ಕಾಲ ಸಾವಿರಾರು ಜನರಿಗೆ ಉದ್ಯೋಗ ನೀಡುವ ಒಂದು ಕೃಷಿ ಉತ್ಪನ್ನದ ಸಮಸ್ಯೆಯನ್ನು ನಿರ್ಲಕ್ಷಿಸುವುದು ಅವಿವೇಕಿತನದ ಪರಮಾವಧಿ ಅಲ್ಲದೇ ಮತ್ತೇನೂ ಅಲ್ಲ.
ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆದರೂ ಅದು ಒಂದು ಅಲ್ಪಾವಧಿಯ ಬೆಳೆ ಕೇವಲ ಎರಡೇ ಎರಡು ತಿಂಗಳಲ್ಲಿ ಮುಗಿದು ಹೋಗುತ್ತದೆ. ಇಂತದ್ದೆ ಅನೇಕ ಬೆಳೆಯನ್ನು ಇಲ್ಲಿ ಬೆಳೆಯಲಾಗುತ್ತಿದೆ ಹಾಗಾಗಿ ಸಮಸ್ಯೆ ಇಲ್ಲ ಎಂದು ಅನೇಕರು ವಾದಿಸುತ್ತಾರೆ. ಆದರೆ ಆಲೂಗಡ್ಡೆ ಅಲ್ಪಾವಧಿ ಬೆಳೆಯಾದರೂ ಸಹ ಇದರ ಮೇಲೆ ಅಪಾರ ಪ್ರಮಾಣದ ಬಂಡವಾಳ ಹೋಡಿಕೆಯಾಗುತ್ತದೆ. ಆಲೂಗಡ್ಡೆಯ ಸಾಗುವಳಿಗೆ ಕನಿಷ್ಟ ಒಂದು ಎಕರೆಗೆ ೨೫ ಸಾವಿರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಇದರ ಜೊತೆಗೆ ಮುಂಗಾರು ಹಂಗಾಮಿನಲ್ಲಿ ಏಪ್ರಿಲ್-ಮೇ ತಿಂಗಳಿನಿಂದ ಡಿಸೆಂಬರ್ವರೆಗೆ ಸರಿಸುಮಾರು ಎರಡು ಲಕ್ಷ ಜನರಿಗೆ ಈ ಬೆಳೆ ಉದ್ಯೋಗ ದೊರಕಿಸಿಕೊಡುತ್ತದೆ. ಆಲೂಗಡ್ಡೆ ಭಿತ್ತನೆಯಿಂದ ಹಿಡಿದು, ಅದರ ಸಾಗುವಳಿ, ಕೊಯ್ಲು, ವಿಂಗಡಣೆ, ಸಾಗಣೆ, ಚೀಲ ಮಾಡುವಿಕೆ ಹಾಗೂ ಸಂಸ್ಕರಣೆಯ ಮಾಡಲು ಈ ಪ್ರಮಾಣದ ಜನ ದುಡಿಯುತ್ತಿದ್ದಾರೆ. ಅದರ ಜೊತೆಗೆ ಆಲೂಗಡ್ಡೆ ಸಾಗಣೆ ಒಂದು ಪ್ರಮುಖ ವಾಣಿಜ್ಯ ವ್ಯವಹಾರವಾಗಿದ್ದು, ಸಾವಿರಾರು ಲಾರಿಗಳು ಅದರ ಸಾಗಣೆ ಕೆಲಸವನ್ನು ಮಾಡುತ್ತವೆ. ಆದರೆ ಈ ಸಾರಿ ಇಂತಹ ಅಪಾರ ಪ್ರಮಾಣದ ಉದ್ಯೋಗ ಸೃಷ್ಟಿಯ ಒಂದು ಕೃಷಿಯಾಗಿರುವ ಆಲೂಗಡ್ಡೆ ಈ ಸಾರಿ ಭಾದೆಗೊಳಗಾಗಿದ್ದು ಲಕ್ಷಾಂತರ ಜನ ನಿರುದ್ಯೋಗಿಗಳಾಗುವ ಸಾಧ್ಯತೆ ಜಿಲ್ಲೆಯಲ್ಲಿ ಸೃಷ್ಪಿಯಾಗಿದೆ.
ಹಾಸನ ಜಿಲ್ಲೆಯ ಆಲೂಗಡ್ಡೆ ಬೆಳೆಗೆ ಬಂದೆರಗಿರುವ ಅಂಗಮಾರಿ ರೋಗವನ್ನು ತಡೆಯುವಲ್ಲಿ ಈಗಾಗಲೇ ವಿಫಲರಾಗಿದ್ದೇವೆ. ಯಾವುದೇ ಕೃಷಿ ಸಮಸ್ಯೆಗಳು ನಿಧಾನಗತಿಯಲ್ಲಿ ತಮ್ಮ ಪರಿಣಾಮಗಳನ್ನು ಬೀರುತ್ತವೆ ಹಾಗೂ ಅವು ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಕೋಟ್ಯಾಂತರ ರೂಪಾಯಿಯನ್ನು ಭೂಮಿಗೆ ಸುರಿದು ಈಗ ವಿಭ್ರಾಂತರಾಗಿ ಗದ್ದದ ಮೇಲೆ ಕೈಹೊತ್ತು ಕುಳಿತಿರುವ ಹಾಸನ ಜಿಲ್ಲೆಯ ರೈತರನ್ನು ರಾಜ್ಯ ಸರ್ಕಾರ ಹೀಗೆ ಕಡೆಗಣಿಸುವುದು ಮತ್ತು ಸಂಕಷ್ಟದಲ್ಲಿರುವ ರೈತರ ಸಹನೆ ಪರೀಕ್ಷೆ ಮಾಡುವುದು ಯಾರಿಗೂ ಸಾಧುವಲ್ಲ.