Saturday, April 10, 2010

ವೀಕ್ಷಕರು ಜಾಗೃತರಾಗಿದ್ದಾರೆ ಎಚ್ಚರಿಕೆ!


ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳಾಗಲಿ ಅಥವಾ ಭಿತ್ತರವಾಗುತ್ತಿರುವ ಕಾರ್ಯಕ್ರಮಗಳಾಗಲಿ ಅವುಗಳ ಸಮಂಜಸತೆ ಎಷ್ಟು ಎಂಬುವಂತಹ ವಿಚಾರಗಳು ಆಗಾಗ್ಗೆ ಚರ್ಚೆಯಾಗುತ್ತಿರುತ್ತವೆ. ಈ ಹಿಂದೆ ಮಾಧ್ಯಮಗಳ ವೈಭವೀಕರಣವನ್ನು ಬುದ್ಧಿ ಜೀವಿಗಳೆನಿಸಿಕೊಂಡವರು ಮಾತ್ರ ಪ್ರಶ್ನಿಸುತ್ತಿದ್ದರು ಹಾಗೂ ಚರ್ಚಿಸುತ್ತಿದ್ದರು ಆದರೆ ಜನಸಾಮಾನ್ಯರೂ ಸಹ ವ್ಯಾಪಕವಾಗಿ ಪ್ರಶ್ನಿಸುವಂತಹ ಕಾಲವೊಂದು ಹತ್ತಿರದಲ್ಲಿಯೇ ಇದೆ ಎಂದರೆ ಆಶ್ಚರ್ಯವೇನಿಲ್ಲ. ಮಾಧ್ಯಮಗಳ ಗುಣಾತ್ಮಕ ಕಾರ್ಯಾಚರಣೆಗೆ ಇಂತಹದ್ದೊಂದು ಬೆಳವಣಿಗೆ ಒಳ್ಳೆಯದ್ದೇ ಆದರೆ ಜನಸಾಮಾನ್ಯರು ಹೀನಾಮಾನವಾಗಿ ಮಾಧ್ಯಮಗಳನ್ನು ಪ್ರಶ್ನಿಸುವ ಮುನ್ನ ಈ ದೇಶದ ಮಾಧ್ಯಮಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಒಳಿತು ಎಂಬುದು ಆಗಾಗ್ಗೆ ಕೇಳಿ ಬರುತ್ತಿರುವ ಮಾತು. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದ ಸುದ್ದಿಗಳಷ್ಟೇ ಈ ವರೆಗೆ ಟೀಕೆ ಟಿಪ್ಪಣಿಗಳಿಗೆ ಒಳಗಾಗುತ್ತಿದ್ದವು ಆದರೆ ಪಕ್ಷ, ಜಾತಿ, ಗುಂಪುಗಳ ಆಧಾರದ ಮೇಲೆ ಅಂತಹ ಆರೋಪಗಳು ನಶಿಸಿಹೋಗುತ್ತಿದ್ದವು ಆದರೆ ಈಗ ಮಾಧ್ಯಮಗಳಲ್ಲಿ ವಿಶೇಷವಾಗಿ ಖಾಸಗಿ ಟಿವಿ ಹಾಗೂ ಖಾಸಗಿ ರೇಡಿಯೋ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳೂ ಸಹ ಪ್ರತಿ ನಿತ್ಯ ಟೀಕೆಗೀಡಾಗುತ್ತಿರುವುದು ಈ ದೇಶದ ಮಾಧ್ಯಮ ರಂಗದ ದುರಂತವೇ ಸರಿ.
ಟಿವಿ ಹಾಗೂ ರೇಡಿಯೋಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಏಕಮುಖವಾಗಿರುವುದರಿಂದ ಟೀಕೆ ಟಿಪ್ಪಣಿಗಳು ಎಲ್ಲೋ ಒಂದೆಡೆ ಕೇಳಿ ಆನಂತರ ತಣ್ಣಗಾಗುತ್ತಿದ್ದವು ಆದರೆ ಈಗ ಯಾವುದೋ ಗಳಿಗೆಯ ತಪ್ಪುಗಳನ್ನ ವೀಕ್ಷಕರು ಮತ್ತೊಂದು ಮಾಧ್ಯಮದಲ್ಲಿ ಅಭಿವ್ಯಕ್ತಿಗೊಳಿಸುವ ಅಥವಾ ಸಂಬಂಧಿಸಿದ ಮಾಧ್ಯಮಗಳಿಗೇ ತಪ್ಪಿನ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಗಳು ನಡೆಯುತ್ತಿವೆ ಈ ಮೂಲಕ ಮಾಧ್ಯಮಗಳು ತಾವು ಏನು ಮಾಡಿದರೂ ಸರಿ ಎಂಬ ಭ್ರಮೆಯಿಂದ ಹೊರಬರುವಂತೆ ಮಾಡಿವೆ ಈ ನಡುವೆಯೂ ತಮ್ಮ ತಪ್ಪುಗಳನ್ನು ಶತಾಯಗತಾಯ ಒಪ್ಪದೇ ಇರುವಂತಹ ಮಾಧ್ಯಮ ಮಿತ್ರರೂ ನಮ್ಮ ನಡುವೆ ಇದ್ದಾರೆ. ಇವುಗಳೆಲ್ಲದರ ಪರಿಣಾಮ ಏನೋ ಎಂಬಂತೆ ಮಾಧ್ಯಮಗಳಲ್ಲಿನ ವೃತ್ತಿನಿರತರು ಜನಸಾಮಾನ್ಯರನ್ನ ಭೇಟಿಯಾದಾಗ ವೇಳೆ ಸಾವಿರಾರು ಪುಕ್ಕಟ್ಟೆ ಸಲಹೆಗಳು, ಒಮ್ಮೊಮ್ಮೆ ವಾಗ್ವಾದಗಳು ಜೊತೆ ಜೊತೆಗೆ ಸಣ್ಣ ಪುಟ್ಟ ಚರ್ಚೆಗಳಿಗೆ ತಯಾರಾಗಿರಲೇ ಬೇಕಾಗಿರುತ್ತದೆ ಎಂಬುದು ಇತ್ತೀಚೆಗಷ್ಟೇ ಅರಿವಾಯ್ತು.
ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ಹೊರಗೇ ಹಲವು ಕಾರ್ಯಕ್ರಮಗಳು ನಡೆದ ಪರಿಣಾಮ ಹುಬ್ಬಳ್ಳಿ, ಹಾಸನ, ಮೈಸೂರು, ದಾವಣಗೆರೆ ಅಂತೆಲ್ಲ ಸುತ್ತಾಟವೋ ಸುತ್ತಾಟ ಹೋದಲ್ಲೆಲ್ಲ ಹೊಸ ಹೊಸ ಜನರ ಪರಿಚಯ, ಹೊಸ ಸಂಸ್ಕೃತಿಗಳ ಒಡನಾಟ ಜೊತೆಗೆ ವೈವಿಧ್ಯಮಯ ರುಚಿಯ ಸ್ವಾಗತ ಇವುಗಳೆಲ್ಲದರ ನಡುವೆ ಮಾಧ್ಯಮಗಳ ಕುರಿತಾದ ಚರ್ಚೆ ಜೊತೆಗೆ ಉಚಿತ ಸಲಹೆಗಳು ಇವುಗಳೆಲ್ಲವನ್ನು ಹೊತ್ತು ಬಂದ ನಾನು ಯಾವುದನ್ನು ಬರೆಯುವುದು ಯಾವುದನ್ನು ಬಿಡುವುದು ಎಂಬ ಚಿಂತೆಯಲ್ಲಿದೆನೆ ಈ ನಡುವೆ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದ ಎರಡು ಘಟನೆಗಳನ್ನು ಹೇಳಲೇ ಬೇಕೆನಿಸುತ್ತಿದೆ.
ಪ್ರತಿ ದಿನವೂ ಕೆಲಸ ಕೆಲಸವೆಂದು ಕಂಪ್ಯೂಟರ್ ಹಾಗೂ ಫೈಲ್ ಗಳ ನಡುವೆ ಮುಳುಗಿ ಹೋಗುವ ನಾವು ಮಾಧ್ಯಮದಲ್ಲಿದ್ದುಕೊಂಡು ಇಡೀ ಒಂದು ಸಮುದಾಯಕ್ಕೆ ತಲುಪುತ್ತಿರುತ್ತೇವೆ ಎಂಬ ವಿಚಾರ ಮರೆತೇ ಹೋಗಿರುತ್ತದೆ. ಪ್ರತಿಯೊಂದು ಸಂಚಿಕೆಗಳನ್ನು ಅಚ್ಚುಕಟ್ಟಾಗಿ ನೀಡಬೇಕೆಂದುಕೊಳ್ಳುವ ನಾವು ವೀಕ್ಷಕ ನಮ್ಮಿಂದ ಏನನ್ನು ಆಪೇಕ್ಷಿಸುತ್ತಿದ್ದಾನೆ ಎಂಬುದನ್ನು ಅರಿಯಲು ಸಮಾಜದೊಂದಿಗೆ ಒಡನಾಡಲೇ ಬೇಕು. ಹುಬ್ಬಳ್ಳಿಗೆ ಹೋಗಿದ್ದ ಸಂದರ್ಭ ಮಾಧ್ಯಮಗಳ ಬಗ್ಗೆ ಅತೀವವಾದ ಆಸಕ್ತಿ ಬೆಳೆಸಿಕೊಂಡಿರುವ ವಿಚಿತ್ರ ವ್ಯಕ್ತಿಯೋರ್ವನ ಪರಿಚಯವಾಯ್ತು ಆತನಿಗೆ ಮಾಧ್ಯಮಗಳ ಜೊತೆಗೆ ಎಷ್ಟು ವರ್ಷಗಳ ಒಡನಾಟವಿದೆಯೋ ಗೊತ್ತಿಲ್ಲ ಆದರೆ ಈಗಾಗಲೇ ಎಲ್ಲಾ ಮಾಧ್ಯಮಗಳ ಧೋರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಗೆಳೆಯ ಕನ್ನಡದ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳ ಬಗೆಗಿನ ಒಪ್ಪು ತಪ್ಪುಗಳನ್ನು ನಿಖರವಾಗಿ ಹೇಳುವಷ್ಟು ಪಾಂಡಿತ್ಯ ಸಂಪಾದಿಸಿಕೊಂಡಿದ್ದಾರೆ. ಈ ಎಲ್ಲಾ ವಿಮರ್ಶೆಯ ನಂತರ ಮಾಧ್ಯಮಗಳ ಬಗ್ಗೆಗಿನ ಅವರ ಅಂತಿಮ ತೀರ್ಪೆಂದರೆ ಈಗಿರುವ ಮಾಧ್ಯಮಗಳು ಬ್ರಹ್ಮನಿಂದಲೂ ಸರಿಪರಿಸಲಾಗದ ಸ್ಥಿತಿ ತಲುಪಿವೆ ಆದ್ದರಿಂದ ಪರ್ಯಾಯ ಮಾಧ್ಯಮ ವಲಯವೊಂದನ್ನೇ ಸೃಷ್ಟಿಸುವ ಅಗತ್ಯವಿದೆ ಎಂಬ ವಾದ ಮುಂದಿಟ್ಟರು. ಈ ತೀರ್ಪಿಗೆ ಏನು ಪ್ರತಿಕ್ರಿಯೆ ನೀಡಬೇಕೆಂಬುದು ನನಗೆ ತಿಳಿಯದೆ ಕಕ್ಕಾಬಿಕ್ಕಿಯಾಗಿ ಕುಳಿತಿದ್ದ ನನ್ನನ್ನು ತಮ್ಮ ಸ್ಟುಡಿಯೋದತ್ತ ಕರೆದೊಯ್ದ ವ್ಯಕ್ತಿ ಪರ್ಯಾಯ ದೃಷ್ಯಮಾಧ್ಯಮ ಹೇಗಿರಬೇಕು ಎಂಬ ಬಗ್ಗೆಯೂ ತಮ್ಮದೇ ಆದ ಚೌಕಟ್ಟಿನ ನೀಲಿ ನಕ್ಷೆಯನ್ನು ನನ್ನ ಮುಂದಿರಿಸಿದರು.
ಒಂದು ಟಿವಿ ಚಾನೆಲ್ ಎಂದರೆ ಅದು ಹೇಗಿರಬೇಕು ಅದು ಹೇಗೆ ಕಾರ್ಯ ನಿರ್ವಹಿಸಬೇಕು ಅದರಲ್ಲಿ ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಎಂತೆಂತಹ ಕಾರ್ಯಕ್ರಮಗಳು ಪ್ರಸಾರವಾಗಬೇಕು ಸುದ್ದಿಗಳು ಎಷ್ಟಿರಬೇಕು ಹೇಗಿರಬೇಕು ಪ್ರತಿಯೊಂದು ಸುದ್ದಿ ಸಂಚಿಕೆಗಳೂ ಸಹ ಕಾಲಕ್ಕೆ ಅನುಗುಣವಾಗಿ ಹೇಗಿರಬೇಕು ಎಂಬುದರ ಕುರಿತಾಗಿ ನೀಲಿನಕ್ಷೆಯನ್ನೇ ತಯಾರಿಸಿಟ್ಟುಕೊಂಡಿರುವ ಆವ್ಯಕ್ತಿಯ ಮಾಧ್ಯಮ ಪ್ರಿತಿ ನನಗೂ ಇಷ್ಟವಾಯ್ತು ಆದರೆ ಅದು ಕಾರ್ಯ ಸಾಧುವೇ ಎಂಬ ಪ್ರಶ್ನೆ ಈಗ ನನ್ನ ತಲೆ ಕೊರೆಯುತ್ತಿದೆ.
ಮಾಧ್ಯಮಗಳ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ಮತ್ತೊರ್ವ ವಿಚಿತ್ರ ವ್ಯಕ್ತಿ ಪರಿಚಯವಾಗಿದ್ದು ದೂರದ ದಾವಣಗೆರೆಯಲ್ಲಿ. ಖಾಸಗಿ ರೇಡಿಯೋ ಚಾನೆಲ್ ಗಳ ಮಾತಿನ ಹಾವಳಿಯಿಂದ ತತ್ತರಿಸಿ ಹೋಗಿ, ಖಾಸಗಿ ಟಿವಿವಾಹಿನಿಗಳ ಆಧುನಿಕ ಕಾರ್ಯಕ್ರಮಗಳಿಗೆ ಹೊಂದಿಕೊಳ್ಳಲಾಗದೆ ಬಸವಳಿದಿರುವ ದಾವಣಗೆರೆಯ ಶಿಕ್ಷಕ ಸಹ ಮಾಧ್ಯಮಗಳ ಒಪ್ಪು ತಪ್ಪುಗಳ ಕುರಿತಾಗಿ ಬಲವಂತವಾಗಿಯೇ ನನ್ನ ಬಳಿ ಅವಲತ್ತುಕೊಂಡರು ನನ್ನಿಂದಲೂ ಯಾವುದೇ ಸಮಾಧಾನಕರ ಉತ್ತರಗಳು ದೊರೆಯದ ಕಾರಣವೋ ಏನೋ ಒಂದು ತೀರ್ಮಾನಕ್ಕೆ ಬಂದ ಅವರು ನನ್ನ ವಿಳಾಸ ಹಾಗೂ ಸಂಪರ್ಕ ಸಂಖ್ಯೆತೆಗೆದುಕೊಂಡು ಅಂತಿಮವಾಗಿ ಹೇಳಿದ್ದೇನು ಗೊತ್ತಾ? ನೋಡಿ ಸಾರ್ ಯಾವ್ ಯಾವ್ ಟೀವಿಲಿ ಏನೇನು ಅಚಾತುರ್ಯ ನಡಿತಾ ಇದೆ ಅನ್ನೋ ಪಟ್ಟಿ ನನ್ನ ಹತ್ತಿರ ಇದೆ. ಅವುಗಳಿಗೆಲ್ಲ ಪರಿಹಾರವನ್ನೂ ಸಹ ನಾನೇ ತಯಾರಿ ಮಾಡಿಟ್ಟಿದ್ದೇನೆ ನನಗೆ ಎಲ್ಲಾ ಚಾನೆಲ್ ಗಳಲ್ಲೂ ಯಾರ್ಯಾರೋ ಪರಿಚಯ ಇದ್ದಾರೆ ಈಗೆ ನಿಮ್ಮ ಚಾನೆಲ್ ಕಡೆಯಿಂದ ನೀವು ಪರಿಚಯ ಆಗಿದ್ದು ಒಳ್ಳೆದೇ ಆಯ್ತು ನಮಗೆ ಮುಂದಿನ ತಿಂಗಳಿಂದ ಬೇಸಿಗೆ ರಜೆ ಬರೋಬ್ಬರಿ ಎರಡು ತಿಂಗಳು ರಜಾ, ಒಂದಿಪ್ಪತ್ತು ದಿವಸ ಬೆಂಗಳೂರಿಗೆ ಬಂದು ಎಲ್ಲಾ ಚಾನೆಲ್ ಗಳನ್ನೂ ವಿಸಿಟ್ ಮಾಡಿ ಅವರವರ ತಪ್ಪಿನ ಬಗ್ಗೆ ಅರಿವು ಮಾಡಿಕೊಡುವ ಕಾರ್ಯಕ್ರಮ ಇದೆ ಬೆಂಗ್ಳೂರಲ್ಲೇ ಮೀಟ್ ಮಾಡೋಣ ನಿಮ್ ಚಾನೆಲ್ ಗೆ ಬರ್ತಿನಿ ಅಂತ ಹೇಳಿ ಹೊರಟು ಹೋದರು ಆದರೆ ಈ ಶಿಕ್ಷಕರ ಪ್ರಯತ್ನ ಫಲ ನೀಡೀತೇ ಎಂಬ ಚಿಂತೆಗೆ ನಾನು ಬಿದ್ದೆ.
ಮಾದ್ಯಮಗಳ ಧೋರಣೆ ಬಗ್ಗೆ ಗೆ ಜನಸಾಮಾನ್ಯರಲ್ಲಿ ಒಂದು ಅರಿವು ಮೂಡಿರುವುದಂತೂ ಸತ್ಯ. ಜವಾಬ್ದಾರಿ ಅರಿತು ಎಚ್ಚರಿಕೆಯಿಂದ ಕೆಲಸ ಮಾಡುವ ಸರದಿ ಈಗ ನಮ್ಮದು.

No comments: